ಸನ್ಮಾರ್ಗ ವಾರ್ತೆ
ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವು ಪ್ರಕರಣದ ಮರು ತನಿಖೆಗೆ ಚಾಲನೆ ದೊರಕಿದೆ.
ರೋಹಿತ್ ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಅವರ ಜಾತಿಯ ಸತ್ಯ ಹೊರಬರಲಿದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತೆಲಂಗಾಣ ಪೊಲೀಸರು ತನಿಖೆ ಮುಚ್ಚುಗಡೆ ವರದಿಯಲ್ಲಿ ತಿಳಿಸಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ವೇಮುಲಾ ಜನವರಿ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವೇಮುಲಾ ಕುಟುಂಬ ತಮ್ಮ ಜಾತಿ ಪ್ರಮಾಣ ಪತ್ರಗಳನ್ನು ಫೋರ್ಜರಿ ಮಾಡಿದೆ ಎಂದು ವರದಿ ಆರೋಪಿಸಿತ್ತು.
ಆದರೆ ರೋಹಿತ್ ವೇಮುಲಾರ ತಾಯಿ ಹುಟ್ಟಿನಿಂದ ದಲಿತರಾಗಿದ್ದಾರೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯೊಬ್ಬರು ಅವರನ್ನು ದತ್ತು ಪಡೆದುಕೊಂಡಿದ್ದರು ಎಂದು ವೇಮುಲಾ ಕುಟುಂಬ ಹೇಳಿದೆ.
ಈ ಪ್ರಕರಣದಲ್ಲಿ ಇನ್ನಷ್ಟು ವಿಚಾರಣೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಡಿಜಿಪಿ ರವಿ ಗುಪ್ತಾ ಹೇಳಿದ್ದಾರೆ. ಈ ಪ್ರಕರಣದ ಮುಚ್ಚುಗಡೆ ವರದಿಯನ್ನು ರಾಜ್ಯದಲ್ಲಿ ಕಳೆದ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಮುಂಚೆಯೇ ಸಿದ್ಧಪಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ತೆಲಂಗಾಣ ಪೊಲೀಸರ ವರದಿಯಲ್ಲಿ ಪ್ರಕರಣದ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.