ಆಸ್ಪತ್ರೆಯ ಬೆಡ್​ ಬ್ಲಾಕಿಂಗ್ ದಂಧೆ: ತಮ್ಮದೇ ಸರಕಾರದ ಭ್ರಷ್ಟಾಚಾರ ಬಯಲಿಗೆ ತಂದ ತೇಜಸ್ವಿ ಸೂರ್ಯಗೆ ಧನ್ಯವಾದ ತಿಳಿಸಿದ KPCC ಅಧ್ಯಕ್ಷ ಡಿಕೆಶಿ..!

0
1555

ಸನ್ಮಾರ್ಗ ವಾರ್ತೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿರುವ ಆಸ್ಪತ್ರೆಯ ಬೆಡ್ ಬ್ಲಾಕಿಂಗ್ ದಂಧೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯುತ್ತಿರುವ ಈ ದಂಧೆಯನ್ನು ಬಯಲಿಗೆ ತಂದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದ ತಿಳಿಸುವ ಮೂಲಕ ಕಾಲೆಳೆದು ವ್ಯಂಗ್ಯವಾಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ದಾಳಿ ಮಾಡಿದ ಮೇಲೆ ಬೆಂಗಳೂರಿನಲ್ಲಿ (ಖಾಸಗಿ ಆಸ್ಪತ್ರೆ ಸೇರಿದಂತೆ) 1,550 ಬೆಡ್‌ ಲಭ್ಯವಾಗಿವೆ. ಇದಕ್ಕೂ ಮೊದಲು ಕಾಳ ಸಂತೆಯಲ್ಲಿ ಬೆಡ್ ಮಾರಾಟ ಆಗುತ್ತಿದ್ದರಿಂದ ಎಲ್ಲೂ ಬೆಡ್ ಲಭ್ಯವಿಲ್ಲದೆ ರೋಗಿಗಳು ಸಾಯುವ ಪರಿಸ್ಥಿತಿ ಇತ್ತು.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, “ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಮತ್ತು ಉದಯ್ ಗರುಡಾಚಾರ್ ಅವರು ತಮ್ಮದೇ ಪಕ್ಷದ ಸರಕಾರ ಮತ್ತು ನಿಗಮದಿಂದ ಹಾಸಿಗೆ ಹಂಚಿಕೆಯಲ್ಲಿ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ. ಬಿಬಿಎಂಪಿ ಯಾರ ನಿಯಂತ್ರಣದಲ್ಲಿದೆ? ತುಂಬಾ ತೊಂದರೆ ಅನುಭವಿಸುತ್ತಿರುವ ಜನರಿಗೆ ಜವಾಬ್ದಾರಿಯುತ ಬಿಜೆಪಿ ಸಚಿವರನ್ನು ಅವರು ತಕ್ಷಣ ಹೆಸರಿಸಬೇಕು” ಎಂದು ಕುಟುಕುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಈ ದಂಧೆಯ ಸಂಬಂಧ ತೇಜಸ್ವಿ ಸೂರ್ಯರವರ ದೂರಿನನ್ವಯ ಅಮಿತ್, ರೋಹಿತ್ ಹಾಗೂ ನೇತ್ರಾ ಎಂಬವರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.