ಸನ್ಮಾರ್ಗ ವಾರ್ತೆ
ಜೈಪುರ,ಅ.31: ವಿವಾದಿತ ಕೇಂದ್ರ ಸರಕಾರದ ಕೃಷಿ ಕಾನೂನು ವಿರುದ್ಧ ಪ್ರಸ್ತಾವ ಪಾಸು ಮಾಡಲು ರಾಜಸ್ಥಾನದ ಕಾಂಗ್ರೆಸ್ ಸರಕಾರ ಸಜ್ಜಾಗಿದ್ದು ಶನಿವಾರ ಆರಂಭಗೊಳ್ಳುವ ಹದಿನೈದನೇ ವಿಧಾನಸಭಾ ಅಧಿವೇಶನದ ಐದನೆ ಅಧಿವೇಶನದಲ್ಲಿ ಪ್ರಸ್ತಾವ ಮಂಡನೆಯಾಗುವ ಕುರಿತು ಸೂಚನೆಗಳು ಲಭ್ಯವಾಗಿದೆ. ಕಾನೂನಿನ ವಿರುದ್ಧ ಮಸೂದೆ ಅಥವಾ ಪ್ರಸ್ತಾವವನ್ನು ರಾಜಸ್ಥಾನದ ಗೆಹ್ಲೋಟ್ ಸರಕಾರ ಮಂಡಿಸಲಿದೆ ಎಂಬ ಸೂಚನೆಗಳು ಹೊರಬಂದಿದ್ದು ಬೆಂಬಲ ಬೆಲೆಗಿಂತ ಕಡಿಮೆಗೆ ರೈತರಿಂದ ಅವರ ಉತ್ಪನ್ನಗಳನ್ನು ಖರೀದಿಸಿದರೆ ಐದು ವರ್ಷದವರೆಗೆ ಜೈಲು ಶಿಕ್ಷೆ ನೀಡುವ ಕಾನೂನು ರಾಜಸ್ಥಾನ ಸರಕಾರ ನಿರ್ಮಿಸಲಿದೆ.
ಇದೇ ವೇಳೆ ಬಿಜೆಪಿ ಸರಕಾರದ ಕ್ರಮವನ್ನು ವಿರೋಧಿಸಿದೆ. ಕೇಂದ್ರ ಸರಕಾರದ ಕಾನೂನಿನ ವಿರುದ್ಧ ರಾಜಸ್ಥಾನದಲ್ಲಿ ತರಲಾಗುತ್ತಿರುವ ಪ್ರಸ್ತಾವಕ್ಕೆ ಕಾನೂನಿನ ಮಾನ್ಯತೆಯಿಲ್ಲ ಎಂದು ಬಿಜೆಪಿ ವಾದಿಸಿದೆ. ದೇಶದ ಫೆಡರಲ್ ವ್ಯವಸ್ಥೆಗೆ ವಿರುದ್ಧ ಕಾಂಗ್ರೆಸ್ ಸರಕಾರ ನಡೆದುಕೊಳ್ಳುತ್ತಿದೆ ಎಂದು ಅದು ಟೀಕಿಸಿತು. ರೈತರ ಕಾನೂನುಗಳು ಪಾರ್ಲಿಮೆಂಟಿನಲ್ಲಿ ಪಾಸಾದಾಗ ಅದನ್ನು ರಾಜಸ್ಥಾನದ ಮುಖ್ಯಮಂತ್ರಿ ಗೆಹ್ಲೋಟ್ ಕಟುವಾಗಿ ಟೀಕಿಸಿದ್ದರು.