ರಾಮಮಂದಿರ ರಾಜಕೀಯಗೊಳಿಸುವುದನ್ನು ನೋಡಿ ಸುಮ್ಮನೆ ಕೂರಲಾಗದು: ಶ್ರುತಿ ಹರಿಹರನ್

0
2415

ಸನ್ಮಾರ್ಗ ವಾರ್ತೆ

ಬೆಂಗಳೂರು: ‘ಅಯೋಧ್ಯೆಯಲ್ಲಿ ಜ. 22ರಂದು ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ರಾಜಕೀಯಗೊಳಿಸುವುದನ್ನು ನೋಡುತ್ತಾ ಸುಮ್ಮನೆ ಕೂರಲಾಗದು’ ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಂವಿಧಾನ ಪೀಠಿಕೆ ಚಿತ್ರದ ಜತೆಗೆ ಈ ವಿಷಯ ಹಂಚಿಕೊಂಡಿರುವ ಅವರು, ‘ಧರ್ಮದ ವಿಷಯದಲ್ಲಿ ರಾಜಕೀಯ ನಡೆಯುತ್ತಿದೆ. ಅದು ಸುಮ್ಮನೆ ನೋಡುತ್ತ ಕೂರಬೇಕಾದ ಸಂಗತಿಯಲ್ಲ’ ಎಂದಿದ್ದಾರೆ.

‘ಈ ಸಮಯದಲ್ಲಿ ಸಂವಿಧಾನವನ್ನು ನೆನಪಿಸಿಕೊಳ್ಳುವುದು ಏಕೆ ಮುಖ್ಯ?’ ಎಂಬ ಪ್ರಶ್ನೆಯೊಂದಿಗೆ ಉತ್ತರವನ್ನೂ ಶ್ರುತಿ ಬರೆದುಕೊಂಡಿದ್ದಾರೆ.

‘ಈ ಸನ್ನಿವೇಶದಲ್ಲಿ ಯಾವುದು ಉತ್ತಮವೋ ಅದರಲ್ಲೇ ಸಾಗುವುದು ಉತ್ತಮ ಎಂಬ ನಂಬಿಕೆ ನನ್ನದು. ಹೀಗಾಗಿ ಈ ಸಂದರ್ಭದಲ್ಲಿ ಸಂವಿಧಾನವನ್ನು ನೆನೆಯುವುದು ನನಗೆ ಅತ್ಯಗತ್ಯ ಎಂದೆನಿಸಿದೆ. ಏಕೆಂದರೆ ‘ಧರ್ಮದ ವಿಷಯದಲ್ಲಿ ದೇಶವು ತಟಸ್ಥವಾಗಿರಬೇಕು. ಜತೆಗೆ ಯಾವುದೇ ನಿರ್ದಿಷ್ಟ ಧರ್ಮವನ್ನು ಪೋಷಿಸುವುದು ಅಥವಾ ಅದರ ವಿರುದ್ಧ ತಾರತಮ್ಯ ಮಾಡುವುದನ್ನೂ ಮಾಡಬಾರದು’ ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದರೆ ಇಂದು ಧರ್ಮವನ್ನು ರಾಜಕೀಯಗೊಳಿಸಲಾಗುತ್ತಿದೆ. ಇದನ್ನು ನೋಡಿಯೂ ಸುಮ್ಮನೆ ಕೂತು, ಗಮನಿಸುವುದೂ ಸರಿಯಲ್ಲ’ ಎಂದು ಶ್ರುತಿ ಹೇಳಿದ್ದಾರೆ.

‘ಎರಡನೆಯದಾಗಿ – ಜೈ ಶ್ರೀ ರಾಮ್! “ಹೀಗೆ ಹೇಳುವುದರಲ್ಲಿ ಯಾವುದೇ ತೊಂದರೆಗಳಿಲ್ಲ. ರಾಮನ ಗುಣಗಳಿಂದ ಯಾರು ತಾನೆ ಪ್ರೇರಿತರಾಗುವುದಿಲ್ಲ? ಹನುಮಂತನು ರಾಮ ತನ್ನಲ್ಲಿದ್ದಾನೆ ಎನ್ನುವುದನ್ನು ತೋರಿಸಲು ಎದೆಯನ್ನೇ ಸೀಳಿದ್ದು ಕಾಕತಾಳೀಯವಲ್ಲ ಎಂದು ನಾನು ಭಾವಿಸುತ್ತೇನೆ. ಬಹುಶಃ ರಾಮನನ್ನು ನಮ್ಮೊಳಗೆ ನಾವು ಹುಡುಕಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ರಾಮಾಯಣದೊಳಗೆ ಇದನ್ನು ಹಾಕಲಾಗಿದೆಯೇ?’ ಎಂದು ಶ್ರುತಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ನಡೆದ ಬಾಲರಾಮ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಚಿತ್ರರಂಗದ ಹಲವಾರು ನಟ, ನಟಿ, ನಿರ್ದೇಶಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ವ್ಯತಿರಿಕ್ತವಾಗಿ ಮಲಯಾಳಂ ಚಿತ್ರರಂಗದ ಕೆಲವು ನಟರು, ನಿರ್ದೇಶಕರು ಸಂವಿಧಾನದ ಪೀಠಿಕೆಯನ್ನು ಹಂಚಿಕೊಂಡಿದ್ದರು. ಇದೇ ಮಾದರಿಯಲ್ಲಿ ಕನ್ನಡದ ಖ್ಯಾತ ನಟಿ ಶ್ರುತಿ ಹರಿಹರನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಂವಿಧಾನದ ಪೀಠಿಕೆಯ ಚಿತ್ರ ಹಂಚಿಕೊಂಡಿದ್ದಾರೆ.

https://www.instagram.com/p/C2a51-NiJ5M/?utm_source=ig_web_button_share_sheet

https://www.instagram.com/p/C2a51-NiJ5M/?utm_source=ig_web_copy_link