ಸನ್ಮಾರ್ಗ ವಾರ್ತೆ
ರೈತರಿಗೆ ಕಾನೂನು ಖಾತರಿಗೊಳಿಸುವ ಎಂಎಸ್ಪಿ ಜಾರಿಯಿಂದ ಬಜೆಟ್ನಲ್ಲಿ ಕೊರತೆ ಉಂಟಾಗುವ ಬದಲು ಜಿಡಿಪಿ ಬೆಳವಣಿಗೆಯಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರ ನೀಡಿರುವ ಎಂಎಸ್ಪಿ ಖಾತರಿ ಪ್ರಸ್ತಾಪವನ್ನು ರೈತ ಸಂಘಟನೆಗಳ ನಾಯಕರು ತಿರಸ್ಕರಿಸಿದ್ದು, ಫೆ.21ರಿಂದ ದೆಹಲಿ ಚಲೋ ಪುನಃ ಆರಂಭಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಎಂಎಸ್ಪಿ ಖಾತರಿ ಯೋಜನೆಯಿಂದ ಸರ್ಕಾರದ ಬಜೆಟ್ನಲ್ಲಿ ಕೊರತೆಯುಂಟಾಗುತ್ತದೆ ಎಂಬುದು ಸುಳ್ಳಾಗಿದೆ. ಕಾಂಗ್ರೆಸ್ ಕನಿಷ್ಠ ಬೆಂಬಲ ಬೆಲೆ ಎಂಎಸ್ಪಿ ನೀಡುವುದಾಗಿ ಭರವಸೆ ನೀಡಿದ ಅನಂತರ ಮೋದಿಯವರ ಪ್ರಚಾರ ಯಂತ್ರ ಹಾಗೂ ಅವರ ಮಾಧ್ಯಮ ಸ್ನೇಹಿತರು ಎಂಎಸ್ಪಿ ಬಗ್ಗೆ ಸುಳ್ಳಿನ ಸರಮಾಲೆಯನ್ನು ಹರಿದು ಬಿಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ ನಿಜ ಏನೆಂದರೆ ಸಿಆರ್ಐಎಸ್ಐಎಲ್ ವರದಿಯ ಪ್ರಕಾರ 2022-23ರಲ್ಲಿ ರೈತರಿಗೆ ಎಂಎಸ್ಪಿ ನೀಡಿರುವುದರಿಂದ ಸರ್ಕಾರದಲ್ಲಿ ಹೆಚ್ಚುವರಿಯಾಗಿ 21 ಸಾವಿರ ಕೋಟಿ ರೂ,ಗಳು ಮಾತ್ರ ಖರ್ಚಾಗಿತ್ತು. ಅಂದರೆ ಇದು ಒಟ್ಟು ಆದಾಯದ 0.4 ರಷ್ಟು ಮಾತ್ರ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಭಾರತದಲ್ಲಿ ಬ್ಯಾಂಕುಗಳು 14 ಲಕ್ಷ ಕೋಟಿ ರೂ. ಸಾಲ ಮನ್ನಾ ಹಾಗೂ ಕಾರ್ಪೋರೇಟ್ ತೆರಿಗೆ ವಿನಾಯಿತಿಗಾಗಿ 1.8 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿವೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸ್ವಲ್ಪ ಹಣವನ್ನಾದರೂ ಖರ್ಚು ಮಾಡಲು ಬೇಸರ ವ್ಯಕ್ತಪಡಿಸುತ್ತಿರುವುದು ಏಕೆ ಎಂದು ರಾಹುಲ್ ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಡಿಯೋವನ್ನು ರಾಹುಲ್ ಹಂಚಿಕೊಂಡಿದ್ದಾರೆ.