ಬಿಹಾರ ಚುನಾವಣಾ ರ‌್ಯಾಲಿಯಲ್ಲಿ ತೇಜಸ್ವಿ ಯಾದವ್ ಮೇಲೆ ತೂರಿ ಬಂದ ಚಪ್ಪಲಿ: ವಿಡಿಯೋ ವೈರಲ್

0
597

ಸನ್ಮಾರ್ಗ ವಾರ್ತೆ

ಔರಂಗಾಬಾದ್: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರ ಔರಂಗಾಬಾದ್ ನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ರವರ ಮೇಲೆ ಚಪ್ಪಲಿಯನ್ನು ಎಸೆಯಲಾದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಯ ವಿಡಿಯೋ ರೆಕಾರ್ಡ್ ಆಗಿದ್ದು, ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿದೆ. ಚಪ್ಪಲಿಯೊಂದು ತೇಜಸ್ವಿ ಯಾದವ್‌ರವರ ಮುಖದ ಹತ್ತಿರದಲ್ಲಿ ತೂರಿ ಬಂದಿದ್ದು, ಸ್ವಲ್ಪದರಲ್ಲಿ ತಪ್ಪಿ ಅವರ ಹತ್ತಿರವಿದ್ದ ಇನ್ನೊಬ್ಬರ ಮಡಿಲಿಗೆ ಬಿದ್ದಿದೆ.

ಯಾದವ್ ಅವರ ಮೇಲೆ ಚಪ್ಪಲಿಯನ್ನು ಎಸೆದವರು ಯಾರು ಮತ್ತು ಏಕೆ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಅವರು ತಮ್ಮ ಭಾಷಣದಲ್ಲಿ ಅದನ್ನು ಉಲ್ಲೇಖಿಸದೆ ಸುಮ್ಮನಿದ್ದರು.

2017 ರಿಂದ ಜೈಲಿನಲ್ಲಿರುವ ತಮ್ಮ ತಂದೆ ಲಾಲು ಪ್ರಸಾದ್ ಯಾದವ್‌ ರವರ ಅನುಪಸ್ಥಿತಿಯಲ್ಲಿ ಆರ್‌ಜೆಡಿ (ರಾಷ್ಟ್ರೀಯ ಜನತಾದಳ)ಯ ತೇಜಸ್ವಿ ಯಾದವ್ ಅವರು ಬಿಹಾರ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.