ಉತ್ತರಪ್ರದೇಶ| ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ: ದೂರು ನೀಡಿದ ಬೆನ್ನಿಗೆ ಅಪಘಾತದಲ್ಲಿ ಸಂತ್ರಸ್ತೆಯ ತಂದೆ ಬಲಿ

0
883

ಸನ್ಮಾರ್ಗ ವಾರ್ತೆ

ಕಾನ್ಪುರ: ಉತ್ತರಪ್ರದೇಶದ ಕಾನ್ಪುರದ ಸಮೀಪ ಹದಿಮೂರು ವರ್ಷದ ಬಾಲಕಿಯನ್ನು ಮೂವರು ಸೇರಿ ಅತ್ಯಾಚಾರ ಮಾಡಿದ ಘಟನೆಯಲ್ಲಿ ದೂರು ನೀಡಿದ ಬೆನ್ನಿಗೆ ಸಂತ್ರಸ್ತೆಯ ತಂದೆಗೆ ವಾಹನ ಢಿಕ್ಕಿ ಹೊಡೆಯಿಸಿ ಕೊಲೆ ಮಾಡಲಾಗಿದೆ. ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಯುವಾಗ ತಂದೆ ಚಹಾ ಕುಡಿಯಲು ಹೊರಬಂದಿದ್ದರು. ಈ ಸಮಯದಲ್ಲಿ ಲಾರಿ ಢಿಕ್ಕಿ ಹೊಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕಿ ಉಳಿಯಲಿಲ್ಲ.

ಎರಡು ದಿವಸದ ಹಿಂದೆ ಮೂವರು ಸೇರಿ ಅವರ ಪುತ್ರಿಯ ಅತ್ಯಾಚಾರ ಮಾಡಿದ್ದು ಆರೋಪಿಗಳ ವಿರುದ್ಧ ದೂರು ನೀಡಲಾಗಿತ್ತು. ಇದರೊಂದಿಗೆ ಕುಟುಂಬಕ್ಕೆ ಆರೋಪಿಗಳು ಬೆದರಿಕೆ ಹಾಕಿದ್ದರೆಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಪ್ರಕರಣದ ಮುಖ್ಯ ಆರೋಪಿ ಗೋಲು ಯಾದವ್‍ನ ತಂದೆ ಉತ್ತರಪ್ರದೇಶದಲ್ಲಿ ಪೊಲೀಸ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ. ನನ್ನ ಮಗಳನ್ನು ಇನ್ನು ಇವರು ಕೊಲೆ ಮಾಡುತ್ತಾರೆ. ಘಟನೆಯಲ್ಲಿ ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ತಂದೆ ಮಾಧ್ಯಮಗಳ ಮುಂದೆ ಹೇಳಿದ್ದರು.

ಮಂಗಳವಾರ ಬಾಲಕಿಯ ಇನ್ನೊಬ್ಬ ಕುಟುಂಬ ಸದಸ್ಯ ಮಾಧ್ಯಮದವರೊಂದಿಗೆ ತಮಗೆ ಬಂದಿರುವ ಬೆದರಿಕೆಯನ್ನು ಹೇಳಿಕೊಂಡಿದ್ದ. ನಾವು ದೂರು ನೀಡಿದ ಮೇಲೆ ಮುಖ್ಯ ಆರೋಪಿಯ ಸಹೋದರನು ತಮಗೆ ಬೆದರಿಕೆ ಒಡ್ಡುತ್ತಿದ್ದಾನೆ. ನನ್ನ ತಂದೆ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆಂದು ಆತ ಹೇಳಿದ್ದಾನೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಸಂತ್ರಸ್ತೆ ತಂದೆಯ ದೂರಿನಲ್ಲಿ ಅತ್ಯಾಚಾರ ಮತ್ತು ಬೆದರಿಕೆ ಹಾಕಿದ ಘಟನೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಕಾನ್ಪುರ ಪೊಲೀಸ್ ಮುಖ್ಯಸ್ಥ ಡಾ.ಪ್ರತೀಕ್ ಸಿಂಗ್ ತಿಳಿಸಿದರು. ಸಂತ್ರಸ್ತೆ ಆಘಾತದಿಂದ ಚೇತರಿಸಿಕೊಂಡಿದ್ದಾಳೆ ಮತ್ತು ಕೇಸು ತನಿಖೆ ನಡೆಸಲು ಐವರು ಪೊಲೀಸಧಿಕಾರಿಗಳ ತಂಡವನ್ನು ನೇಮಿಸಲಾಗಿದೆ ಎಂದು ಪೊಲೀಸಧಿಕಾರಿ ಬ್ರಜೇಶ್ ಶ್ರೀ ವಾಸ್ತವ ತಿಳಿಸಿದರು. ತಂದೆಗೆ ಢಿಕ್ಕಿ ಹೊಡೆದ ಟ್ರಕ್ ಪತ್ತೆ ಮಾಡಲು ಮತ್ತು ಚಾಲಕನನ್ನು ಬಂಧಿಸಲು ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದರು.