ದಕ್ಷಿಣ ಕನ್ನಡಕ್ಕೂ ಕಾಲಿಟ್ಟ ಕಾಡಾನೆ ದಾಳಿ: ಕಡಬದಲ್ಲಿ ಇಬ್ಬರು ಬಲಿ

0
124

ಸನ್ಮಾರ್ಗ ವಾರ್ತೆ

ಕಡಬ: ಮಲೆನಾಡು, ಹಾಸನ, ಸಕಲೇಶಪುರ ಭಾಗ ಸೇರಿದಂತೆ ಇತರ ಕಡೆಗಳಲ್ಲಿ ಸುದ್ದಿಯಾಗುತ್ತಿದ್ದ ಕಾಡಾನೆ ದಾಳಿ ಪ್ರಕರಣ, ದಕ್ಷಿಣ ಕನ್ನಡಕ್ಕೂ ಕಾಲಿಟ್ಟಿದ್ದು, ಸೋಮವಾರ ಬೆಳ್ಳಂಬೆಳಗ್ಗೆ ಕಡಬದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿದೆ.

ಇಂದು ಮುಂಜಾನೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟ ದಾರುಣ ಘಟನೆ ಕಡಬದ ಕುಟುಪಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದೆ.

ಮೃತರನ್ನು ರಂಜಿತಾ(21) ಹಾಗೂ ರಮೇಶ್ ರೈ (55) ಎಂದು ಗುರುತಿಸಲಾಗಿದೆ.

ರಂಜಿತಾ ಅವರು ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿದ್ದು, ಬೆಳಗ್ಗೆ ಎಂದಿನಂತೆ ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕರ್ಮೇಣ ಎಂಬಲ್ಲಿ ಅವರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಅವರ ಬೊಬ್ಬೆ ಕೇಳಿ ಅಲ್ಲೇ ಪಕ್ಕದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ ಅವರು ರಂಜಿತಾರನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅವರ ಮೇಲೂ ಆನೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಹೊಟ್ಟೆಯ ಭಾಗಕ್ಕೆ ತಿವಿತಕ್ಕೊಳಗಾದ ರಮೇಶ್ ರೈ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ರಂಜಿತಾರನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.