ಏ ಕೆ ಕುಕ್ಕಿಲರ ‘ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ 6 ಪ್ರಶ್ನೆಗಳು’-ಕೃತಿ ಬಿಡುಗಡೆ

0
815

ಸನ್ಮಾರ್ಗ ವಾರ್ತೆ

ಮಂಗಳೂರು, ಫೆ.5: ಶಾಂತಿ ಪ್ರಕಾಶನ ಪ್ರಕಟಿಸಿರುವ, ಸನ್ಮಾರ್ಗ ಸಂಪಾದಕ ಎ.ಕೆ. ಕುಕ್ಕಿಲ ಬರೆದ ‘ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ 6 ಪ್ರಶ್ನೆಗಳು’ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮವು ನಗರದ ಸಹಕಾರಿ ಸದನದ ಶಾಂತಿ ಪ್ರಕಾಶನದ ಸಭಾಂಗಣದಲ್ಲಿ ನಡೆಯಿತು.

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ‘ ಶಾಂತಿ ಪ್ರಕಾಶನ ಕನ್ನಡ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದೆ.

ತಂತ್ರಜ್ಞಾನ ಯುಗದಲ್ಲಿ ಓದುಗರ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ವರ್ಷಂ ಪ್ರತಿ ಹೆಚ್ಚೆಚ್ಚು ಕೃತಿಗಳು ಬಿಡುಗಡೆಯಾಗುತ್ತಿವೆ. ಒಳ್ಳೆಯ ಕೃತಿಗಳಿಗೆ ಸದಾ ಓದುಗರಿದ್ದಾರೆ ಎಂದೇ ಇದು ಸೂಚಿಸುತ್ತದೆ. ಆರೋಗ್ಯಪೂರ್ಣ ಸಮಾಜಕ್ಕೆ ಉತ್ತಮ ಸಾಹಿತ್ಯ ಕೃತಿಗಳ ಅಗತ್ಯವಿದೆ. ಎ.ಕೆ. ಕುಕ್ಕಿಲ ಅವರ ಈ ಕೃತಿ ಸಮಾಜಕ್ಕೆ ಕೊಡುಗೆಯಾಗಲಿ’ ಎಂದು ಅಭಿಪ್ರಾಯಪಟ್ಟರು.

ಕೃತಿಯ ಬಗ್ಗೆ ಮಾತನಾಡಿದ ಸಾಹಿತಿ ಅರವಿಂದ ಚೊಕ್ಕಾಡಿ ‘ ಮುಸ್ಲಿಂ ಮುಸ್ಲಿಂ ಆಗಿಯೇ ಮಾತಾಡಬೇಕು, ಹಿಂದು ಹಿಂದುವಾಗಿಯೇ ಮಾತಾಡಬೇಕು. ಹಿಂದೂ ಮುಸ್ಲಿಮರು ಜೊತೆಯಾಗಿ ಬಾಳಿದ ಸಾವಿರ ವರ್ಷಗಳ ಇತಿಹಾಸ ಈ ಮಣ್ಣಿನಲ್ಲಿದೆ. ಸಂಘರ್ಷ ಜಗಳ ಇರಲಿಲ್ಲ ಎಂದಲ್ಲ. ಆದರೆ ಅದೊಂದು ಸ್ಥಿರ ಘಟನೆ ಆಗಿರಲಿಲ್ಲ. ಸೌಹಾರ್ದದ ಈ ಸಾವಿರ ವರ್ಷಗಳ ಪರಂಪರೆಯನ್ನು ನಾವು ಸ್ಮರಿಸಿಕೊಂಡು ಹರಡಬೇಕಾಗಿದೆ ಎಂದರು.

ವಿಮರ್ಶೆ ಅಂದರೆ ಕೇವಲ ಟೀಕಿಸುವುದಲ್ಲ. ತಪ್ಪು ಒಪ್ಪುಗಳನ್ನು ಅವಲೋಕಿಸಿ ಟಿಪ್ಪಣಿ ಮಾಡುವುದೇ ವಿಮರ್ಶೆಯಾಗಿದೆ. ಸಾಹಿತಿಗಳು ಸಮಾಜ ಸುಧಾರಣೆಯ ಪ್ರೇರಣಾ ಶಕ್ತಿಗಳು ಎಂಬ ಪ್ರಜ್ಞೆಯೂ ಸದಾ ನಮ್ಮಲ್ಲಿರಬೇಕು. ಹಾಗಾಗಿ ಇಸ್ಲಾಮಿನ ಬಗ್ಗೆ ಏನೇನೂ ಗೊತ್ತಿಲ್ಲದವರಿಗೆ ತಿಳಿಹೇಳುವ ಎ.ಕೆ.ಕುಕ್ಕಿಲ ಅವರ ಈ ಕೃತಿಯನ್ನು ಎಲ್ಲಾ ವರ್ಗದ ಜನರು ಓದುವ ಅಗತ್ಯವಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸಂದರ್ಭೋಚಿತವಾಗಿ ಮಾತನಾಡಿದರು.

ಯೆನೆಪೊಯ ಮೆಡಿಕಲ್ ಕಾಲೇಜಿನ ಪ್ರೊ. ಡಾ. ಅಬ್ದುಲ್ ಮಜೀದ್ ಮಾತಾಡಿ, ಇವತ್ತು ಜ್ಞಾನಕ್ಕೆ ಕೊರತೆ ಇಲ್ಲ. ಆದರೆ ಎಂಥ ಮಾತನ್ನು ನಂಬುವ ಪರಿಸ್ಥಿತಿ ಇದೆ. ಇವತ್ತು ಲೇಖನಿಗಳು ವಿಷವನ್ನು ಕಾರುತ್ತಿವೆ. ಆ ವಿಷದ ಪ್ರಭಾವ ಸಾಮಾಜಿಕವಾಗಿ ದಟ್ಟವಾಗುತ್ತಿದೆ. ಇಂಥ ವಿಷದ ಲೇಖನಿ ಗಳಿಗೆ ಕಡಿವಾಣ ಇರಬೇಕಾಗಿದೆ. ಅದಕ್ಕೆ ಇಂತಹ ಪುಸ್ತಕಗಳು ಬಹಳ ದೊಡ್ಡ ಆಯುಧ ಎಂದವರು ಸಮಾರೋಪ ನುಡಿಯಲ್ಲಿ ಹೇಳಿದರು.

ಎ.ಕೆ. ಕುಕ್ಕಿಲ ಅನಿಸಿಕೆ ವ್ಯಕ್ತಪಡಿಸಿದರು. ಶಾಂತಿ ಪ್ರಕಾಶನದ ಉಪಾಧ್ಯಕ್ಷ ಕೆ.ಎಂ. ಶರೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಮುಹಮ್ಮದ್ ಇನಾಮುಲ್ ಅಫ್‌ವಾನ್ ಕುರ್ ಆನ್ ಪಠಿಸಿದರು. ಅಬ್ದುಸ್ಸಲಾಂ ಉಪ್ಪಿನಂಗಡಿ ಧನ್ಯವಾದವಿತ್ತರು. ಕಾಸಿಂ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.