ಸುಳ್ಳು ಹೇಳಲು ಮೈಸೂರಿಗೆ ಬಂದ ಶಾ: ಸಿದ್ದರಾಮಯ್ಯ ಲೇವಡಿ

0
1409

ಬೆಂಗಳೂರು: ಸರ್ಕಾರದ ಬಗ್ಗೆ, ಜಾರಿಗೆ ತಂದಿರುವ ಕಾರ್ಯಕ್ರಮ ಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ನಾವು ನುಡಿದಂತೆ ನಡೆದಿದ್ದೇವೆ. ಹೀಗಾಗಿ ಮಾಧ್ಯಮಗಳು ನಡೆಸಿರುವ ಸಮೀಕ್ಷೆಗಳಲ್ಲಿ ಜನ ತೃಪ್ತಿ ವ್ಯಕ್ತಪಡಿಸಿದ್ದಾರೆ.

ನಾನು ರಾಜ್ಯದ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ ಕಾರ್ಯಕ್ರಮ ದಲ್ಲಿ ಜನ ಉತ್ಸಾಹದಿಂದ ಭಾಗವಹಿಸಿದ್ದರು. ಪ್ರತಿಕ್ರಿಯೆ ಸಹ ಉತ್ತಮವಾಗಿತ್ತು.

ಸಮೀಕ್ಷೆಗಳಲ್ಲಿ ನನ್ನ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿರುವ ರಾಜ್ಯದ ಜನತೆಗೆ ನಾನು ಆಭಾರಿಯಾಗಿದ್ದೇನೆ. ಅವರಿಗೆ ಹೃದಯಪೂರ್ವಕ ಕೃತಜ್ಞತೆ ಅರ್ಪಿಸುತ್ತೇನೆ. ಜನ ಮತ್ತೊಮ್ಮೆ ಆಶೀರ್ವಾದ ಮಾಡುವ ವಿಶ್ವಾಸವಿದೆ.

ಪದ್ಮಾವತ್ ಚಿತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಗಲಾಟೆಗಳಾಗುತ್ತಿದೆ. ಸರ್ಕಾರ ಇದೆಯೇ ಎನ್ನುವ ಮಟ್ಟಕ್ಕೆ ಅಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಸುಪ್ರೀಂಕೋರ್ಟ್ ಆದೇಶವನ್ನೂ ಉಲ್ಲಂಘಿಸಿ ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಆದರೆ, ಸರ್ಕಾರ ಮೂಕ ಪ್ರೇಕ್ಷಕ‌ ಆಗಿದೆ.

ಈ ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ ಸಾಂತ್ವನ ಹೇಳದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿಗಳಿಗೆ ಬುದ್ಧಿ ಹೇಳುವುದನ್ನು ಬಿಟ್ಟು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸುಳ್ಳು ಹೇಳಲು ನಿನ್ನೆ ಮೈಸೂರಿಗೆ ಬಂದಿದ್ದಾರೆ.

ಚಿತ್ರದುರ್ಗ, ಬೆಂಗಳೂರು, ಮೈಸೂರಿನಲ್ಲಿಯೂ ಅದೇ ಭಾಷಣ. 20 ನಿಮಿಷ ನನ್ನನ್ನು ಟೀಕಿಸುವುದು- ಸಿದ್ದರಾಮಯ್ಯ

ಅಮಿತ್ ಶಾ ಅವರು ಗುಜರಾತ್ ನವರು. ನಾನು ಕನ್ನಡ ನಾಡಿನ, ಈ ಮಣ್ಣಿನ ಮಗ. ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದು ನನ್ನನ್ನು ಬೈದರೆ ರಾಜ್ಯದ ಜನ ಸುಮ್ಮನೆ ಇರುವರೇ? ಅವರು ಬೈದಷ್ಟೂ ನನಗೆ ಒಳ್ಳೆಯದು. ಅವರು ಸತ್ಯ ಹೇಳಿದರೆ ಪರವಾಗಿಲ್ಲ, ಬರೇ ಸುಳ್ಳು ಹೇಳುವುದು ಶಾ ಕೆಲಸ.‌

ಶಾ ಮತ್ತು ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಇಬ್ಬರೂ ಜೈಲು ಹಕ್ಕಿಗಳು. ಅವರು ನಮ್ಮ ಬಗ್ಗೆ ಮಾತನಾಡಿದರೆ ಜನ ನಗುವುದಿಲ್ಲವೇ ?

ಸರ್ಕಾರದ ಬಗ್ಗೆ ಚಾರ್ಜ್ ಶೀಟ್ ಹಾಕುತ್ತೇವೆ ಎನ್ನುತ್ತಾರೆ. ಕಾನೂನು ಬಾಹಿರವಾಗಿ ಏನಾದರೂ ಮಾಡಿದ್ದರೆ ತಾನೆ ಚಾರ್ಜ್ ಶೀಟ್ ಹಾಕುವುದು.

ಯಡಿಯೂರಪ್ಪ ಅವರು ತಮ್ಮ ಪರಿವರ್ತನಾ ಯಾತ್ರೆಯುದ್ದಕ್ಕೂ ಒಂದೊಂದೇ ಬಿಡ್ತೇನೆ ಎಂದು ಪುಂಗಿ ಊದಿದರು. ಆದರೆ, ಅವರ ಬುಟ್ಟಿಯಿಂದ ಹಾವು ಹೊರಗೆ ಬರಲೇ ಇಲ್ಲ.

ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡುವಷ್ಟು ಸಣ್ಣತನ ನಮ್ಮಲ್ಲಿ ಇಲ್ಲ. ರಾಜಕೀವಾಗಿ ವಿರೋಧಿಗಳ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು. ಆದರೆ, ಸುಳ್ಳುಗಳಿಗೆ ಗೌರವ ನೀಡುವುದಿಲ್ಲ.