ಕೋವಿಡ್ ಆರ್ಥಿಕ ಸಂಕಷ್ಟದ ಮಧ್ಯೆಯೂ ಮಿಡಿದ ಮಾನವೀಯ ಹೃದಯಗಳು: ಕೇರಳದ ಮಗುವಿನ ಚಿಕಿತ್ಸೆಗೆ ಕೇವಲ ಆರು ದಿನದಲ್ಲಿ 18 ಕೋಟಿ ಕಲೆಕ್ಷನ್…!

0
1875

ಸನ್ಮಾರ್ಗ ವಾರ್ತೆ

ಕಣ್ಣೂರು: ಕೋವಿಡ್ ಲಾಕ್ ಡೌನ್ ನಿಂದ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇರುವುದು ಸುಳ್ಳಲ್ಲ‌. ಈ ಬಿಕ್ಕಟ್ಟಿನ ನಡುವೆಯೂ ಮುಹಮ್ಮದ್ ಎಂಬ ಒಂದೂವರೆ ವರ್ಷದ ಮಗುವಿನ ಪ್ರಾಣ ಉಳಿಸಲು ಹೃದಯವಂತ ಜನತೆ ಒಗ್ಗೂಡಿದಾಗ ಅಪರೂಪದ ಖಾಯಿಲೆಯ ಚಿಕಿತ್ಸೆಗಾಗಿ ಕೇವಲ ಆರು ದಿನಗಳಲ್ಲಿ ಬರೋಬ್ಬರಿ 18 ಕೋಟಿ ರೂ. ಹರಿದು ಬಂದಿದೆ. ಇದು ಕಟ್ಟುಕಥೆ ಅಲ್ಲ. ನೈಜ ಸಂಗತಿ.

ಮಗುವಿನ ಚಿಕಿತ್ಸೆಗಾಗಿ ಮಿಡಿದ ಹೃದಯಗಳಿಗೆ ಧನ್ಯವಾದ ಅರ್ಪಿಸಿರುವ ಮಗುವಿನ ಚಿಕಿತ್ಸೆಯ ಆರ್ಥಿಕ ನೆರವಿನ ಹೊಣೆಗಾರಿಕೆ ವಹಿಸಿರುವ ಜನಪ್ರತಿನಿಧಿಗಳನ್ನೊಳಗೊಂಡ ಚಾರಿಟಿ ಫೌಂಡೇಶನ್ ಇನ್ನು ಯಾರೂ ಹಣ ಕಳುಹಿಸಬೇಕಾಗಿಲ್ಲ ಎಂದು ತಿಳಿಸಿದ್ದು, ಎರಡೂ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಿದ್ದಾರೆ. ತಲಶ್ಶೇರಿಯ ಶಾಸಕ ಎಂ. ವಿಜಿನ್ ನೇತೃತ್ವದಲ್ಲಿ ಈ ಕಮಿಟಿಯನ್ನು ಆರಂಭಿಸಲಾಗಿತ್ತು.

ಸೈನಲ್ ಮಸ್ಕ್ಯುಲರ್ ಅಟ್ರೋಫಿ(SMA) ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಕೇರಳದ ಕಣ್ಣೂರಿನ ಮಾಟೂಲ್ ಮೂಲದ ಒಂದೂವರೆ ವರ್ಷದ ಮಗು ಮುಹಮ್ಮದ್ ನ ಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಈ ಖಾಯಿಲೆಯ ಚಿಕಿತ್ಸೆಗಾಗಿ ನೀಡುವ ಒಂದು ಡೋಸ್ ಲಸಿಕೆಯ ಬೆಲೆ ಬರೋಬ್ಬರಿ 18 ಕೋಟಿ! ಇದು ವಿಶ್ವದ ಅತ್ಯಂತ ದುಬಾರಿ ಔಷಧಿ ಎನ್ನಲಾಗಿದೆ.

ಕೇರಳದ ಕಣ್ಣೂರಿನ ಮಾಟೂಲ್ ಮೂಲದ ರಫೀಕ್ ಮರಿಯಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಅಫ್ರಾ ಹಿರಿಯವಳು. ಹದಿನೈದು ವರ್ಷದ ಅಫ್ರಾ ಕೂಡ ಇದೇ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ನಡುವೆ ಅಫ್ರಾಳ ಕಿರಿಯ ಸಹೋದರ ಮುಹಮ್ಮದ್ ನಿಗೂ ಸ್ಪೆನಲ್ ಮಸ್ಕುಲರ್ ಅಟ್ರೋಫಿ ಖಾಯಿಲೆ ದೃಢಪಟ್ಟಿದೆ.

ಈ ಬಗ್ಗೆ ಸಮಾಜ ಸೇವಕರೊಬ್ಬರು ಕುಟುಂಬದ ಪರಿಸ್ಥಿತಿ ತಿಳಿದು ಸಾಮಾಜಿಕ ಜಾಲತಾಣದಲ್ಲಿ ಧನಸಹಾಯ ಮಾಡುವಂತೆ ವಿನಂತಿಸಿದ್ದರು. ಇದಕ್ಕೂ ಮೊದಲು ಮಗುವಿನ ಸಹೋದರಿ ಕೂಡ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು. ಭಾರತ, ಗಲ್ಫ್ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ಮೂಲಗಳಿಂದ ಕೇವಲ 6 ದಿನಗಳಲ್ಲಿ ಬೃಹತ್ ದೇಣಿಗೆ ಹರಿದುಬಂದಿದೆ.

ಮಗುವಿಗೆ ಎರಡು ವರ್ಷ ತುಂಬಲು ಇನ್ನು ಕೇವಲ ನಾಲ್ಕು ತಿಂಗಳು ಬಾಕಿ ಇದ್ದು, ಇದರೊಳಗೆ ಒಂದು ಲಸಿಕೆ ಹಾಕಿದರೆ ಮಗು ಬದುಕುಳಿಯಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ವಿದೇಶದಿಂದ ಲಸಿಕೆ ತರುವ ಪ್ರಕ್ರಿಯೆ ಆರಂಭಗೊಂಡಿದೆ. ಶೀಘ್ರವೇ ಕೇರಳಕ್ಕೆ ಲಸಿಕೆ ಬರುವ ನಿರೀಕ್ಷೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.