ಮಾನವೀಯತೆಯ ಹರಿಕಾರ ಪ್ರವಾದಿ ಮುಹಮ್ಮದ್(ಸ)

0
1591

🖋ಸಲೀಮ್ ಬೋಳಂಗಡಿ

ಎಲ್ಲ ರೀತಿಯ ಕೆಡುಕುಗಳಿಂದ ಮತ್ತು ಅನಾಚಾರಗಳಿಂದಾವೃತವಾದ ಒಂದು ಸಮಾಜವನ್ನು ತನ್ನ ಇಪ್ಪತ್ತಮೂರು ವರ್ಷಗಳ ನಿರಂತರ ಪ್ರಯತ್ನಗಳಿಂದ ವಿಶ್ವಕ್ಕೆ ಮಾದರಿ ಸಮುದಾಯವನ್ನಾಗಿ ರೂಪಿಸಿದ ಇತಿಹಾಸ ಪುರುಷ ಪ್ರವಾದಿ ಮುಹಮ್ಮದ್(ಸ)ರ ವಿಶ್ವ ಗುರುವಾಗಿದ್ದಾರೆ. ನಲುವತ್ತು ವರ್ಷಗಳ ತನಕ ಆ ಅರ ಬರ ಮಧ್ಯೆ ಜೀವಿಸಿ ಅಮೀನ್, ಸಾದಿಕ್ (ಸತ್ಯಸಂಧ, ಪ್ರಾಮಾಣಿಕ) ಎಂದು ಕರೆಯಲ್ಪಟ್ಟ ಮುಹಮ್ಮದ್(ಸ)ರಿಗೆ ಅಲ್ಲಾಹ ನಿಂದ ಪ್ರವಾದಿತ್ವ ದೊರೆಯಿತು. ಅಲ್ಲಾಹನ ಸಂದೇಶವಾಹಕರಾಗಿ ನಿಯುಕ್ತಗೊಂಡ ಬಳಿಕ ಈ ಮಹಾ ಮಾನವತಾವಾದಿ  ಹಿಂದಿರುಗಿ ನೋಡಲಿಲ್ಲ. ಅಲ್ಲಾಹನು ತನಗೆ ನೀಡಿದಂತಹ ಮಹತ್ತರವಾದ ಹೊಣೆಗಾರಿಕೆಯನ್ನು ನಿಭಾಯಿಸಲು ಕಟಿ ಬದ್ಧರಾಗಿ ಟೊಂಕ ಕಟ್ಟಿ ನಿಂತರು.

ವಿಗ್ರಹಾರಾಧಕರಾಗಿದ್ದ ಅರಬರ ಅಂದಿನ ಸಂಸ್ಕೃತಿಯೇ ಅಂಧಕಾರದಿಂದ ತುಂಬಿತ್ತು. ಮಹಿಳೆಯರನ್ನು ಗುಲಾಮರನ್ನಾಗಿ ಕಾಣ ಲಾಗುತ್ತಿತ್ತು. ಹೆಣ್ಣು ಹುಟ್ಟಿದ ತಕ್ಷಣ ಹೂಳಲಾಗುತ್ತಿತ್ತು. ಕುಡಿತ, ಜೂಜು, ಮೋಜು ಮಸ್ತಿ ಎಲ್ಲವೂ ವ್ಯಾಪಕವಾಗಿದ್ದ ಒಂದು ಜನಾಂಗವನ್ನು ಬದಲಿಸುವುದು ಸಾಮಾನ್ಯ ಕೆಲಸವೇ? ಊಹಿಸಿ ನೋಡಿ. ಅಲ್ಲಾಹನ ಅಪಾರವಾದ ಅನುಗ್ರಹದಿಂದ ಪ್ರವಾದಿ ಮುಹಮ್ಮದ್(ಸ)ರ ಕಠಿಣ ಪರಿಶ್ರಮ ಅನುಯಾಯಿಗಳ ಅಪಾರವಾದ ತ್ಯಾಗ ಮನೋಭಾವಗಳು ಈ ಹಾದಿ ಯನ್ನು ಸುಗಮಗೊಳಿಸಿತ್ತು. ಪ್ರವಾದಿ ವರ್ಯರನ್ನು(ಸ) ಬೇರೆಯೇ ಒಂದು ನಾಡಿಗೆ ಪ್ರವಾದಿಯಾಗಿ ನಿಯೋಜಿಸಿರ ಲಿಲ್ಲ. ಬದಲಾಗಿ ಅವರು ಹುಟ್ಟಿ ಬೆಳೆದ 40 ವರ್ಷಗಳ ಕಾಲ ಬಾಳಿದ ಒಂದು ಸಮಾಜದ ಮಧ್ಯೆಯೇ ಅವರನ್ನು ಪ್ರವಾದಿಯನ್ನಾಗಿ ನಿಯೋಜಿಸಲಾಯಿತು. ಇನ್ನು ಪ್ರವಾದಿವರ್ಯರು(ಸ) ಕೂಡಾ ನಾನು ಇಲ್ಲಿಯೇ ಹುಟ್ಟಿ ಬೆಳೆದವನು ನನ್ನಿಂದ ಇಲ್ಲಿ ಸಾಧ್ಯವಾಗಲಿಕ್ಕಿಲ್ಲ. ಬೇರೆ ಎಲ್ಲಿಗಾದರೂ ನಿಯೋಜಿಸು ಎಂಬ ಬೇಡಿಕೆಯನ್ನು ಇಡಲಿಲ್ಲ. ಬದಲಾಗಿ ಅದನ್ನು ನಿರ್ವಹಿಸಲು ಸಿದ್ಧರಾದರು. ಅಲ್ಲಾಹನು ಹೊರಿಸಿದ ಆ ಜವಾಬ್ದಾರಿ ಯನ್ನು ನಿಭಾಯಿಸುವಲ್ಲಿ ಯಶಸ್ವಿ ಯಾದರು. ಅನಾಚಾರದ ಅಂಧಕಾರದಲ್ಲಿ ಮುಳುಗಿದ ಆ ಅರಬ್ ಸಮಾಜವನ್ನು ಮಾದರೀ ಸಮಾಜವಾಗಿ ಪರಿವರ್ತಿಸಿದರು.

ಜೀವನದ ಸಕಲ ರಂಗಗಳಲ್ಲೂ ಅವರು ಶಿಷ್ಟಾಚಾರ ಕಲಿಸಿದರು. ಮೂತ್ರದ ಹನಿಗಳು ಹಾರದಂತೆ ಮೆದುವಾದ ನೆಲದಲ್ಲಿಯೇ ಕುಳಿತು ಮೂತ್ರ ಮಾಡಿರಿ. ನೆಲವು ಕುಳಿತುಕೊಳ್ಳಲು ಆಯೋಗ್ಯವೆಂದಾದಲ್ಲಿ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಬಹುದು. ನದಿ, ಕಾಲುವೆ, ಸಾರ್ವಜನಿಕ ರಸ್ತೆ ಮತ್ತು ನೆರಳಿನ ರಸ್ತೆಗಳಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿರಿ. ಇವೆಲ್ಲವೂ ಇತರರಿಗೆ ತೊಂದರೆಯಾಗುತ್ತದೆ. ಇದು ಶಿಷ್ಟಾಚಾರ ಮತ್ತು ಸಭ್ಯತೆಗೂ ವಿರುದ್ಧವಾಗಿದೆ. ಈ ರೀತಿಯ ಶಿಷ್ಟಾಚಾರಗಳನ್ನು ಕಲಿಸಿದರು. ಜೀವನದ ಯಾವ ರಂಗವನ್ನೂ ಅವರು ನಿರ್ಲಕ್ಷಿಸಿರಲಿಲ್ಲ. ಆರ್ಥಿಕ, ಸಾಮಾಜಿಕ, ನೈತಿಕ, ಸಾಂಸ್ಕøತಿಕ ಎಲ್ಲ ರಂಗಗಳಲ್ಲೂ ಅವರು ಬದಲಾವಣೆಯ ವಕ್ತಾರರಾದರು. ಇಹಲೋಕದ ಸುಖಾಡಂಬರಗಳಿಗೆ ಮಾರು ಹೋಗಿ ಪರ ಲೋಕವನ್ನು ಹಾಳುಮಾಡಬೇಡಿರಿ ಎಂದು ಸದಾ ಎಚ್ಚರಿಸುತ್ತಿದ್ದರು. ಈ ಲೋಕವೆಂಬುದು ತಂಗುದಾಣವಾಗಿದೆ. ಸ್ವಲ್ಪ ಕಾಲ ಇಲ್ಲಿದ್ದು ಹೋಗಬೇಕಾಗಿದೆ. ಆದ್ದರಿಂದ ನೀವು ಪ್ರಯಾಣಿಕನಂತೆ ಜೀವಿಸಿರಿ. ಶಾಶ್ವತವಾದ ಜೀವನದ ಯಶಸ್ವಿಗಾಗಿ ಸಿದ್ಧತೆ ನಡೆಸಿ ಕೊಳ್ಳಿರಿ ಎಂದು ಸಾರಿದರು. ಮಾತ್ರವಲ್ಲ ಅದರಂತೆ ಬದುಕಿ ತೋರಿಸಿದರು.

ಪ್ರವಾದಿ ಮುಹಮ್ಮದ್(ಸ)ರ ಜೀವನವೇ ಜನರನ್ನು ಅತ್ಯಂತ ಪ್ರಭಾವಗೊಳಿಸಿತ್ತು. ಮಕ್ಕಾದ ಸಂಪೂರ್ಣ ಆಡಳಿತ ಪ್ರವಾದಿವರ್ಯರ(ಸ) ತೆಕ್ಕೆಯಲ್ಲಿದ್ದಾಗಲೂ ಪ್ರವಾದಿವರ್ಯರ(ಸ) ಬೆನ್ನ ಮೇಲೆ ಚಾಪೆಯ ಗುರುತುಗಳು ಕಂಡು ಬಂದಿದ್ದವು. ಪ್ರವಾದಿವರ್ಯರ(ಸ) ಬೆನ್ನಲ್ಲಿ ಚಾಪೆಯ ಗುರುತು ನೋಡಿ ಕಳವಳಕ್ಕೀಡಾದ ಉಮರ್ ಖತ್ತಾಬ್‍ರವರು ದಪ್ಪಗಿನ ಬಟ್ಟೆ ತರಲೇ ಎಂದು ಕೇಳಿದಾಗ, ನಯವಾಗಿ ತಿರಸ್ಕರಿಸಿದರು. ಅಷ್ಟೊಂದು ಸರಳತೆಯು ಅವರ ಜೀವನದಲ್ಲಿ ಮೇಳೈಸಿತ್ತು. ಇಂತಹ ಹಲವಾರು ಘಟನೆಗಳನ್ನು ಪ್ರವಾದಿವರ್ಯರ(ಸ) ಇತಿಹಾಸದಲ್ಲಿ ಕಾಣಬಹುದಾಗಿದೆ. ಹೀಗೆ ಪ್ರವಾದಿ ಮುಹಮ್ಮದ್(ಸ)ರು ಜೀವಂತ ಕುರ್‍ಆನ್ ಆಗಿದ್ದರು. ಕುರ್‍ಆನಿನ ಎಲ್ಲಾ ಸಂದೇಶಗಳು ಅವರ ಜೀವನದಲ್ಲಿ ಪ್ರಕಟವಾಗಿತ್ತು.

ಆದ್ದರಿಂದ ಅವರ ಜೀವನ ಅಂದಿಗೂ ಇಂದಿಗೂ ಎಂದೆಂದಿಗೂ ಲೋಕಾಂತ್ಯದ ವರೆಗೂ ಮಾದರಿಯಾಗಿದೆ. ಟರ್ಕಿಯ ಅಧ್ಯಕ್ಷ ರಾದ ರಜಬ್ ತಯ್ಯಿಬ್ ಉರ್ದುಗಾನ್‍ರೊಂದಿಗೆ ಓರ್ವರು ನಿಮ್ಮ ಈ ಸಮಾಜ ಮುಖಿ ಕೆಲಸಗಳಿಗೆ ಪ್ರೇರಣೆ ಏನು ಎಂದು ಕೇಳಿದಾಗ ಪ್ರವಾದಿ ಮುಹಮ್ಮದ್(ಸ)ರ ಜೀವನ ಸಂದೇಶಗಳೇ ಪ್ರೇರಣೆ ಎಂದು ಹೇಳಿದರು. ಆದ್ದರಿಂದ ಅಂದು ನೀಡಿದ ಆ ಮಹಾನ್ ಸಂದೇಶವು ಇಂದಿಗೂ ಮಾದರಿ ಯೆಂಬುದರ ಉದಾಹರಣೆಯಾಗಿದೆ.

ಪ್ರವಾದಿವರ್ಯರು(ಸ) ನ್ಯಾಯದ ಪ್ರತಿಪಾದಕರಾಗಿದ್ದರು. ಪ್ರತಿಷ್ಠಿತ ಗೋತ್ರದ ಮಹಿಳೆಯೊಬ್ಬಳು ಕಳ್ಳತನದ ಆರೋಪದಲ್ಲಿ ಸಿಕ್ಕಿ ಬಿದ್ದಾಗ ಕೆಲವರು ತಮ್ಮ ಪ್ರಭಾವ ಬಳಸಿ ಆ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದರು. ಆಗ ಪ್ರವಾದಿ ಮುಹಮ್ಮದ್(ಸ)ರು ಹೇಳಿದ ಮಾತುಗಳು ಸ್ಮರಣೀಯವಾಗಿದೆ. “ನನ್ನ ಪುತ್ರಿ ಫಾತಿಮಾ ಕದ್ದರೂ ಸರಿಯೇ ನಾನು ಆಕೆಯ ಕೈ ಕತ್ತರಿಸುವೆನು” ಎಂದು ಬಹಿರಂಗವಾಗಿ ಹೇಳಿದರು. ಮುಸ್ಲಿಮ್ ಹೆಸರಿನ ವ್ಯಕ್ತಿಯೊಬ್ಬ ಯುದ್ಧ ಕವಚವನ್ನು ಕದ್ದು ಯಹೂದಿಯೋರ್ವನ ಮೇಲೆ ಆರೋಪ ಹೊರಿಸಲು ಯತ್ನಿಸಿದಾಗ ಆ ಯಹೂದಿಯ ಪರವಾಗಿ ಕುರ್‍ಆನಿನ ಹತ್ತು ಸೂಕ್ತಗಳು ಅವತೀರ್ಣಗೊಂಡು ಯಹೂದಿಯ ನಿರಪರಾಧಿತ್ವವನ್ನು ಸಾಬೀತು ಪಡಿಸಿದ ಉದಾಹರಣೆಯೂ ಪ್ರವಾದಿವರ್ಯರ(ಸ) ಜೀವನದಲ್ಲಿ ಘಟಿಸಿದೆ. ಹೀಗೆ ನ್ಯಾಯದ ಪ್ರತಿಪಾದಕರಾಗಿ ಮಾನವೀಯತೆಯ ಹರಿಕಾರರಾಗಿದ್ದರು.

ಯಹೂದಿಯೋರ್ವನ ಶವಯಾತ್ರೆ ಹೋಗುವಾಗ ಎದ್ದು ನಿಲ್ಲುವಂತೆ ತನ್ನ ಅನುಚರ ರಿಗೆ ಆದೇಶಿಸಿದರು. ಆಗ ಅನುಚರರು ಅದು ಯಹೂದಿಯ ಶವಯಾತ್ರೆಯಲ್ಲವೇ ಎಂದು ಕೇಳಿದಾಗ, ಆತನೂ ಕೂಡಾ ಓರ್ವ ಮನುಷ್ಯನಲ್ಲವೇ ಎಂದು ಹೇಳಿದರು. ಹೀಗೆ ಮಾನ ವೀಯತೆಯ ಸಂದೇಶ ಸಾರಿದರು. ಮಕ್ಕಾ ವಿಜಯದ ಸಂದರ್ಭದಲ್ಲಿ ಕರಿಯ ಗುಲಾಮರಾಗಿದ್ದ ಬಿಲಾಲ್‍ರನ್ನು ಕರೆದು ಪ್ರಥಮ ಅದಾನ್ ಕೊಡಲು ಆದೇಶಿಸಿದರು. ಆಗ ಇಸ್ಲಾಮಿನ ನಾಯಕರಾಗಿದ್ದ ಅಬೂಬಕರ್, ಉಮರ್, ಉಸ್ಮಾನ್, ಅಲಿ ಮುಂತಾದ ಸಹಾಬಿಗಳೂ ಇದ್ದರು. ಆದರೆ ಆ ಪ್ರಥಮ ಅದಾನ್ ಕರೆಯನ್ನು ಮೊಳಗಿಸಲು ಬಿಲಾಲ್‍ರನ್ನು ಕರೆದರು. ಬಿಲಾಲ್ ಬಂದರು. ಅವರು ಕಅಬಾದ ಮೇಲೇರಿ ಅದಾನ್ ಮೊಳಗಿಸಿದರು. ಅಲ್ಲಾಹು ಅಕ್ಬರ್ (ಅಲ್ಲಾಹನು ಏಕೈಕನು) ಎಂಬ ಘೋಷಣೆಯು ಅಂದಿನಿಂದ ಇಂದಿನ ತನಕವೂ ನಿರಂತರ ವಿಶ್ವದಾದ್ಯಂತ ಮೊಳಗುತ್ತಿದೆ.

ಓರ್ವ ಕರಿಯ ಗುಲಾಮ ರಾಗಿದ್ದ ಬಿಲಾಲ್‍ರ ಆ ಕರ್ಣಾನಂದಕರ ಘೋಷಣೆಯಲ್ಲಿ ಮಹತ್ತರವಾದ ಸಂದೇಶವಿತ್ತು. ಅದನ್ನು ಪ್ರವಾದಿ ವರ್ಯರು(ಸ) ಜನತೆಗೆ ಸಾರಿದರು. ಮನುಷ್ಯರೆಲ್ಲರೂ ಸಮಾನರು, ಅವರಲ್ಲಿ ಬಡವ ಬಲ್ಲಿದ ಕರಿಯ ಬಿಳಿಯನೆಂಬ ಭೇದ-ಭಾವವಿಲ್ಲ. ಅವರು ಭಯಪಡ ಬೇಕಾದುದು ಅವರ ಸೃಷ್ಟಿಕರ್ತನಿಗೆ ಮಾತ್ರವೆಂಬ ಸಂದೇಶವನ್ನು ಕುರ್‍ಆನ್ ನೀಡುತ್ತದೆ. ಈ ಸಂದೇಶದಿಂದ ವ್ಯತಿಚಲಿಸಿದಾಗ ಮಾನವ ನಿರ್ಮಿತ ಕಾನೂನುಗಳು ಉದ್ಭವವಾಗುತ್ತದೆ. ಬಡ್ಡಿಯೂ ಸಾವತ್ರಿಕವಾಗುತ್ತದೆ. ವ್ಯಭಿಚಾರಕ್ಕೂ ಅನುಮತಿ ದೊರೆಯುತ್ತಿದೆ. ಮಾತ್ರವಲ್ಲ ಮದ್ಯವು ಸಮಾಜದ ಅನಿಷ್ಟವೆಂಬ ಅರಿವಿದ್ದರೂ ಅದನ್ನು ವರಮಾನ ಮಾರ್ಗವಾಗಿ ಪರಿಗಣಿಸಲಾಗುತ್ತದೆ.

ಸೃಷ್ಟಿಕರ್ತನ ನಿಯಮ ನಿರ್ದೇಶನಗಳಿಂದ ದೂರವಿದ್ದಾಗ ಇದು ಅನಿವಾರ್ಯವಾಗಿ ಇಂತಹ ಕರ್ಮಗಳ ದಾಸನಾಗಿ ಮಾರ್ಪಡುತ್ತಾನೆ. ಪ್ರವಾದಿ ಮುಹಮ್ಮದ್(ಸ) ಈ ಸಂದೇಶಗಳಿಂದ ವಿಮುಖನಾಗಿ ಇಹಲೋಕದ ಸುಖಾಡಂಬರಗಳಿಗೆ ಮಾರು ಹೋಗಿ ಪರಲೋಕದ ಬಗ್ಗೆ ನಿರ್ಲಕ್ಷ್ಯ ಹೊಂದಿ ನಾನು ಪ್ರವಾದಿ ಮುಹಮ್ಮದ್(ಸ)ರ ಅನುಯಾಯಿ ಎಂದು ಹೇಳಿಕೊಳ್ಳುವುದು ವಂಚನೆಯಾಗಿದೆಯೆಂಬ ವಾಸ್ತವವನ್ನು ಜನರು ಅರಿಯಬೇಕಾಗಿದೆ. ಪ್ರವಾದಿ ಯವರ(ಸ) ಅನುಯಾಯಿಗಳಾಗಿ ಆಡಂಬರ ಅದ್ದೂರಿತನದಲ್ಲಿ ಸಮು ದಾಯ ಮೆರೆಯುತ್ತಿರುವುದು ಅಪಾಯ ಕಾರಿ ಲಕ್ಷಣವಾಗಿದೆ. ಪ್ರವಾದಿ ವರ್ಯರ(ಸ) ನೈಜ ಸಂದೇಶವು ನಮ್ಮ ಸಮುದಾಯದಿಂದ ಪ್ರತಿಫಲಿಸಬೇಕಾಗಿದೆ. “ವುಝೂ ನಿರ್ವಹಿಸುವಾಗ ಹರಿಯು ತ್ತಿರುವ ಹೊಳೆಯಿಂದಾದರೂ ಸರಿ. ಅಗತ್ಯವಾದಷ್ಟು ಮಾತ್ರ ನೀರು ಬಳಸಿರಿ” ಎಂಬ ಸಂದೇಶ ನೀಡಿದವರು ನಮ್ಮ ಪ್ರವಾದಿ ಮುಹಮ್ಮದ್(ಸ) ಆದ್ದರಿಂದ ದುಂದು ವೆಚ್ಚಗಳಿಗೆ ಸಮುದಾಯ ಕಡಿವಾಣ ಹಾಕಬೇಕಾಗಿದೆ. ಹೀಗೆ ಪ್ರವಾದಿ ಮುಹಮ್ಮದ್(ಸ)ರು ಎಲ್ಲ ರಂಗಗಳಿಗೂ ಮಾದರಿಯಾಗಿದ್ದಾರೆ. ಮಾನವೀಯತೆಯ ಹರಿಕಾರ ಮಾನವಕುಲದ ವಿಮೋಚಕ ನೆಂಬ ಹೆಸರು ಅವರಿಗೆ ಅರ್ಥಪೂರ್ಣ ವಾಗಿ ಸಲ್ಲುತ್ತದೆ.