ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೇಂದ್ರ ಗೃಹ ಸಚಿವಾಲಯ ಬಿಎಸ್ಎಫ್ನ ಅಧಿಕಾರ ಹೆಚ್ಚಿಸಿದೆ. ಪಂಜಾಬ್, ಪ.ಬಂಗಾಳ, ಅಸ್ಸಾಂ ರಾಜ್ಯಗಳಲ್ಲಿ ಗಡಿ ಸಂರಕ್ಷಣೆ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಇನ್ನು ಮುಂದೆ ಬಿಎಸ್ಎಫ್ 50 ಕಿ.ಮೀ ವರೆಗೆ ಒಳಗೆ ಬರಬಹುದು. ಈ ಹಿಂದೆ ಗಡಿಯ 15 ಕಿಲೋ ಮೀಟರ್ವರೆಗೆ ಬಿಎಸ್ಎಫ್ಗೆ ಅಧಿಕಾರ ಇತ್ತು.
ಜನರನ್ನು ಕಸ್ಟಡಿಗೆ ಪಡೆಯಲು, ಬಂಧಿಸಲು ಬಿಎಸ್ಎಫ್ಗೆ ಅಧಿಕಾರವಿದೆ. ರಾಜ್ಯಗಳ ನಡುವಿನ ಗಡಿ ಘರ್ಷಣೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ತೀರ್ಮಾನ ತಳೆಯಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಬಿಎಸ್ಎಫ್ ಅಧಿಕಾರ ವ್ಯಾಪ್ತಿ ಹೆಚ್ಚಿಸಿದ ಪ್ರಕ್ರಿಯೆಯನ್ನು ಪಂಜಾಬ್ ಮುಖ್ಯಮಂತ್ರಿ ವಿರೋಧಿಸಿದ್ದಾರೆ. ಗಣರಾಜ್ಯದ ಮೇಲೆ ನೇರ ದಾಳಿ ಇದೆಂದು ಅವರು ಹೇಳಿದರು. ಕೂಡಲೇ ಇದನ್ನು ಹಿಂಪಡೆಯಬೇಕೆಂದು ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಗೃಹ ಸಚಿವ ಅಮಿತ್ ಶಾರನ್ನು ಆಗ್ರಹಿಸಿದ್ದಾರೆ. ಕೇಂದ್ರದ ಕ್ರಮ ಫೆಡರಲಿಸಂ ಅನ್ನು ದುರ್ಬಲಗೊಳಿಸುತ್ತದೆ ಎಂದು ಪಂಜಾಬ್ ಗೃಹ ಸಚಿವ ಸುಖ್ಜಿಂದರ್ ಸಿಂಗ್ ಹೇಳಿದರು.
ಆದರೆ ಕೇಂದ್ರ ತೀರ್ಮಾನವನ್ನು ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬೆಂಬಲಿಸಿದ್ದಾರೆ. ಪಾಕಿಸ್ತಾನದ ತೀವ್ರವಾದಿ ತಂಡಗಳು ಪಂಜಾಬ್ ಗಡಿ ದೊಡ್ಡ ಆತಂಕವನ್ನು ಸೃಷ್ಟಿಸುತ್ತಿದೆ. ಆದುದರಿಂದ ಬಿಎಸ್ಎಫ್ ಅಧಿಕಾರ ವ್ಯಾಪ್ತಿ ನಮ್ಮನ್ನು ಹೆಚ್ಚು ಬಲಿಷ್ಠಪಡಿಸುತ್ತದೆ ಎಂದು ಅವರು ಹೇಳಿದರು.