ಆಪರೇಷನ್ ಕಮಲದ ಸಂಪೂರ್ಣ ಆಡಿಯೋ ಟಿವಿ ಮಾಧ್ಯಮಗಳ ಮೂಲಕ ರಾಜ್ಯಾದ್ಯಾ೦ತ ಬಿತ್ತರವಾಗುತ್ತಿದ್ದು, ಜನರು ಬೆಚ್ಚಿ ಬೀಳುವಂತಹ ಮಾಹಿತಿ ಈ ಎಂಬತ್ತು ನಿಮಿಷಗಳ ಆಡಿಯೋದಲ್ಲಿದೆ. ಸದ್ಯ ಬಿಜೆಪಿ ಮೌನಕ್ಕೆ ಶರಣಾಗಿದೆ. ಕನ್ನಡದ ಎಲ್ಲ ಟಿವಿ ಚಾನೆಲ್ ಗಳೂ ಈ ಆಡಿಯೋವನ್ನು ಭಾಗ ಒಂದು, ಎರಡು ಎಂಬಂತೆ ವಿಭಜಿಸಿ ಪ್ರಸಾರ ಮಾಡುತ್ತಿದ್ದು, ರಾಜ್ಯವೇ ನಾಚಿಕೊಳ್ಳುವಂತಹ ಮಾಹಿತಿಗಳು ಹೊರಬೀಳುತ್ತಿವೆ.
ಆಪರೇಷನ್ ಕಮಲದ ಫೈನಾನ್ಶಿಯರ್ ಆಗಿ ಯಡಿಯೂರಪ್ಪರ ಮಗ ವಿಜಯೇಂದ್ರ ಕಾಣಿಸಿಕೊಂಡಿದ್ದಾರೆ. ಯಡಿಯೂರಪ್ಪರು ಶರಣಗೌಡರಿಗೆ ನೇರವಾಗಿ ಹತ್ತು ಕೋಟಿ ರೂಪಾಯಿ ಆಮಿಷ ಒಡ್ಡುವ ಮತ್ತು ಚುನಾವಣಾ ಖರ್ಚಿಗೆ ಬೇರೆಯದೇ ಹಣದ ವ್ಯವಸ್ಥೆ ಮಾಡುವ ಮಾತಾಡಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಫಿಕ್ಸ್ ಆಗಿದ್ದಾರೆ ಎಂಬಂತೆ ಮತ್ತು ಅಮಿತ್ ಷಾ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಹಾಗೂ ರಾಜ್ಯಪಾಲರನ್ನೂ ಈ ಆಪರೇಷನ್ ನಲ್ಲಿ ಬಳಸಿಕೊಳ್ಳಲಾಗುವುದು ಎಂಬಂತೆ ಅಂಜಿಕೆಯಿಲ್ಲದೆ ಬಿಡುಬೀಸಾಗಿ ಆಡಿಯೋದಲ್ಲಿ ಬಿಜೆಪಿ ಶಾಸಕ ಶಿವನ ಗೌಡ ಹೇಳುತ್ತಿರುವುದು ಆಘಾತ ಹುಟ್ಟಿಸುವಂತಿದೆ.
ನಿನ್ನೆ ಬರಿಯ ಎರಡು ನಿಮಿಷಗಳ ಆಡಿಯೋವನ್ನು ಬಿಡುಗಡೆ ಮಾಡಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು, ಒಂದು ವೇಳೆ ಸಂಪೂರ್ಣ ಆಡಿಯೋ ಬಿಡುಗಡೆ ಮಾಡಿದರೆ ಬಿಜೆಪಿಯ ಕತೆ ಏನಾಗಬಹುದು ಎಂದು ವಿಧಾನ ಸಭೆಯಲ್ಲಿ ಪ್ರಶ್ನಿಸಿದ್ದರು.