ನನಗೆ ಯಾರೂ ಬೆದರಿಕೆಯೊಡ್ಡಿಲ್ಲ, ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ: ಕಾಣೆಯಾಗಿದ್ದ ಮಂಜೇಶ್ವರ ಬಿಎಸ್‌ಪಿ ಅಭ್ಯರ್ಥಿ ಹೇಳಿಕೆ

0
593

ಸನ್ಮಾರ್ಗ ವಾರ್ತೆ

ಮಂಜೇಶ್ವರ,ಮಾ.22: ತನಗೆ ಯಾರೂ ಬೆದರಿಕೆಯೊಡ್ಡಿಲ್ಲ ಎಂಬುದಾಗಿ ಕಾಣೆಯಾದ ಮಂಜೇಶ್ವರದ ಬಿಎಸ್‍ಪಿ ಅಭ್ಯರ್ಥಿ ಕೆ.ಸುಂದರರವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಮೊದಲು ಇವರು ನಾಮಪತ್ರ ಹಿಂಪಡೆಯಲಿದ್ದಾರೆ ಎಂಬುದಾಗಿ ಬಿಜೆಪಿ ತಿಳಿಸಿತ್ತು.

ಬಿಜೆಪಿ ಬೆದರಿಕೆಯೊಡ್ಡಿದ್ದರಿಂದ ಸುಂದರ ನಾಮಪತ್ರ ಹಿಂಪಡೆದಿದ್ದಾರೆಂಬುದಾಗಿ ಬಿಎಸ್‍ಪಿ ಜಿಲ್ಲಾ ಸಮಿತಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿತ್ತು. ಆದರೆ, ನಾಮಪತ್ರ ಹಿಂಪಡೆಯುವಂತೆ ತನಗೆ ಯಾರೂ ಬೆದರಿಕೆ ಹಾಕಿಲ್ಲ, ಬಿಜೆಪಿಯೊಂದಿಗೆ ಸೌಹಾರ್ದ ಮಾತುಕತೆ ಆಗಿದೆ ಎಂಬುದಾಗಿ ಕೆ.ಸುಂದರ ಮಾಧ್ಯಮಗಳಿಗೆ ಹೇಳಿದರಲ್ಲದೇ, ನಾನು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಮತ್ತು ಸುರೇಂದ್ರನ್‍ರಿಗಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಸುಂದರ ಸ್ಪರ್ಧಿಸಿದ್ದರು. ಈ ಸಲ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ನಿನ್ನೆಯಿಂದ ಅವರು ಫೋನ್ ಕರೆಗೆ ಸಿಗುತ್ತಿರಲಿಲ್ಲ. ಸುಂದರರಿಗೆ ಬಿಜೆಪಿ ಬೆದರಿಕೆ ಹಾಕಿದೆ. ಅವರಿಗೆ ರಕ್ಷಣೆ ಕೊಡಬೇಕೆಂದು ಬಿಎಸ್ಪಿ ದೂರು ನೀಡಿತ್ತು. ಇದೇ ವೇಳೆ ಸುಂದರ ನಾಮಪತ್ರ ಹಿಂಪಡೆದಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದರು.

2016ರಲ್ಲಿ ಮಂಜೇಶ್ವರದಲ್ಲಿ 467 ಮತಗಳನ್ನು ಗಳಿಸುವಲ್ಲಿ ಕೆ.ಸುಂದರ ಯಶಸ್ವಿಯಾಗಿದ್ದರು. ಅವರಿಂದಾಗಿ ಸುರೇಂದ್ರನ್ 89 ಮತಗಳಿಂದ ಸೋಲುವಂತಾಗಿತ್ತು.