ತೊಕ್ಕೊಟ್ಟು ಹಿರಾ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಕೆ.ಮುಹಮ್ಮದ್ ನಿಧನ

0
882

ಸನ್ಮಾರ್ಗ ವಾರ್ತೆ

ಮಂಗಳೂರು: ತೊಕ್ಕೊಟ್ಟು ಹಿರಾ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ, ಸ್ಥಾಪಕ ಟ್ರಸ್ಟಿಗಳಲ್ಲೋರ್ವರಾದ ಕೆ. ಮುಹಮ್ಮದ್ ಇಂದು ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಕಾರ್ಯ ನಿಮಿತ್ತ ನಿನ್ನೆ ಬೆಂಗಳೂರಿಗೆ ತೆರಳಿ ಇಂದು ಮಂಗಳೂರಿಗೆ ಕಾರಿನಲ್ಲಿ ಆಪ್ತರೊಂದಿಗೆ ಪ್ರಯಾಣಿಸುತ್ತಿದ್ದಾಗ ಬಿ.ಸಿ.ರೋಡ್ ಸಮೀಪ ಹೃದಯಾಘಾತಕ್ಕೆ ಒಳಗಾದರೆಂದು ತಿಳಿದು ಬಂದಿದೆ.

ಸದಾ ಲವಲವಿಕೆಯಿಂದ ಸ್ಫೂರ್ತಿ ಸ್ಫುರಿಸುವ ಮಾತುಗಳಿಂದ ಜಮಾಅತ್ ಬಂಧುಗಳನ್ನು ಹುರಿದುಂಬಿಸುತ್ತಿದ್ದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಜನಾನುರಾಗಿ ಕೆ. ಮುಹಮ್ಮದ್, ಉತ್ತಮ ಪ್ರವಚನ ನೀಡುವವರಲ್ಲಿ ಗುರುತಿಸಿಕೊಂಡಿದ್ದರು.

ತೊಕ್ಕೊಟ್ಟು ಹಿರಾ ಸಂಸ್ಥೆಯ ಆರಂಭದಿಂದ ಅದರ ಜೀವನಾಡಿ ಎಂಬಂತೆ ಅದಕ್ಕಾಗಿ ಓಡಾಡಿದ್ದ ಇವರು, ಕೆಲವು ವರ್ಷಗಳಿಂದ ಸೌದಿಯಲ್ಲಿ ದುಡಿಯುತ್ತಿದ್ದು ಅಲ್ಲಿಯ ಇಸ್ಲಾಮೀ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿದ್ದರು.

ಪತ್ನಿ ಸಹಿತ ಎರಡು ಹೆಣ್ಣು, ಮೂರು ಗಂಡು ಮಕ್ಕಳಿದ್ದಾರೆ. ಒಂಭತ್ತು ತಿಂಗಳು ಪ್ರಾಯದ ಮೊಮ್ಮಗಳನ್ನೂ ಅಗಲಿದ್ದಾರೆ.

ಮೃತರ ಕುಟುಂಬಕ್ಕೂ, ಬಂಧು-ಮಿತ್ರಾದಿಗಳಿಗೂ ಅಗಲಿಕೆಯ ನೋವನ್ನು ಸಹಿಸುವ ಸಹನಾ ಶಕ್ತಿಯನ್ನು ದೇವನು ದಯಪಾಲಿಸಲಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿ, ದ.ಕ.‌ ಜಿಲ್ಲಾ ಸಂಚಾಲಕ ಸಯೀದ್ ಇಸ್ಮಾಯೀಲ್, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್.‌ಯು.ಎಚ್. ಸಂತಾಪ ಸೂಚಿಸಿದ್ದಾರೆ.