ವಿಧಾನ ಪರಿಷತ್ ಉಪ ಸಭಾಪತಿ S.L. ಧರ್ಮೇಗೌಡ ಆತ್ಮಹತ್ಯೆ

0
1143

ಸನ್ಮಾರ್ಗ ವಾರ್ತೆ

ಚಿಕ್ಕಮಗಳೂರು: ಕರ್ನಾಟಕ ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ(65) ಚಿಕ್ಕಮಗಳೂರು ಜಿಲ್ಲೆಯ ಕಡೂರು ಗುಣಸಾಗರದ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ವರದಿಯಾಗಿದೆ.

ನಿನ್ನೆ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಮಧ್ಯರಾತ್ರಿ 2 ರ ಸುಮಾರಿಗೆ ಮೃತದೇಹ ಪತ್ತೆಯಾಯಿತೆಂದು ತಿಳಿದು ಬಂದಿದೆ.

ನಿನ್ನೆ ಸಂಜೆ ಮುಗಿಸಿ ಆಪ್ತ ಸಹಾಯಕ ಹಾಗೂ ಚಾಲಕನೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ್ದ ಧರ್ಮೇಗೌಡ ರು ಗುಣಸಾಗರದ ಬಳಿ ಕಾರು ನಿಲ್ಲಿಸಲು ತಿಳಿಸಿ, ನೀವು ಹೋಗಿ, ನನಗೆ ಖಾಸಗಿ ವಿಷಯವೊಂದು ವ್ಯಕ್ತಿಯ ಬಳಿ ಮಾತನಾಡಲಿಕ್ಕಿದೆ ಎಂದು ತಿಳಿಸಿದ್ದರೆಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ. ಆದರೆ, ಮನೆಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡು ಆಪ್ತಸಹಾಯಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆಯ ಸಂಬಂಧ ಡಿಸೆಂಬರ್ 15 ರಂದು ವಿಧಾನ ಪರಿಷತ್ ನಲ್ಲಿ ನಡೆದಿದ್ದ ಗಲಾಟೆಯಿಂದ ನೊಂದಿದ್ದರೆಂದು ಅವರ ಆತ್ಮೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆ ಸಂಬಂಧ ಡೆತ್ ನೋಟ್ ದೊರೆತಿರುವುದಾಗಿ ತಿಳಿದು ಬಂದಿದ್ದು, ಆದರೆ ಸರಿಯಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಧರ್ಮೇಗೌಡ, 2018 ರಲ್ಲಿ ವಿಧಾನ ಪರಿಷತ್ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಧರ್ಮೇಗೌಡರ ಆತ್ಮಹತ್ಯೆ ಘಟನೆ ರಾಜಕೀಯ ಪಕ್ಷಗಳ ಮುಖಂಡರಿಗೆ ಶಾಕಿಂಗ್ ನ್ಯೂಸ್ ಆಗಿ ಬಂದಿದ್ದು, ಜೆಡಿಎಸ್ ನಾಯಕ ಹಾಗೂ ಮಾಜಿ‌ ಮುಖ್ಯಮಂತ್ರಿ ಹೆಚ್. ಡಿ‌. ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ‌