ಎನ್‌ಸಿಪಿಇಡಿಪಿಯಿಂದ ಬೆಂಗಳೂರು- ಕಲಬುರಗಿ ವಿಶೇಷ ಚೇತನರ ಆರೋಗ್ಯ ಸ್ಥಿತಿಗತಿ ಕುರಿತ ಅಧ್ಯಯನ ವರದಿ ಬಿಡುಗಡೆ

0
385

ಸನ್ಮಾರ್ಗ ವಾರ್ತೆ

ಕರ್ನಾಟಕದಲ್ಲಿನ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಗಳ ವಿಶೇಷ ಚೇತನರ ಅನುಭವಗಳ ತುಲನಾತ್ಮಕ ಅಧ್ಯಯನ ವರದಿಯನ್ನು ನವದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಪ್ರೊಮೋಷನ್ ಆಫ್ ಎಂಪ್ಲಾಯ್ಮೆಂಟ್ ಫಾರ್ ಡಿಸೆಬಲ್ಡ್ ಪೀಪಲ್(NCPEDP) ನಗರದ ಕನ್ನಿಂಗ್‌ಹ್ಯಾಮ್‌ನಲ್ಲಿರುವ ಸಿಟ್ರಸ್ ಹೋಟೆಲ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು.

ಡಿಸೆಬಿಲಿಟಿ ರೈಟ್ಸ್ ಇಂಡಿಯಾ ಫೌಂಡೇಶನ್‌ನ ಹಿರಿಯ ಸಲಹೆಗಾರರಾದ ಸ್ಮಿತಾ ಸದಾಶಿವನ್, ಎನ್‌ಸಿಪಿಇಡಿಪಿಯ ಕಾರ್ಯಕ್ರಮ ವ್ಯವಸ್ಥಾಪಕರಾದ ಸುಮಿತ್ ಪರೀಕ್ಷಿತ್, ಅಧ್ಯಯನದ ಸಂಯೋಜಕರಾದ ಆಕಾಶ್ ಶೇಕಾಪೂರೆ ಹಾಗೂ ಅತಿಥಿಗಳು ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಿದರು‌.

ಈ ಸಂದರ್ಭದಲ್ಲಿ ಮಾತಾಡಿದ, ಕರ್ನಾಟಕ ವಿಕಲಾಂಗ ವ್ಯಕ್ತಿಗಳ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿಯವರು, “ವಿಶೇಷಚೇತನರಿಗೆ ಬೇಕಾದ ಸೇವೆಗಳನ್ನು ಪೂರೈಸುವ ವಿಷಯದಲ್ಲಿ ಆಸ್ಪತ್ರೆಗಳು ಕರುಣಾಜನಕ ಸ್ಥಿತಿಯಲ್ಲಿರುವುದನ್ನು ನಾನು ಕಂಡಿದ್ದೇನೆ. ಅದರಲ್ಲಿಯೂ ಮಲ್ಟಿಪಲ್ ಸ್ಕ್ಲೆರೋಸಿಸ್‌ನ ಸಂದರ್ಭದಲ್ಲಿ ಜೀವನ ವೆಚ್ಚವು ತುಂಬಾ ಹೆಚ್ಚಾಗಿರುತ್ತದೆ ಹಾಗೂ ಸೇವೆಗಳು ಸರಿಯಾಗಿ ಲಭಿಸುವುದಿಲ್ಲ. ವಿಶೇಷಚೇತನರ ಆರೋಗ್ಯ ಸೇವೆಗಳನ್ನು  ಉತ್ತಮಗೊಳಿಸಲು ಆರೋಗ್ಯ ಇಲಾಖೆಯೊಂದಿಗೆ ನಾವೂ ಸೇರಿಕೊಂಡು ಇಂತಹ ಆಳವಾದ ಅಧ್ಯಯನಗಳನ್ನು ಉತ್ತೇಜಿಸಬೇಕಿದೆ. ಈ ವರದಿಯನ್ನು ಪರಿಶೀಲಿಸಿ ಆರೋಗ್ಯ ಇಲಾಖೆಯೊಂದಿಗೆ ಸೇರಿಕೊಂಡು ಇದರ ಶಿಫಾರಸುಗಳನ್ನು ಅಳವಡಿಸಲು ಮುಂದಡಿ ಇರಿಸಲಾಗುವುದು. ಅಲ್ಲದೇ, ಎಲ್ಲ ಸಚಿವಾಲಯಗಳಿಂದ 5% ಬಜೆಟ್‌ನ್ನು ವಿಶೇಷಚೇತನರಿಗಾಗಿ ಮೀಸಲಿಡುವಂತೆ ಒತ್ತಾಯಿಸುವುದು ನನ್ನ ಸದ್ಯದ ಗುರಿಯಾಗಿದೆ” ಎಂದರು.

ವಿಕಲಾಂಗರ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ನಟರಾಜ್ ಎನ್ ಮಾತನಾಡಿ, ಎನ್‌ಸಿಪಿಇಡಿಪಿ ಮತ್ತು ಎಎನ್‌ಝಡ್‌ನಂತಹ ಸಂಸ್ಥೆಗಳು ಅಧ್ಯಯನ ನಡೆಸಿ ಶಿಫಾರಸುಗಳನ್ನು ಸಲ್ಲಿಸಿರುವುದು ಸ್ವಾಗತಾರ್ಹ. ನಾವು ಈಗಾಗಲೇ ಅತ್ಯುತ್ತಮ ಪುನರ್ವಸತಿ ಯೋಜನೆಗಳನ್ನು ನಡೆಸುತ್ತಿದ್ದೇವೆ ಮತ್ತು ಈ ವರದಿಯಲ್ಲಿರುವ ಶಿಫಾರಸುಗಳನ್ನು ಸೇವೆಗಳ ಸುಧಾರಣೆಗೆ  ಅಳವಡಿಸುತ್ತೇವೆ” ಎಂದರು.

ಬಾಂಬೆ ಐಐಟಿ ಕಾಲೇಜಿನ ಪ್ರೊ. ಅಝೀಝುದ್ದೀನ್‌ ಅವರು ಮಾತನಾಡುತ್ತಾ, ” ಸರ್ಕಾರ, ಸಾಮಾಜಿಕ ಸಂಸ್ಥೆಗಳು ಮತ್ತು ಸಮುದಾಯಗಳು ಒಟ್ಟು ಸೇರಿ ವಿಶೇಷಚೇತನರ ಏಳಿಗೆಗಾಗಿ ಪರಿಶ್ರಮಿಸಿದರೆ ಖಂಡಿತವಾಗಿಯೂ ನಾವು ವಿಶೇಷಚೇತನರಿಗೆ ಬೇಕಾಗುವ ಆತ್ಮೀಯ ಭಾರತವನ್ನು ಕಟ್ಟಲು ಸಾಧ್ಯವಿದೆ.

ಜಗತ್ತಿನಲ್ಲಿ ಇದುವರೆಗೂ ವಿಶೇಷಚೇತನರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಇಲ್ಲ. ವಿಶೇಷ ಚೇತನರ ಹಕ್ಕುಗಳ ಬಗ್ಗೆ ಮಾತಾಡುವಾಗಲೂ ಒಂದು ನಿರ್ದಿಷ್ಟ ಗುರಿ ಇಲ್ಲ. ಅವರ ಆರೋಗ್ಯದ ಬಗ್ಗೆ, ಶಿಕ್ಷಣದ ಬಗ್ಗೆಯಾಗಲಿ, ಲಿಂಗ ಸಮಾನತೆಯ ಬಗ್ಗೆಯಾಗಲಿ, ಅಭಿವೃದ್ಧಿಯ ಬಗ್ಗೆಯಾಗಲಿ ಒಂದು ನಿರ್ದಿಷ್ಟ ನಿಲುವುಗಳಿಲ್ಲ. ಸಾಮಾನ್ಯ ಜನರ ಜೀವನದ ರೀತಿಯಲ್ಲಿಯೇ ವಿಶೇಷಚೇತರ ಜೀವನ ವಿವಿಧ ರಂಗಗಳ ಅಧ್ಯಯನದ ಬಗ್ಗೆ ಸರ್ಕಾರ ಸೇರಿದಂತೆ ಸಂಸ್ಥೆಗಳ ಹಿತಾಸಕ್ತಿ ಕಡಿಮೆಯಾಗುತ್ತಿದೆ‌. ವಿಶೇಷಚೇತನರ ಕೆಲವೊಂದು ಬೇಡಿಕೆಗಳಲ್ಲಿ ಹೆಚ್ಚಿನ ತಾಂತ್ರಿಕ ನೆರವು ಬೇಕಿರುವುದು ಕಂಡು ಬರುತ್ತದೆ. ಆದರೆ, ಸರಿಯಾದ ಉಪಕ್ರಮಗಳು ಅಗತ್ಯತೆ ಇರುವ ವಿಶೇಷಚೇತನರಿಗೆ ತಲುಪುವಲ್ಲಿ ವಿಫಲವಾಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನೆರೆದ ಸಭಿಕರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು. ಡೈವರ್ಸಿಟಿ & ಇಕ್ವಲ್ ಅಪಾರ್ಚುನಿಟಿಯ ರಾಮಾಚಾರಿ, ಎಪಿಡಿ ಪಾಲಿಸಿ ಅಡ್ವೋಕೆಸಿ ವಿಭಾಗದ ನಿರ್ದೇಶಕರಾದ ಶಿವ. ಸಿ ಹಿರೇಮಠ್, ಆಸ್ಥಾ ಸಂಸ್ಥೆಯ ಸುನೀಲ್‌ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.