ಸನ್ಮಾರ್ಗ ವಾರ್ತೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬಗ್ಗೆ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಮತ್ತೆ ಲಾಕ್ಡೌನ್ ಆಗುತ್ತಾ ಎಂಬ ಭೀತಿ ಶುರುವಾಗಿದೆ. ಸದ್ಯಕ್ಕೆ ಲಾಕ್ಡೌನ್ ಮಾಡುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ಒಮಿಕ್ರಾನ್ ಪರಿಣಾಮದ ಬಗ್ಗೆ ಗಮನಿಸುತ್ತಿದ್ದೇವೆ. ಈಗಿರುವ ಡೆಲ್ಟಾ ತಳಿ ಪ್ರಕರಣವೂ ಅಲ್ಲಲ್ಲಿ ಕಾಣಿಸುತ್ತಿದೆ. ಹೆಚ್ಚಿನ ಮಾಹಿತಿ ಪಡೆಯಲು ಎನ್ಸಿಬಿಎಸ್ಗೆ ಕಳುಹಿಸುತ್ತಿದ್ದೇವೆ. ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚು ನಿಗಾವಹಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊವಿಡ್ ಟೆಸ್ಟಿಂಗ್ ಹೆಚ್ಚಿಸಲು ಸೂಚಿಸಲಾಗಿದೆ. ಆರೋಗ್ಯ ಸಚಿವರು ಕೊವಿಡ್ ಸಂಬಂಧ ಸಭೆ ಮಾಡುತ್ತಾರೆ. ಬಳಿಕ ಅದರ ಬಗ್ಗೆ ನನ್ನ ಜತೆ ಚರ್ಚಿಸಲಿದ್ದಾರೆ. ಲಾಕ್ಡೌನ್ ಮಾಡುವ ಚಿಂತನೆ ಸರಕಾರದ ಮುಂದಿಲ್ಲ. ಸದ್ಯ ಜನಜೀವನ ಹೇಗಿದೆಯೋ ಹಾಗೆಯೇ ನಡೆಯುತ್ತದೆ. ಹೆಚ್ಚು ಜನರು ಸೇರುವಲ್ಲಿ ಜನರು ಜಾಗೃತಿಯಿಂದ ಇರಬೇಕು ಅಂತ ಅವರು ಸೂಚಿಸಿದರು.