ಅದು ಅನುಯಾಯಿಯ ತಪ್ಪೆಂದಾದರೆ ಇದೇಕೆ ಸಿದ್ಧಾಂತದ ತಪ್ಪಾಗಬೇಕು?

0
2467

ಪವಿತ್ರ ಕುರ್‍ಆನಿನ ಬಹುತೇಕ ಕೊನೆಯ ಭಾಗದಲ್ಲಿ ಒಂದು ಅಧ್ಯಾಯವಿದೆ. ಅದು ಗುರುತಿಸಿಕೊಳ್ಳುವುದು ಅಲ್ ಕಾಫಿರೂನ್ ಎಂಬ ಹೆಸರಲ್ಲಿ. ಪ್ರವಾದಿ ಮುಹಮ್ಮದರು(ಸ) ಆ ವಚನವನ್ನು ತನ್ನ ಸಮಾಜದೊಂದಿಗೆ ಹಂಚಿಕೊಳ್ಳುತ್ತಾರೆ. ಅದನ್ನು ಹಂಚಿಕೊಳ್ಳು ವುದಕ್ಕೆ ಒಂದು ಕಾರಣವೂ ಇದೆ. ಅವರು ಏಕಾಏಕಿ ಆ ವಚನವನ್ನು ಜನರ ಮುಂದಿಡಲಿಲ್ಲ. ಅದಕ್ಕಿಂತ ಮೊದಲು ಅನೇಕಾರು ಬಾರಿ ಅವರು ಮತ್ತು ಅವರ ಸಮಾಜ ಮುಖಾಮುಖಿಯಾಗಿದೆ. ಪರಸ್ಪರ ಮಾತುಕತೆಗಳು ನಡೆದಿವೆ. ಆ ಎಲ್ಲ ಸಂದರ್ಭಗಳಲ್ಲಿ ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಆ ಜನರ ಮುಂದಿಟ್ಟಿದ್ದಾರೆ. ಚರ್ಚೆ-ಸಂವಾದ, ಸ್ವೀಕಾರ-ತಿರಸ್ಕಾರ ಎಲ್ಲವೂ ನಡೆಯುತ್ತಿದ್ದ
ಸನ್ನಿವೇಶ. ಪ್ರವಾದಿ ಮುಹಮ್ಮದ್ ಆ ಸಮಾಜಕ್ಕೆ ಅಪರಿಚಿತ ಆಗಿರಲಿಲ್ಲ. ತನ್ನ ವಿಚಾರಧಾರೆಯ ಕಾರಣಕ್ಕಾಗಿ ಅದಾಗಲೇ ವಿರೋಧಿಗಳನ್ನೂ ಅನುಯಾಯಿಗಳನ್ನೂ ಅವರು ಗಿಟ್ಟಿಸಿ ಕೊಂಡಿದ್ದರು. ಇಂಥ ಸನ್ನಿವೇಶದಲ್ಲಿ ಅವರು ಮೇಲೆ ಉಲ್ಲೇಖಿಸಿದ ವಚನವನ್ನು ಹಂಚಿಕೊಳ್ಳುತ್ತಾರೆ. ಅದು ಹೀಗಿದೆ:
ಓ ನಿಷೇಧಿಸುವವರೇ,
ನೀವು ಆರಾಧಿಸುವವುಗಳನ್ನು ನಾನು ಆರಾಧಿಸುವುದಿಲ್ಲ ಮತ್ತು ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ. ನೀವು ಆರಾದಿಸಿದವುಗಳ ಆರಾಧನೆಯನ್ನು ನಾನೂ ಮಾಡುವವನಲ್ಲ. ನಾನು ಆರಾಧಿಸುವವನನ್ನು ನೀವೂ ಆರಾಧಿಸುವವರಲ್ಲ. ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ. (109: 1-6)
ಇಲ್ಲಿ ಇನ್ನೊಂದು ವಚನವನ್ನೂ ಉಲ್ಲೇಖಿಸಬಹುದು. ಅದು ಪವಿತ್ರ ಕುರ್‍ಆನಿನ ಆರಂಭದ ಭಾಗದಲ್ಲಿದೆ. ಈ ವಚನ ಇರುವ ಅಧ್ಯಾಯವು ಅಲ್ ಬಕರ ಎಂಬ ಹೆಸರಲ್ಲಿ ಗುರುತಿಸಿಕೊಂಡಿದೆ. ಅದು ಹೀಗಿದೆ:
ಧರ್ಮದಲ್ಲಿ ಬಲಾತ್ಕಾರವಿಲ್ಲ. (2:256)
ಅಲ್ ಕಾಫಿರೂನ್ ಮತ್ತು ಅಲ್‍ಬಕರ ಅಧ್ಯಾಯಗಳ ಈ ವಚನಗಳನ್ನು ನಿಮ್ಮ ಎದುರು ಹರಡಿಕೊಂಡು ಒಮ್ಮೆ ಆಲೋಚಿಸಿ. ಏನನಿಸುತ್ತದೆ? ಮಾನವನ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆಯ್ಕೆ ಸ್ವಾತಂತ್ರ್ಯವನ್ನು ಇಷ್ಟೊಂದು ಚೆನ್ನಾಗಿ ಇನ್ನಾವ ಸಿದ್ಧಾಂತವೂ ಹೇಳಿರಲಾರದೇನೋ ಎಂದು ಅಂದುಕೊಳ್ಳುವಷ್ಟು ಈ ವಚನಗಳು ಚೇತೋಹಾರಿಯಾಗಿವೆ. ‘ನನ್ನ ಧರ್ಮ ನನಗೆ ಮತ್ತು ನಿಮ್ಮ ಧರ್ಮ ನಿಮಗೆ’ ಎಂದು ಮಾತ್ರವಲ್ಲ, ‘ಈ ವಿಷಯದಲ್ಲಿ ಬಲವಂತವಿಲ್ಲ’ ಎಂಬ ತಾಕೀತನ್ನೂ ಈ ವಚನಗಳು ಕೊಡುತ್ತವೆ. ಈ ವಚನಗಳ ಆಧಾರದಲ್ಲಿ ಒಂದಷ್ಟು ವಿಸ್ತಾರವಾಗಿ ಆಲೋಚಿಸುವುದಾದರೆ, ‘ನಾನು ತಿನ್ನುವವುಗಳನ್ನು ನೀವು ತಿನ್ನಬೇಕೆಂದಿಲ್ಲ, ನಾನು ಆಡುವ ಭಾಷೆಯನ್ನು ನೀವು ಆಡಬೇಕೆಂದಿಲ್ಲ, ನನ್ನ ವಿಚಾರಧಾರೆಯಂತೆ ನಿಮ್ಮ ವಿಚಾರಧಾರೆ ಇರಬೇಕೆಂದಿಲ್ಲ, ನನ್ನ ನಿಲುವಿನಂತೆ ನಿಮ್ಮ ನಿಲುವು ಇರಬೇಕೆಂದಿಲ್ಲ, ನನ್ನ ಕೌಟುಂಬಿಕ, ¸ ಸಮಾಜಿಕ, ರಾಜಕೀಯ, ಆರ್ಥಿಕ ನಿಲುವುಗಳಂತೆ ನಿಮ್ಮದು ಇರಬೇಕೆಂದಿಲ್ಲ..’ ಇತ್ಯಾದಿಗಳಾಗಿಯೂ ಮುಂದುವರಿಸಬಹುದು.

ಇವತ್ತಿನ ಜಗತ್ತಿನಲ್ಲಿ ಈ ಬಗೆಯ ಆಲೋಚನೆಗಳನ್ನು ಪ್ರಗತಿಪರ ಅಥವಾ ಸೆಕ್ಯುಲರ್ ಆಲೋಚನೆಗಳಾಗಿ ಗುರುತಿಸಲಾಗುತ್ತದೆ. ಪ್ರಜಾತಂತ್ರದ ಮೂಲಗುಣವಾಗಿ ಇವನ್ನು ಪರಿಗಣಿಸಲಾಗುತ್ತದೆ. ಅದೇ ವೇಳೆ ಪವಿತ್ರ ಕುರ್‍ಆನನ್ನು ಈ ಗುಣಗಳ ವೈರಿಯೆಂಬಂತೆ ಅನೇಕ ಬಾರಿ ಅನೇಕರು ವ್ಯಾಖ್ಯಾನಿಸಿದ್ದೂ ಇದೆ. ಇದಕ್ಕಿರುವ ಎರಡು ಕಾರಣಗಳಲ್ಲಿ ಒಂದು-
ಅದರ ಅನುಯಾಯಿಗಳೆಂದು ಗುರುತಿಸಿಕೊಂಡವರ ತಪ್ಪುಗಳು.
ಇನ್ನೊಂದು- ಕುರ್‍ಆನನ್ನು ಅತೀವ ಪೂರ್ವಗ್ರಹದಿಂದ ಓದಿರುವುದು.
ಪವಿತ್ರ ಕುರ್‍ಆನ್‍ನ ಸೆಕ್ಯುಲರ್ ಗುಣಕ್ಕೆ ಆಧಾರವಾಗಿ ಇನ್ನೊಂದು ವಚನವನ್ನೂ ಉಲ್ಲೇಖಿಸಬಹುದು. ಅದು ಹೀಗಿದೆ:
‘ಓ ಜನರೇ, ನಿಮ್ಮನ್ನು ಓರ್ವ ಸ್ತ್ರೀ ಮತ್ತು ಪುರುಷನಿಂದ ಸೃಷ್ಟಿಸಲಾಗಿದೆ.’ (49:13)
ಸೆಕ್ಯುಲರ್ ಪ್ರಜಾತಂತ್ರದ ಅತಿದೊಡ್ಡ ಪ್ರತಿಪಾದನೆ ಏನೆಂದರೆ, ಸರ್ವರನ್ನೂ ಸಮಾನವಾಗಿ ಕಾಣಬೇಕು ಎನ್ನುವುದು. ಶ್ರೀಮಂತ, ಬಡವ; ಮೇಲು ಜಾತಿ-ಕೀಳು ಜಾತಿ; ಶ್ರೇಷ್ಠ ಧರ್ಮ-ಕನಿಷ್ಠ ಧರ್ಮ; ಹೆಣ್ಣು ಶ್ರೇಷ್ಠ-ಗಂಡು ಕನಿಷ್ಠ, ಮಾಲಿಕ-ಗುಲಾಮ.. ಈ ಬಗೆಯ ವಿಭಜನೆಗಳಿಲ್ಲದೆಯೇ ಸರ್ವರನ್ನೂ ಏಕ ಮಾನದಂಡದಲ್ಲಿ ಅಳೆಯಬೇಕು ಅನ್ನುವುದು. ದುರಂತ ಏನೆಂದರೆ, ಸೆಕ್ಯುಲರ್ ಪ್ರಜಾತಂತ್ರಕ್ಕೆ ಅತ್ಯುತ್ತಮ ಮಾದರಿ ಎಂದು ಹೇಳಲಾಗುವ ರಾಷ್ಟ್ರಗಳಲ್ಲೂ ಈ ಬಗೆಯ ವಾತಾವರಣವನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಅಮೇರಿಕವೂ ಇದರಲ್ಲಿ ಒಂದು. ಭಾರತವೂ ಒಂದು. ಇತ್ತೀಚಿನ ವೈಜ್ಞನಿಕ ಸಂಶೋಧನೆಯ ಪ್ರಕಾರ, ಎಲ್ಲ ಮಾನವರ ಡಿಎನ್‍ಎಯಲ್ಲಿ ಶೇ. 98ರಷ್ಟು ಅಂಶಗಳೂ ಸಮಾನವಾಗಿವೆ. ಬ್ರಾಹ್ಮಣ ಮತ್ತು ಬಿಲ್ಲವ, ಕರಿಯ ಮತ್ತು ಬಿಳಿಯ, ಆಫ್ರಿಕದವಳು ಮತ್ತು ಜಪಾನಿನವಳು, ಉಗಾಂಡದವರು ಮತ್ತು ಮ್ಯಾನ್ಮಾರ್‍ನವರು.. ಇವರೆಲ್ಲರ ಭಾಷೆ, ಭಾವನೆ, ಸಂಸ್ಕøತಿ, ಪರಂಪರೆ, ಬಣ್ಣ, ಆಕಾರ, ಗಾತ್ರ.. ಇತ್ಯಾದಿಗಳಲೇಲ್ಲ ಬಾಹ್ಯನೋಟಕ್ಕೆ ವ್ಯತ್ಯಾಸಗಳಿರಬಹುದಾದರೂ ಆಂತರಿಕವಾಗಿ ಎಲ್ಲರೂ ಸಮಾನ ಡಿಎನ್‍ಎ ಅಂಶಗಳನ್ನು ಹೊಂದಿದವರಾಗಿದ್ದಾರೆ. ಅವರ ನಡುವೆ ಅಂತರಗಳಿಲ್ಲ. ¨ ಭೇಧ-ಭಾವಗಳಿಲ್ಲ. ಉದ್ಯೋಗ, ಅಭಿರುಚಿ, ಆರ್ಥಿಕ ಬಲಗಳಲ್ಲಿ ಇರಬಹುದಾದ ವ್ಯತ್ಯಾಸಗಳು ಒಬ್ಬನನ್ನು ಶ್ರೇಷ್ಠ ಮತ್ತು ಇನ್ನೋರ್ವರನ್ನು ಕನಿಷ್ಠ ಮಾಡುವುದೂ ಇಲ್ಲ. ಸೆಕ್ಯುಲರ್ ಪ್ರಜಾತಂತ್ರ ಇವನ್ನೆಲ್ಲ ತನ್ನ ಹೆಚ್ಚುಗಾರಿಕೆಯಾಗಿ ಮತ್ತು ತನ್ನ ಅಸ್ತಿತ್ವಕ್ಕೆ ಸಕಾರಣವಾಗಿ ಮುಂದಿಡುತ್ತಾ ಬಂದಿದೆ. ಹಾಗಂತ, ಈ ಇವನ್ನೆಲ್ಲ ಇಷ್ಟೇ ಚೆನ್ನಾಗಿ ಪ್ರಯೋಗಕ್ಕೆ ತರಲು ಈ ಪ್ರಜಾ ತಂತ್ರ ಎಲ್ಲೂ ಯಶಸ್ವಿಯಾಗಿಲ್ಲ ಎಂಬುದೂ ಅಷ್ಟೇ ಸತ್ಯ.

ವಿಷಾದ ಏನೆಂದರೆ, ಪವಿತ್ರ ಕುರ್‍ಆನಿಗೆ ಸಂಬಂಧಿಸಿ ಈ ಬಗೆಯ ಅವಲೋಕನ ನಡೆಯುವುದು ತೀರಾ ಕಡಿಮೆ. ಪ್ರವಾದಿ ಮುಹಮ್ಮದ್(ಸ) ಪವಿತ್ರ ಕುರ್‍ಆನಿನ ಪಡಿಯಚ್ಚು. ಅವರಷ್ಟು ಚೆನ್ನಾಗಿ ಪವಿತ್ರ ಕುರ್‍ಆನನ್ನು ಪ್ರತಿನಿಧಿಸಿದವರು ಯಾರೂ ಇಲ್ಲ ಅನ್ನುವಷ್ಟು ಅವರು ಕುರ್‍ಆನ್‍ನ ಮಾದರಿ. ಅವರು ಈ ಕುರ್‍ಆನ್‍ನ ಆಧಾರದಲ್ಲಿ ಒಂದು ಸಾಮಾಜಿಕ ವಾತಾವರಣವನ್ನು ಬೆಳೆಸಿದರು. ಒಂದು ಸಮ ಸಮಾಜವನ್ನು ಕಟ್ಟಿದರು. ಈ 21ನೇ ಶತಮಾನಕ್ಕೆ ಹೋಲಿಸಿದರೆ ಅವರು ಬದುಕಿದ 6-7ನೇ ಶತ ಮಾನ ವೈಜ್ಞಾನಿಕವಾಗಿ ಇನ್ನೂ ಮಗುವಷ್ಟೇ ಆಗಿತ್ತು. ತಾಂತ್ರಿಕ ವಾಗಿಯೂ ಮಗುವೇ. ಅಂದು ಮಂಗಳ ಗ್ರಹಕ್ಕೆ ಯಾರೂ ಹೋಗಿರಲಿಲ್ಲ. ಮೊಬೈಲ್ ತಂತ್ರಜ್ಞಾನದ ಆವಿಷ್ಕಾರ ಆಗಿರಲಿಲ್ಲ. ವಾಹನಗಳ ಕಲ್ಪನೆ ಇರಲಿಲ್ಲ. ಈ ಜಗತ್ತನ್ನೇ ಹಳ್ಳಿಯನ್ನಾಗಿಸಿ ಬಿಟ್ಟ ಇವತ್ತಿನ ಬಹುತೇಕ ಯಾವ ತಾಂತ್ರಿಕ ಕೌಶಲ್ಯಗಳೂ ಲಭ್ಯವಿಲ್ಲದ ಕಾಲದಲ್ಲಿ ಅವರು ಬದುಕಿ ಮರೆಯಾದರು. ಆದ್ದರಿಂದ ಆಫ್ರಿಕಾದ ಕರಿಯ ವ್ಯಕ್ತಿಯನ್ನು ಉನ್ನತ ವಂಶದ ಅರಬ್ ವ್ಯಕ್ತಿ ತಾರತಮ್ಯದಿಂದ ನೋಡುವುದು ಮಾನವ ಹಕ್ಕು ಉಲ್ಲಂಘನೆಯ ಪಟ್ಟಿಯಲ್ಲಿ ಸೇರುವುದಕ್ಕೆ ಅಂದಿನ ವಾತಾವರಣದಲ್ಲಿ ಸಾಧ್ಯವೇ ಇರಲಿಲ್ಲ. ಶತಮಾನಗಳಿಂದ ದಲಿತರು ಹೇಗೆ ತಮ್ಮ ಮೇಲಿನ ದೌರ್ಜನ್ಯವನ್ನು ಸಹಜವಾಗಿ ಸ್ವೀಕರಿಸಿ ಒಪ್ಪಿಕೊಂಡು ಬಂದರೋ ಅದೇ ಮಾನಸಿಕತೆಯೊಂದು ಅರಬ್ ರಾಷ್ಟ್ರಗಳಲ್ಲೂ ಇರುವುದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವೂ ಇಲ್ಲ. ಬಲಾಢ್ಯನೋರ್ವ ದುರ್ಬಲನ ಮೇಲೆ ಹಕ್ಕು ಸ್ಥಾಪಿಸುವುದು ಅನಾದಿ ಕಾಲದಿಂದಲೂ ಪರಂಪರೆ ಯಾಗಿಯೇ ಬೆಳೆದು ಬಂದಿದೆ. ತಪ್ಪು ಎಂದು ಅಂದುಕೊಳ್ಳಲಾಗದಷ್ಟು ಅದು ಜನಜೀವನದಲ್ಲಿ ಹಾಸುಹೊಕ್ಕಾಗಿಯೂ ಇದೆ. ಇಂಥ ಸ್ಥಿತಿಯಲ್ಲಿ ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಜನರ ಮುಂದಿಡುತ್ತಾರೆ. ‘ಮಾನವರೆಲ್ಲ ಸಮಾನರು’ ಎಂದು ಅವರು ಘೋಷಿಸಿದ್ದು ಮಾನವರು ಎಲ್ಲಾಡೆ ಅಸಮಾನರಾಗಿ ಬದುಕುತ್ತಿದ್ದ ಸಂದರ್ಭದಲ್ಲಿ. ‘ನನ್ನ ಧರ್ಮ ನನಗೆ ನಿಮ್ಮ ಧರ್ಮ ನಿಮಗೆ’ ಎಂದು ಅವರು ಘೋಷಿಸಿದ್ದು ‘ನನ್ನ ಧರ್ಮವೇ ನಿನ್ನ ಧರ್ಮವಾಗಬೇಕು’ ಎಂದು ಬಲಾಢ್ಯರು ಹೇರುತ್ತಿದ್ದ ಸಮಯದಲ್ಲಿ. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ ಎಂದವರು ಹೇಳಿದ್ದು ಬಲವಂತದಿಂದ ತಮ್ಮ ಧರ್ಮವನ್ನು ಇತರರ ಮೇಲೆ ಹೇರುತ್ತಿದ್ದ ಸನ್ನಿವೇಶದಲ್ಲಿ. ಸೆಕ್ಯುಲರ್ ಪ್ರಜಾತಂತ್ರದ ಅತಿ ಅಮೂಲ್ಯ ಅಡಿಪಾಯಗಳಾದ ಈ ಮೂರು ನಿಯಮಗಳನ್ನು ಪ್ರವಾದಿ ಮುಹಮ್ಮದರು(ಸ) ತನ್ನ ಆಡಳಿತದ ನಿಯಮಗಳಾಗಿ ಅಳವಡಿಸಿಕೊಂಡರು. ಮಾತ್ರವಲ್ಲ, ಅದನ್ನು ಎಷ್ಟು ನಾಜೂಕಾಗಿ ಜಾರಿಗೆ ತಂದರು ಎಂದರೆ, ಗುಲಾಮನಾಗಿ ಮಾರುಕಟ್ಟೆಯಲ್ಲಿ ಬಿಕರಿಯಾಗಿದ್ದ ಕರಿಯ ವ್ಯಕ್ತಿಯೂ ಅತ್ಯಂತ ಗೌರವಾರ್ಹ ವ್ಯಕ್ತಿಯಾಗಿ ಗುರುತಿಸಿಕೊಂಡರು. ಈ ಕುರಿತಂತೆ ಉದಾಹರಣೆಗಳು ನೂರಾರು ಇವೆ. ಹಾಗಂತ, ಪ್ರವಾದಿ ಮುಹಮ್ಮದರ ಅನುಯಾಯಿ ಎಂದು ಗುರುತಿಸಿಕೊಂಡವರೆಲ್ಲ ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಇದೇ ಸೆಕ್ಯುಲರ್ ಗುಣವನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆ ಎಂದಲ್ಲ. ಕೆಲವೊಮ್ಮೆ ಅವರು ಈ ಸೆಕ್ಯುಲರ್ ಸಿದ್ಧಾಂತದ ತಪ್ಪು ಮಾದರಿಯಾಗಿ ಬಿಡುವುದಿದೆ. ಅತಿ ಕೆಟ್ಟದಾಗಿ ಅದನ್ನು ಪ್ರತಿನಿಧಿಸುವುದೂ ಇದೆ. ಹಾಗಂತ, ಇದು ಪ್ರವಾದಿ ಮುಹಮ್ಮದರ ಅನುಯಾಯಿಗಳಲ್ಲಿ ಮಾತ್ರ ಕಂಡುಬರುವ ಕೊರತೆಗಳಲ್ಲವಲ್ಲ. ಮಾಕ್ರ್ಸ್ ಸಿದ್ಧಾಂತವನ್ನು ಅಪ್ಪಿ ಒಪ್ಪಿಕೊಂಡವರಲ್ಲೂ ಈ ಬಗೆಯ ವೈಫಲ್ಯಗಳಿವೆ. ಬುದ್ಧನನ್ನು ಪ್ರೀತಿಸುವವರಲ್ಲೂ ಮಹಾವೀರನನ್ನು ಅನುಸರಿಸುವವರಲ್ಲೂ ವೈದಿಕ ವಿಚಾರಧಾರೆಯ ಅನುಯಾಯಿ ಗಳಲ್ಲೂ ಈ ಬಗೆಯ ತಪ್ಪುಗಳಿವೆ. ಹೆಚ್ಚೇಕೆ ಭಾರತೀಯ ಸಂವಿಧಾನವನ್ನು ಅನುಸರಿಸುವುದಾಗಿ ಶಾಸನ ಸಭೆಗಳಲ್ಲಿ ಪ್ರತಿಜ್ಞೆ ಮಾಡುವವರೇ ಈ ಸಂವಿಧಾನದ ಎದೆಗೆ ತುಳಿಯುವವರಂತೆ ಮಾತಾಡುತ್ತಾರೆ. ಸಂವಿಧಾನದ ಆಶಯಗಳಿಗೆ ಸಂಪೂರ್ಣ ತದ್ವಿರುದ್ಧವಾಗಿ ಬದುಕುತ್ತಾರೆ.

ಆದರೆ ಈ ಎಲ್ಲ ಸಂದರ್ಭಗಳಲ್ಲಿ ನಡೆಯುವ ಚರ್ಚೆಗಳು ವೈಯಕ್ತಿಕವಾಗಿರುತ್ತವೆಯೇ ಹೊರತು ಸೈದ್ಧಾಂತಿಕವಾಗಿ ಅಲ್ಲ. ಭಾರತೀಯ ಸಂವಿಧಾನವನ್ನು ಒಪ್ಪಿಕೊಂಡು ಬದುಕುತ್ತಿರುವ ವ್ಯಕ್ತಿ ಅದಕ್ಕೆ ಅಪಚಾರವೆಂಬಂತೆ ವರ್ತಿಸಿದಾಗ ನಾವು ಸಂವಿಧಾವನ್ನು ಕಟಕಟೆಯಲ್ಲಿ ನಿಲ್ಲಿಸುವುದೇ ಇಲ್ಲ. ಬುದ್ಧನ ಅನುಯಾಯಿಗಳು ಬುದ್ಧಿಸಂಗೆ ವಿರುದ್ಧವಾಗಿ ನಡಕೊಂಡಾಗ ಬುದ್ಧಿಸಮ್ಮೇ ಇದಕ್ಕೆ ಕಾರಣ ಎಂದು ನಾವು ಹೇಳುವುದಿಲ್ಲ. ಮಾವೋ ಮತ್ತು ಲೆನಿನ್ ಅಥವಾ ಇನ್ನಾವುದೇ ಸಿದ್ಧಾಂತದ ಅನುಯಾಯಿಗಳ ಅಪದ್ಧಗಳನ್ನು ಅವರವರ ವೈಯಕ್ತಿಕ ಅಕೌಂಟಿಗೆ ಹಾಕುತ್ತೇವೆಯೇ ಹೊರತು ಮಾವೋ, ಲೆನಿನ್‍ರ ಅಕೌಂಟಿಗಲ್ಲ. ನಿಜವಾಗಿ, ಸೆಕ್ಯುಲರ್ ಪ್ರಜಾತಂತ್ರದ ಗುಣವೇ ಇದು. ದುರಂತ ಏನೆಂದರೆ, ಪ್ರವಾದಿ ಮುಹಮ್ಮದ್ ಅನುಯಾಯಿಗಳು ಇಂಥದ್ದೇ ತಪ್ಪುಗಳನ್ನು ಮಾಡಿದರೆ ಅದನ್ನು ಆ ಅನುಯಾಯಿಗಳ ಖಾತೆಯ ಬದಲು ನೇರ ಪ್ರವಾದಿ ಮತ್ತು ಕುರ್‍ಆನ್‍ನ ಖಾತೆಗೆ ಸೇರಿಸಿ ಬಿಡಲಾಗುತ್ತದೆ. ಆ ಸಮಯದಲ್ಲಿ ಪವಿತ್ರ ಕುರ್‍ಆನಿನ ಯಾವ ಸೆಕ್ಯುಲರ್ ವಚನಗಳೂ ಮತ್ತು ಪ್ರವಾದಿ ಮುಹಮ್ಮದರ ಯಾವ ಸಮಾನತೆಯ ಪಾಠಗಳೂ ಉಲ್ಲೇಖಕ್ಕೆ ಒಳಗಾಗುವುದೇ ಇಲ್ಲ. ಲೆನಿನ್ ಅನುಯಾಯಿ ತಪ್ಪು ಮಾಡಬಲ್ಲನಾದರೆ ಪ್ರವಾದಿ ಮುಹಮ್ಮದ್‍ರ ಅನುಯಾಯಿ ಯಾಕೆ ತಪ್ಪು ಮಾಡಲಾರ ಎಂಬ ಪ್ರಶ್ನೆ ಉದ್ಭವವಾಗುವುದೇ ಇಲ್ಲ. ಬುದ್ಧನ ಅನುಯಾಯಿ, ಅಂಬೇಡ್ಕರ್ ಸಂವಿಧಾನದ ಅನುಯಾಯಿ, ವೇದೋಪನಿಷತ್ತುಗಳ ಅನುಯಾಯಿ, ಮಾಕ್ಸ್ ನ ಅನುಯಾಯಿ, ಬೈಬಲ್‍ನ ಅನುಯಾಯಿ, ಹಳೆ ಒಡಂಬಡಿಕೆಯ ಅನುಯಾಯಿ.. ಎಲ್ಲರೂ ತಪ್ಪು ಮಾಡಬಹುದು ಮತ್ತು ಅದರ ದೋಷ ಅದನ್ನು ಮಾಡಿದವರ ಖಾತೆಗೇ ಸೇರ್ಪಡೆಗೊಳ್ಳುತ್ತದೆ ಎಂದಾದರೆ ಪವಿತ್ರ ಕುರ್‍ಆನಿನ ಅನುಯಾಯಿ ಮಾತ್ರ ತಪ್ಪು ಮಾಡಬಾರದು ಎಂದೇಕೆ ಬಯಸ ಬೇಕು? ಅವರು ಹಾಗೆ ಮಾಡಿದರೆ ಅದರ ದೋಷ ಪವಿತ್ರ ಕುರ್‍ಆನಿನ ಖಾತೆಗೇ ಸೇರ್ಪಡೆಗೊಳ್ಳಬೇಕು ಎಂಬ ರೀತಿಯಲ್ಲೇಖೆ ಪ್ರತಿಕ್ರಿಯೆ ವ್ಯಕ್ತವಾಗ¨ ಬೇಕು? ಇದು ಮುಗ್ಧತನವೋ ಜಾಣತನವೋ?
ಉತ್ತರ ಎಲ್ಲರಿಗೂ ಗೊತ್ತಿದೆ.