ಸನ್ಮಾರ್ಗ ವಾರ್ತೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 2019-20ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ರ್ಯಾಂಕ್ ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ನಗರದ ಶೋಭಾ ಪಿ ಮತ್ತು ಕೆ ಎಸ್ ಪ್ರೇಮ್ ಕುಮಾರ್ ಅವರ ಪುತ್ರಿ ಸಾಯಿ ಸೂರ್ಯ ಕೆ. ಪಿ. ಎಂಬ ವಿದ್ಯಾರ್ಥಿನಿ 6ನೇ ರ್ಯಾಂಕ್ ಮತ್ತು ಆಕಾಶಭವನದ ಪ್ರೇಮನಾಥ ಆಚಾರ್ಯ ಅವರ ಪತ್ನಿ, ಪಾರ್ವತಿ- ಪ್ರಭಾಕರ ಆಚಾರ್ಯ ದಂಪತಿಯ ಪುತ್ರಿ ಸಂಧ್ಯಾ 9ನೇ ರ್ಯಾಂಕ್ ಗಳಿಸಿದ್ದಾರೆ. ಸಂಧ್ಯಾ ಬೆಳ್ಮದೋಟದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೂ ಹೌದು. ದಕ್ಷಿಣ ಕನ್ನಡದಲ್ಲಿ ಇದುವರೆಗೆ ಶಿಕ್ಷಕಿಯಾಗಿದ್ದುಕೊಂಡು ಪದವಿ ಶಿಕ್ಷಣ ಮುಗಿಸಿದ ಜಿಲ್ಲೆಯ ಮೊತ್ತ ಮೊದಲ ಶಿಕ್ಷಕಿ ಎಂಬ ಹೆಗ್ಗಳಿಕೆಗೂ ಸಂಧ್ಯಾ ಪಾತ್ರರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ರೈಲ್ವೇ ಕಾಲನಿಯ ಎಸ್. ಲಕ್ಷ್ಮೀ- ಐ ಬಾಬು ದಂಪತಿಯ ಮಗಳು ಐ. ಪ್ರಿಯದರ್ಶಿನಿ 8 ನೇ ರ್ಯಾಂಕ್ಗೆ ಭಾಜನರಾಗಿದ್ದಾರೆ.
ರ್ಯಾಂಕ್ ವಿಜೇತರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಹರೀಶ್ ಹಾಗೂ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.