ಅಪರೂಪದ ಘಟನೆಗಳನ್ನ ಮುಂದಿಟ್ಟು ಮಹಿಳಾ ಶಿಕ್ಷಣವನ್ನು ಕೀಳಂದಾಜಿಸುವುದು ಸಲ್ಲ; ಎಸ್ ಬಿ ದಾರಿಮಿ

0
130

ಸನ್ಮಾರ್ಗ ವಾರ್ತೆ

ಉಪ್ಪಿನಂಗಡಿ : ಯಾವುದೇ ಸಮಾಜ ಪ್ರಗತಿ ಪಥದಲ್ಲಿ ಸಾಗಬೇಕಿದ್ದರೆ ಕಾಲದ ಬೇಡಿಕೆಯನುಸಾರ ಉತ್ತಮ ದರ್ಜೆಯ ಶಿಕ್ಷಣದ ಅಗತ್ಯವಿದೆ. ನಮ್ಮ ಗಂಡು ಮಕ್ಕಳಂತೆ ಹೆಣ್ಮಕ್ಕಳಿಗೂ ಶಿಕ್ಷಣವನ್ನು ನೀಡಿ ಅವರನ್ನು ಸುಶಿಕ್ಷಿತರನ್ನಾಗಿ ರೂಪಿಸಿದರೆ ಮಾತ್ರ ಮುಂದಿನ ಪೀಳಿಗೆ ಇಲ್ಲಿ ಸ್ವಾಭಿಮಾನದಿಂದ ಬದುಕಲು ಸಾಧ್ಯ.

ಆದರೆ ಯಾವುದೋ ಅಪರೂಪದ ಕಹಿ ಘಟನೆಗಳನ್ನು ಮುಂದಿಟ್ಟು ಮಹಿಳಾ ಶಿಕ್ಷಣವನ್ನು ಕೀಳಂದಾಜಿಸುವುದು,ಮತ್ತು ಅಡ್ಡಿಪಡಿಸುವುದು ಸಮಂಜಸವಲ್ಲ ಎಂದು ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಕಾಲೇಜ್ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಹೇಳಿದರು.

ಅವರು ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜ್ ನಲ್ಲಿ ಇತ್ತೀಚೆಗೆ ಪುತ್ತೂರು ಮೌಂಟನ್ ವ್ಯೂ ಕಾಲೇಜ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ನಡೆದ ‘ಸಮಸ್ತ’ ದ ಫಾಳಿಲಾ- ಫಳೀಲಾ ಕಾಲೇಜ್ ಗಳ ರಾಜ್ಯ ಮಟ್ಟದ ಹಿಯಾ ಫಿಯೆಸ್ಟ ಸ್ಪರ್ಧಾ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ ಪಡೆದ ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಕಾಲೇಜ್ ವಿದ್ಯಾರ್ಥಿನಿಯರನ್ನು ಆಡಳಿತ ಸಮಿತಿ ವತಿಯಿಂದ ಅಭಿನಂದಿಸಿ ಮಾತನಾಡುತ್ತಿದ್ದರು.

ಸುಸಂಸ್ಕೃತ ಸಮಾಜ ರೂಪಿಸುವಲ್ಲಿ ಧಾರ್ಮಿಕ ಶ್ರದ್ಧೆ, ಭಕ್ತಿಯೂ ಮುಖ್ಯವಾಗಿದ್ದು, ಆದ್ದರಿಂದ ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಸಾಕಷ್ಟು ಮೌಲ್ಯಯುತ ಧಾರ್ಮಿಕ ಶಿಕ್ಷಣವನ್ನೂ ಸಮನ್ವಯಿಸಿ ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ಉಲಮಾ ಸಂಘಟನೆಯಾದ ‘ಸಮಸ್ತ’ದ ಅಧೀನದಲ್ಲಿ ಮಹಿಳೆಯರಿಗಾಗಿ ಪಿಯು ಜೊತೆಗೆ ಫಾಳಿಲಾ – ಫಳೀಲಾ ಸಮನ್ವಯ ಶಿಕ್ಷಣ ವ್ಯವಸ್ಥೆ ಹಾಗೂ ಪ್ರತಿಭೆಗಳನ್ನು ಪೋಷಿಸುವ ಸಲುವಾಗಿ ಇತ್ತಿಚೇಗೆ ರಾಜ್ಯ ಮಟ್ಟದಲ್ಲಿ ಏರ್ಪಡಿಸಲಾದ ಹಿಯಾ ಫಿಯೆಸ್ಟ ಕಾರ್ಯಕ್ರಮಗಳು ಅಭಿನಂದಾರ್ಹವಾಗಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಸಂಸ್ಥೆಯ ಉಸ್ತಾದರಾದ ಅಬ್ದುರ್ರಹ್ಮಾನ್ ಫೈಝಿ ಪೆರಿಯಡ್ಕ , ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನ ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ ಮೊದಲಾದವರು ಮಾತನಾಡಿದರು.

ಕಾಲೇಜ್ ನ ಉಪನ್ಯಾಸಕಿಯರ ನೇತೃತ್ವದಲ್ಲಿ ವಿವಿಧ ಪ್ರತಿಭಾ ಕಾರ್ಯಕ್ರಮ ಮತ್ತು ಸ್ಮರಣಿಕೆ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here