ಭಾರತದ ಎದೆಗೆ ವಾಸಿಯಾಗದ ಗಾಯ ಮಾಡಿರುವುದೇ ಅರ್ಹತೆಯೇ?

0
226

ಸನ್ಮಾರ್ಗ ಸಂಪಾದಕೀಯ


ಬಾಬರಿ ಮಸೀದಿ ಧ್ವಂಸವನ್ನು ಅಪರಾಧ ಮತ್ತು ಕ್ರಿಮಿನಲ್ ಕೃತ್ಯ ಎಂದು 2019 ನವೆಂಬರ್‌ನಲ್ಲಿ ಸುಪ್ರೀಮ್ ಕೋರ್ಟ್ ನ  ಐವರು  ನ್ಯಾಯಾಧೀಶರು ಘೋಷಿಸುವಾಗಲೂ ಧ್ವಂಸದ ಆರೋಪಿಯಾಗಿಯೇ ಉಳಿದುಕೊಂಡಿದ್ದ ಎಲ್.ಕೆ. ಅಡ್ವಾಣಿಯವರನ್ನು ಭಾರತ ರತ್ನ  ಪುರಸ್ಕಾರದ ಮೂಲಕ ಗೌರವಿಸಲಾಗಿದೆ. ಈ ತೀರ್ಪಿನ 11 ತಿಂಗಳ ಬಳಿಕ 2020 ಸೆಪ್ಟೆಂಬರ್ 20ರಂದು ಲಕ್ನೋದ ಸಿಬಿಐ ವಿಶೇಷ  ನ್ಯಾಯಾಲಯವು ಅಡ್ವಾಣಿ ಸಹಿತ 32 ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿತು. ಇದೇವೇಳೆ, ಅಡ್ವಾಣಿ ಮೇಲಿನ ಆರೋ ಪವನ್ನು ಸಾಬೀತುಪಡಿಸುವ ವೀಡಿಯೋವನ್ನು ನ್ಯಾಯಾಲಯದ ಮುಂದೆ ಸಿಬಿಐ  ನ್ಯಾಯಾಲಯ ಅದನ್ನು ಪುರಸ್ಕರಿಸ ಲಿಲ್ಲ. ಕಾರಣ ಏನೆಂದರೆ, ಫಾರೆನ್ಸಿಕ್ ಲ್ಯಾಬೋರೇಟರಿಯಲ್ಲಿ ಆ ವೀಡಿಯೋದ ಸಾಚಾತನವನ್ನು ಪರೀಕ್ಷಿಸಿಯೇ ಇರಲಿಲ್ಲ. ಹಾಗೆಯೇ,  ಅಂದಿನ ಧ್ವಂಸ ಕಾರ್ಯಕ್ಕೆ ಸಂಬಂಧಿಸಿದ ಫೋಟೋಗಳನ್ನು ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿತ್ತು. ಆದರೆ ಅದರ ಮೂಲ ಪ್ರತಿಯನ್ನೇ  ಸಲ್ಲಿಸಿರಲಿಲ್ಲ. ಅಷ್ಟಕ್ಕೂ,

ಸಾಕ್ಷ್ಯವಾಗಿ ಸಲ್ಲಿಸುವ ಯಾವುದೇ ವೀಡಿಯೋವನ್ನೂ ಫಾರೆನ್ಸಿಕ್ ಲ್ಯಾಬೋರೇಟರಿ ಪರೀಕ್ಷೆಗೆ ಒಳಪಡಿಸಬೇಕು ಎಂದೋ ಅಥವಾ ಯಾವುದೇ ಫೋಟೋದ ನೆಗೆಟಿವ್ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದೋ ಸಿಬಿಐಗೆ ಗೊತ್ತಿರಲಿಲ್ಲ ಎಂದಲ್ಲ. ಅಲ್ಲದೇ  ಹೀಗೆ ಮಾಡುವುದಕ್ಕೆ ಸಾಕಷ್ಟು ಸಮಯಾವಕಾಶ ಇರಲಿಲ್ಲ ಎಂದೂ ಅಲ್ಲ. 1992ರಿಂದ 2020ರ ನಡುವೆ ದೀರ್ಘ 28 ವರ್ಷಗಳೇ ಸಿಬಿಐಗೆ ಇತ್ತು. ಧ್ವಂಸ ವೀಡಿಯೋದ ಫಾರೆನ್ಸಿಕ್ ಪರೀಕ್ಷೆಗೆ ಒಳಪಡಿಸುವುದಕ್ಕೆ ಮತ್ತು ಫೋಟೋಗಳ ಮೂಲ ಪ್ರತಿಯನ್ನು ಸಂಗ್ರಹಿಸುವುದಕ್ಕೆ  ಇದಕ್ಕಿಂತಲೂ ಹೆಚ್ಚಿನ ಅವಧಿ ಬೇಕು ಎಂದು ಯಾರೂ ಹೇಳಲಾರರು. ಅಂದರೆ, ಸಿಬಿಐ ಉದ್ದೇಶಪೂರ್ವಕವಾಗಿಯೇ ಹೀಗೆ  ನಡಕೊಂಡಿತ್ತು. ಆರೋಪಿಗಳನ್ನು ದೋಷಮುಕ್ತಗೊಳಿಸುವುದೇ ಉದ್ದೇಶವಾಗಿರುವಾಗ ಅದು ಪ್ರಬಲ ಸಾಕ್ಷ್ಯ ಗಳನ್ನು ಸಲ್ಲಿಸುವುದಾದರೂ  ಹೇಗೆ? ಈ ತೀರ್ಪಿನ ವಿರುದ್ಧ ಉತ್ತರ ಪ್ರದೇಶದ ಹಾಜಿ ಮೆಹಬೂಬ್ ಮತ್ತು ಸೈಯದ್ ಅಖ್‌ಲಾಕ್ ಎಂಬವರು ಅರ್ಜಿ ಸ ಲ್ಲಿಸಿದರಾದರೂ 2022 ಸೆ. 9ರಂದು ಅಲಹಾಬಾದ್ ಹೈಕೋರ್ಟು ಆ ಅರ್ಜಿಯನ್ನೇ ತಳ್ಳಿಹಾಕಿತು. ಪ್ರಕರಣದಲ್ಲಿ ನೀವು ಸಂತ್ರಸ್ತರೆಂದು  ಸಾಬೀತಾಗದ ಕಾರಣ ನಿಮಗೆ ಅರ್ಜಿ ಸಲ್ಲಿಸುವ ಅರ್ಹತೆಯಿಲ್ಲ ಎಂದು ಕಾರಣವನ್ನೂ ನೀಡಿತು. ಹಾಗಂತ,

ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಮುಂತಾದವರು ಧ್ವಂಸ ಪ್ರಕರಣದಿಂದ  ದೋಷಮುಕ್ತಗೊಂಡದ್ದು ಇದೇ ಮೊದಲಲ್ಲ. 2003ರಲ್ಲಿ ಸಿಬಿಐ ನ್ಯಾಯಾಲಯವು ಈ ಪ್ರಕರಣದಿಂದ ಅಡ್ವಾಣಿಯನ್ನು ಮುಕ್ತಗೊಳಿಸಿತ್ತು.  ಆದರೆ, ಬಾಬರಿ ಮಸೀದಿ ಧ್ವಂಸಗೊಳ್ಳುವ ವೇಳೆ ಅಡ್ವಾಣಿಯವರ ಸುರಕ್ಷತೆಗಾಗಿ ನಿಯೋಜಿಸಲಾಗಿದ್ದ ಐಪಿಎಸ್ ಅಧಿಕಾರಿ ಅಂಜು ಗುಪ್ತ  ಅವರು ನೀಡಿರುವ ಸಾಕ್ಷ್ಯವನ್ನು ಪರಿಗಣಿಸಿ ಅಲಹಾಬಾದ್ ನ್ಯಾಯಾಲಯದ ಲಕ್ನೋ ಬೆಂಚ್ ಅಡ್ವಾಣಿ ಮೇಲಿನ ಪ್ರಕರಣವನ್ನು ಮರು  ಊರ್ಜಿತಗೊಳಿಸಿತು. ‘ಅಡ್ವಾಣಿಯವರು ಬಾಬರಿ ಮಸೀದಿ ಇದ್ದ ಸ್ಥಳಕ್ಕೆ ಆಗಮಿಸುವ ಮೊದಲು ಪರಿಸ್ಥಿತಿ ಶಾಂತವಾಗಿತ್ತು’ ಎಂದು  ಅಂಜು ಗುಪ್ತಾ ರಾಯ್‌ಬರೇಲ್ವಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಅಲ್ಲದೇ, ‘ಅಡ್ವಾಣಿಯವರ ಪ್ರಚೋದಕ ಭಾಷಣವೇ ಮಸೀದಿ  ಧ್ವಂಸಕ್ಕೆ ಕಾರಣವಾಗಿತ್ತು’ ಎಂದೂ ಹೇಳಿಕೆ ನೀಡಿದ್ದರು. ‘ಅವರ ಭಾಷಣ ಪರಿಸ್ಥಿತಿಯನ್ನು ಹದಗೆಡಿಸಿತು, ಮಸೀದಿಯ ಗುಂಬಜ್‌ಗಳು  ಉರುಳಿದಾಗ ಉಮಾಭಾರತಿ ಮತ್ತು ಸಾಧ್ವಿ ಋತುಂಬರಾ ಪರಸ್ಪರ ಆಲಿಂಗಿಸಿದರು, ಸಿಹಿ ಹಂಚಿದರು, ಮಾತ್ರವಲ್ಲ, ಅಡ್ವಾಣಿ, ಜೋಶಿ  ಮತ್ತು ಎಸ್.ಪಿ. ದೀಕ್ಷಿತ್‌ರನ್ನು ಆಲಿಂಗಿಸಿ ಸಂತೋಷ ವ್ಯಕ್ತಪಡಿಸಿದರು ಹಾಗೂ ಮಸೀದಿ ಧ್ವಂಸದ ಬಳಿಕ ಅವರೆಲ್ಲ ಪರಸ್ಪರ ಅಭಿನಂದನೆ ಸಲ್ಲಿಸಿಕೊಂಡರು..’  ಎಂದವರು 1993ರಲ್ಲಿ ಸಿಬಿಐ ಮುಂದೆ ಸಾಕ್ಷ ನುಡಿದಿದ್ದರು. ಮಸೀದಿಯನ್ನು ಬೀಳಿಸುವಂತೆ ಉಮಾಭಾರತಿ ಮತ್ತು ಸಾಧ್ವಿ ಋತುಂಬರಾ  ಪ್ರಚೋದಿಸಿದರು ಎಂದು 2010ರಲ್ಲಿ ಸಿಬಿಐ ನ್ಯಾಯಾಲಯಕ್ಕೆ ನೀಡಿದ ಸಾಕ್ಷಿಯಲ್ಲೂ ಅಂಜು ಗುಪ್ತ ಹೇಳಿದ್ದರು. ಸಿಬಿಐ ಪಟ್ಟಿ ಮಾಡಿದ್ದ  ಸಾಕ್ಷಿಗಳ ಪೈಕಿ 9ನೆಯವರಾಗಿದ್ದ ಅಂಜು ಗುಪ್ತ ಅವರ ಸಾಕ್ಷ ಬಹಳ ಪ್ರಾಮುಖ್ಯದ್ದಾಗಿತ್ತು. ಆದರೆ,

ಈ ಸಾಕ್ಷದ ಗಂಭೀರತೆಯನ್ನು ತಣಿಸುವುದಕ್ಕೆ ಏನೆಲ್ಲ ಬೇಕೋ ಅವೆಲ್ಲವನ್ನೂ ಆ ಬಳಿಕ ಸಿಬಿಐ ಶ್ರಮಿಸಿರುವಂತಿದೆ. ಸ್ಥಳೀಯ ಸಾಕ್ಷಿಗಳ  ಪೈಕಿ ಯಾರನ್ನೂ ಅದು ಪರೀಕ್ಷೆಗೆ ಒಳಪಡಿಸಲೇ ಇಲ್ಲ. ಹೀಗೆ ಬಾಬರಿ ಮಸೀದಿ ಇದ್ದ ಜಾಗ ಯಾರಿಗೆ ಸೇರಬೇಕು ಎಂಬ ಪ್ರಕರಣ  ಸುಪ್ರೀಮ್ ಕೋರ್ಟು ಮೆಟ್ಟಲೇರಿ 2019 ನವೆಂಬರ್ 9ರಂದು ತೀರ್ಪು ಪ್ರಕಟವಾಗುವಾಗಲೂ ಧ್ವಂಸ ಪ್ರಕರಣ ಇನ್ನೂ ಸಿಬಿಐ ನ್ಯಾಯಾ  ಲಯದಲ್ಲೇ  ಕೊಳೆಯುತ್ತಿತ್ತು. ಕೊನೆಗೂ ಬಾಬರಿ ಮಸೀದಿ ಧ್ವಂಸವನ್ನು ಕ್ರಿಮಿನಲ್ ಕೃತ್ಯ ಮತ್ತು ಅಪರಾಧ ಎಂದು ಹೇಳಿ ಮಂದಿರ  ನಿರ್ಮಾಣಕ್ಕೆ ಸುಪ್ರೀಮ್ ಅನುಮತಿ ನೀಡಿದ ಬಳಿಕ ಸಿಬಿಐ ಚುರುಕಾಯಿತು. 2020 ಸೆ. 30ರಂದು ಅಡ್ವಾಣಿ ಸಹಿತ ಎಲ್ಲರನ್ನೂ  ದೋಷಮುಕ್ತಗೊಳಿಸಿದ ಸಿಬಿಐ ನ್ಯಾಯಾಧೀಶ ಎಸ್.ಕೆ. ಯಾದವ್, ಅಂದೇ ನಿವೃತ್ತರಾದರು. ನಿಜವಾಗಿ, ಅವರು ಒಂದು ವರ್ಷದ  ಮೊದಲೇ ನಿವೃತ್ತರಾಗಬೇಕಿತ್ತು. ಆದರೆ, ಈ ಪ್ರಕರಣಕ್ಕೆಂದೇ ಅವರ ಸೇವಾವಧಿಯನ್ನು ವಿಸ್ತರಿಸಲಾಗಿತ್ತು. ಅಷ್ಟಕ್ಕೂ,

ಅಡ್ವಾಣಿಯವರಿಗೆ ಭಾರತ ರತ್ನ ಸಲ್ಲಬೇಕೋ ಬೇಡವೋ ಎಂಬ ಚರ್ಚೆಯೇ ಅಪ್ರಸ್ತುತ. 1992 ರಿಂದ 2020 ಸೆಪ್ಟೆಂಬರ್ ವರೆಗೆ ದೀರ್ಘ  28 ವರ್ಷಗಳ ಕಾಲ ಗಂಭೀರ ಕ್ರಿಮಿನಲ್ ಆರೋಪವನ್ನು ಹೊತ್ತುಕೊಂಡ ಮತ್ತು 1989ರಲ್ಲಿ ರಥಯಾತ್ರೆ ನಡೆಸಿ ದೇಶದ ನಾಗರಿಕರನ್ನು  ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದ್ದಲ್ಲದೇ ರಕ್ತದೋಕುಳಿಗೂ ಕಾರಣವಾದ ವ್ಯಕ್ತಿಯೋರ್ವ ಭಾರತ ರತ್ನಕ್ಕೆ ಅರ್ಹರೇ ಎಂದು  ಚರ್ಚೆಗೊಳಗಾಗುವುದೇ ತಮಾಷೆ. ಅವರನ್ನು ಈಗಲೂ ಭಾರತದ ಗೃಹಸಚಿವರಾಗಿ ಯಾರೂ ನೆನಪಿಸುತ್ತಿಲ್ಲ. ಅಥವಾ ಸಚಿವರಾಗಿ  ಮಹತ್ವದ ಕೊಡುಗೆ ಕೊಟ್ಟವರಾಗಿಯೂ ಸ್ಮರಿಸುತ್ತಿಲ್ಲ. ರಥಯಾತ್ರೆ ಮತ್ತು ಅದಕ್ಕೆ ಸಂಬಂಧಿಸಿದ ನಾಗರಿಕ ಸಂಕಷ್ಟಗಳ ಕಾರಣಕ್ಕಾಗಿಯೇ  ಅವರೀಗಲೂ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಭಾರತ ರತ್ನಕ್ಕೆ ಯಾಕೆ ಅನರ್ಹ ಅನ್ನುವುದಕ್ಕೆ ಈ ಗುರುತೇ ಧಾರಾಳ ಸಾಕು.

ಅಡ್ವಾಣಿಯವರು ರಥಯಾತ್ರೆ ನಡೆಸುವ ಮೊದಲು ಬಾಬರೀ ಮಸೀದಿ ವಿವಾದವು ಅಯೋಧ್ಯೆಗೆ ಸೀಮಿತಗೊಂಡಿತ್ತು. ಬಾಬರೀ ಮಸೀದಿ  ಇದ್ದ ಸ್ಥಳ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ನ್ಯಾಯಾಲಯದಲ್ಲಿ ತನ್ನ ಪಾಡಿಗೆ ನಡೆಯುತ್ತಿತ್ತು. ನ್ಯಾಯಾಲಯದ ತೀರ್ಪಿನ ಮೂಲಕ  ಅದು ಇತ್ಯರ್ಥವಾಗುವುದಕ್ಕೂ ಅವಕಾಶವಿತ್ತು. ಒಂದುವೇಳೆ, ಈ ಪ್ರಕರಣವು ದೇಶವ್ಯಾಪಿ ಸಂಚಲನ ಸೃಷ್ಟಿಸಬೇಕಾದಷ್ಟು ಗಂಭೀರವೇ  ಆಗಿರುತ್ತಿದ್ದರೆ, ಸರ್ದಾರ್ ವಲ್ಲಭಬಾಯಿ  ಪಟೇಲ್, ಸಾವರ್ಕರ್ ಮತ್ತು ಆ ಕಾಲದಲ್ಲಿದ್ದ ಬಲಪಂಥೀಯ ನಾಯಕರು 1947 ಆಗಸ್ಟ್ 15ರ  ಬಳಿಕ ಇದನ್ನೇ ಪ್ರಧಾನ ವಿಷಯವಾಗಿ ಎತ್ತಿಕೊಳ್ಳುತ್ತಿದ್ದರು ಮತ್ತು ದೇಶದಾದ್ಯಂತ ಅದಕ್ಕಾಗಿ ಅಭಿಯಾನವನ್ನೇ ನಡೆಸುತ್ತಿದ್ದರು. ಭಾರತ  ಸ್ವತಂತ್ರಗೊಂಡ  ವೇಳೆ ಇಲ್ಲಿನ ಮುಸ್ಲಿಮ್ ನಾಯಕತ್ವ ಅತ್ಯಂತ ದುರ್ಬಲವಾಗಿತ್ತು ಮತ್ತು ಮುಸ್ಲಿಮರ ದೊಡ್ಡದೊಂದು ಗುಂಪು ಪಾಕಿಸ್ತಾನವಾಗಿ ಬದಲಾಗಿತ್ತು. ಇಷ್ಟಿದ್ದೂ, ಆ ಕಾಲದಲ್ಲಿ ಈ ವಿವಾದವು ರಾಷ್ಟ್ರವ್ಯಾಪಿ ಸಂಚಲನ ಸೃಷ್ಟಿಸದೇ ಇರುವುದಕ್ಕೆ ಮತ್ತು ವಲ್ಲಭಬಾಯಿ   ನೇತೃತ್ವದಲ್ಲಿ ಗಂಭೀರ ಪ್ರಯತ್ನ ನಡೆಯದೇ ಇರುವುದಕ್ಕೆ ಕಾರಣಗಳೇನು? ನಿಜವಾಗಿ,

1989ರ ಅಡ್ವಾಣಿ ರಥಯಾತ್ರೆ ನಿಕಷಕ್ಕೆ ಒಳಗಾಗಬೇಕಾದದ್ದೇ  ಈ ಕಾರಣಕ್ಕಾಗಿ. ಬಾಬರಿ ಮಸೀದಿ ವಿವಾದವನ್ನು ಶಂಕರಾಚಾರ್ಯರ  ಮಧ್ಯಸ್ಥಿಕೆಯಲ್ಲಿ ಇತ್ಯರ್ಥಪಡಿಸಲಾಗಿತ್ತು ಮತ್ತು ವಾಜಪೇಯಿಯವರು ಅದನ್ನು ಒಮ್ಮೆ ಪ್ರಸ್ತಾಪಿಸಿಯೂ ಇದ್ದರು ಎಂಬುದನ್ನು  ಪರಿಗಣಿಸುವಾಗ ಅಡ್ವಾಣಿಯವರ ರಥಯಾತ್ರೆಯ ಮರ್ಮ ಅರ್ಥವಾಗುತ್ತದೆ. “ಆ ಜಾಗವನ್ನು ನಾವು ಹೋರಾಡಿಯೇ ಪಡಕೊಳ್ಳುತ್ತೇವೆ,  ಮಾತುಕತೆಯ ಇತ್ಯರ್ಥ ಬೇಕಾಗಿಲ್ಲ…” ಎಂಬ ರಾಜಕೀಯ ನಿಲುವಿನ ಕಾರಣದಿಂದಾಗಿಯೇ ಈ ಪ್ರಕರಣ ಇಷ್ಟೊಂದು ರಕ್ತಪಾತಕ್ಕೆ ಮತ್ತು  ಧಾರ್ಮಿಕ ವಿಭಜನೆಗೆ ಕಾರಣವಾಯಿತು ಎಂದೇ ಹೇಳಬೇಕು. ಇದರ ಸಂಪೂರ್ಣ ಹೊಣೆಯನ್ನು ಅಡ್ವಾಣಿಯವರೇ ಹೊರಬೇಕಾಗುತ್ತದೆ.  ಅವರು ನಡೆಸಿದ ರಥಯಾತ್ರೆ ಮತ್ತು ಆ ಬಳಿಕ ಉಂಟಾದ ಕಾನೂನುಬಾಹಿರ ಧ್ವಂಸವು ಈ ದೇಶದ ಆತ್ಮಕ್ಕೆ ಮಾಡಿರುವ ಗಾಯ ಇನ್ನೂ  ವಾಸಿಯಾಗಿಲ್ಲ. ಮಾತ್ರವಲ್ಲ, ಆ ಗಾಯವನ್ನು 3 ದಶಕಗಳ ಬಳಿಕ ಇವತ್ತಿಗೂ ಜೀವಂತ ಇಡಲಾಗಿದೆಯಲ್ಲದೇ, ಕೆದಕಿ ಕೆದಕಿ ಧರ್ಮ  ಧ್ರುವೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅಡ್ವಾಣಿ ನೇತೃತ್ವ ನೀಡಿದ ರಾಜಕೀಯ ಪಕ್ಷವು ಇವತ್ತೂ ಅದರ ದುರ್ಲಾಭವನ್ನು ಪಡೆಯುತ್ತಲೂ  ಇದೆ. ಹೀಗಿರುತ್ತಾ, 

ಭಾರತ ರತ್ನ ಅಡ್ವಾಣಿಯವರ ಮುಡಿಗೇರುವುದೆಂದರೆ, ಅದು ದೇಶದ ಪರಂಪರೆಗೆ ಆಗುವ ಅವಮಾನ. ದೇಶದ  ಆತ್ಮಕ್ಕೆ ಚುಚ್ಚಿದ ಮತ್ತು ಶಾಂತಿ-ನೆಮ್ಮದಿಗೆ ಭಂಗ ತಂದ ಆರೋಪವನ್ನು ನಿರಂತರ 28 ವರ್ಷಗಳ ಎದುರಿಸಿದ ವ್ಯಕ್ತಿಯೋರ್ವ ಭಾರತ  ರತ್ನವಾಗಿ ಗೌರವಿಸಲ್ಪಡುವುದು ಆಘಾತಕಾರಿ ಮತ್ತು ಆತಂಕಕಾರಿ.