ಗದ್ಧಾಫಿಯ ನಂತರದ ಲಿಬಿಯ…

0
1191

ಲಿಬಿಯದಲ್ಲಿ ಪುನಃ ರಕ್ತರಂಜಿತ ಗಲಭೆ ಯಾಗಿದೆ. ಹೊಸ ಬೆಳವಣಿಗೆಯಲ್ಲಿ ಟ್ರಿಪೋಲಿ ಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಮುಹಮ್ಮರ್ ಗದ್ಧಾಪಿಯ ಕತೆ ಮುಗಿಸಿದ ಬಳಿಕ ಈತ ಲಿಬಿಯ ಹಳೆಯ ಆ ಸುಭಿಕ್ಷಾ ಲಿಬಿಯವಾಗಿಲ್ಲ. ಬದಲಾ ವಣೆಯೆಂದು ಅಮೆರಿಕದ ತೆಕ್ಕೆಯಲ್ಲಿ ಕೂತ ಕ್ರಾಂತಿಗಿಳಿದವರು ಗದ್ಧಾಫಿಯನ್ನು ಕೊಂದ ಬಳಿಕ ಅಮೆರಿಕದ ಮಡಿಲಲ್ಲಿ ವಿರಾಜಮಾನರಾಗಿದ್ದಾರೆ ಅಂದರೆ ಕೂತರು ಎನ್ನಲಡ್ಡಿಯಿಲ್ಲ. ಹೀಗೆ ಇತ್ತೀಚೆಗಿನ ಹೊಸ ಬೆಳವಣಿಗೆಯಲ್ಲಿ ಟ್ರಿಪೊಲಿ ಕೇಂದ್ರ ವಾಗಿ ಕಾರ್ಯನಿರ್ವಹಿಸುವ ಮತ್ತು ವಿಶ್ವಸಂಸ್ಥೆ ಯಿಂದ ಅಂಗೀಕಾರ ಪಡೆದುಕೊಂಡಿರುವ ಅಮೆರಿಕ ಕೃಪಾಶ್ರಿತ ಸರಕಾರ ತುರ್ತು ಪರಿಸ್ಥಿತಿ ಹೇರಿದೆ.

ವಿಶೇಷ ಅಂದರೆ ಲಿಬಿಯದಲ್ಲಿ ಎರಡು ಸರಕಾರಗಳು ಇವೆ. ಒಂದಕ್ಕೊಂದು ಪರ್ಯಾಯ ವೆಂಬಂತೆ. ಟ್ರಿಪೋಲಿಯಲ್ಲಿ ಜಿಎನ್‍ಎ ಆಡಳಿತ ನಡೆಸುತ್ತಿದ್ದರೆ ಟೊಬ್ರ್ಯೂಕ್ ಕೇಂದ್ರವಾಗಿ ಆಡಳಿತ ನಡೆಸುವ ಸರಕಾರ ಇನ್ನೊಂದು. ಇದನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್‍ಸ್ ಎಂದು ಹೇಳುತ್ತಾರೆ. ಕದನ ವಿರಾಮ ಕರಾರು ಉಲ್ಲಂಘಿಸಿ ದ್ದರಿಂದ ಲಿಬಿಯದಲ್ಲಿ ಹೊಸ ಸಂಘರ್ಷಕ್ಕೆ ನಾಂದಿಯಾಗಿದೆ ಎನ್ನುವುದು ಹೊಸ ವಿದ್ಯಮಾನ. ಈ ಘರ್ಷಣೆಯಲ್ಲಿ ಸಾಮಾನ್ಯ ಜನರನ್ನು ಮತ್ತು ಮಕ್ಕಳನ್ನು ಕೊಲ್ಲಲಾಗುತ್ತಿದೆ.

ಸಾಕ್ಷಾತ್ ಬೀದಿ ಯುದ್ಧ ಅಲ್ಲಿ ನಡೆಯುತ್ತಿದೆ. ಜನರನ್ನು ಪರಸ್ಪರ ಹೊಡೆದಾಡಿಸಲಾಗುತ್ತಿದೆ. ಬೀದಿ ಕಾಳಗದಲ್ಲಿ ಒಂದು ಊರಿನ ಜನರು ಎರಡು ಗುಂಪಾಗಿ ಪರಸ್ಪರ ಕಾದಾಡಿದರೆ ಹೆಣಗಳ ರಾಶಿ ಬೀಳುವುದಲ್ಲದೆ ಮತ್ತೇನೂ ಇಲ್ಲ. ಈ ಘರ್ಷಣೆಗೆ ಅರ್ಥ ಎಂತಹದಿದೆ ಎಂದರೆ ರಾಜಕೀಯ ಅಧಿಕಾರ ಗಳಿಕೆಯ ಪೈಪೋಟಿಯೆಂದಲ್ಲದೆ ಬೇರೇನೂ ಆದರ್ಶವೋ ಸಿದ್ಧಾಂತವೋ ಕಾರಣವಲ್ಲ.

ಅಮೆರಿಕಕ್ಕಿಂತಲೂ ಲಿಬಿಯದಲ್ಲಿನ ಈಗಿನ ಎರಡು ಸರಕಾರಗಳ ನಡುವಿನ ಗುದ್ದಾಟಗಳಿಗೆ ಯುರೋಪ್ ಮತ್ತು ಮಿಡ್ಲೀಸ್ಟ್‍ಗಳು ಹೆಚ್ಚು ಕಾರಣ ಎನ್ನಲಾಗುತ್ತಿದೆ. ಹಾಗಂತ ಅಮೆರಿಕ ಇದರ ಹಿಂದಿಲ್ಲ ಎನ್ನುವಂತಿಲ್ಲ. ಮುಂಬೆಂಬಲಕ್ಕಿಂತ ಹಿಂಬೆಂಬಲ ವನ್ನೇ ಅದು ನೆಚ್ಚಿಕೊಂಡಂತೆ ಕಾಣಿಸುತ್ತಿದೆ. ಅರ್ಥಾತ್ ಫ್ರಾನ್ಸ್ ಮತ್ತು ಇಟಲಿ ಎರಡು ಭಾಗದಲ್ಲಿ ನಿಂತಿವೆ. ಅಂದರೆ ಲಿಬಿಯದ ಎರಡು ಸರಕಾರಗಳಲ್ಲಿ ಒಂದನ್ನು ಆಯ್ದು ಕೊಂಡು ಫ್ರಾನ್ಸ್ ಅತ್ತಕಡೆ ಇಟಲಿ ಇತ್ತಕಡೆ. ಈ ಕಡೆ, ಬೆಂಬಲ ಏನೇ ಇದ್ದರೂ ಬೀದಿಗಿಳಿದು ಗುದ್ದಾಡುವುದು ಲಿಬಿಯನ್ನರು, ಸತ್ತು ಬೀಳುತ್ತಿರುವುದೂ ಅವರೇ.

ಇಷ್ಟಕ್ಕೇ ಮುಗಿಯುವುದಿಲ್ಲ. ಮಧ್ಯ ಏಷ್ಯದ ಕೆಲವು ದೇಶಗಳು ಲಿಬಿಯದಲ್ಲಿ ತಮ್ಮ ಪಾಲನ್ನು ಪಡೆಯಲು ಹಾತೊರೆಯುತ್ತಿವೆ. ಲಿಬಿಯದ ಸಶಸ್ತ್ರ ವಿಭಾಗಕ್ಕೆ ಆಯುಧ ಕೊಡಬಾರದು ಎಂಬ ನಿಬಂಧನೆಯನ್ನು ವಿಶ್ವಸಂಸ್ಥೆ ಮಾಡಿತು. ಅದರೆ ನಿಬಂಧನೆಗಳನ್ನೆಲ್ಲ ಗಾಳಿಗೆ ತೂರಿ ಹಲವರು ಅಲ್ಲಿಗೆ ಆಯುಧ ಕೊಂಡುಹೋಗಿ ಕೊಡುತ್ತಿದ್ದಾರೆ. ಹೀಗಾಗಿ ಕದನವಿರಾಮ ಹೋಗಿ ಶಸ್ತ್ರಾಸ್ತ ಘರ್ಷಣೆ ನಡೆಯುತ್ತಿದೆ. ಒಟ್ಟಿನಲ್ಲಿ ಲಿಬಿಯದಲ್ಲಿ ಲಿಬಿಯದ ಜನರು ಆಶಿಸಿದ್ದು ಏನೂ ನಡೆಯುವು ದಿಲ್ಲ ಮತ್ತು ವಿದೇಶಿ ರಾಷ್ಟ್ರಗಳು ಬಯಸಿದ್ದು ಅಲ್ಲಿ ನಡೆಯುತ್ತಿದೆ ಎನ್ನುವುದು ಸಾರ.
ಎರಡು ಸರಕಾರಗಳನ್ನು ಹೊರಗಿನಿಂದ ಪ್ರಮುಖ ದೇಶಗಳು ಒಂದೇರೀತಿ ಬೆಂಬಲಿಸುತ್ತಿವೆ. ಫ್ರಾನ್ಸ್, ಈಜಿಪ್ಟ್, ಯುಎಇ ಒಂದೆಡೆ, ಇಟಲಿ, ಕತರ್, ಟರ್ಕಿ ಇನ್ನೊಂದು ಕಡೆಯಲ್ಲಿ. ಎರಡೂ ಕೂಟಗಳು ಅವರು ಬೆಂಬಲಿಸುತ್ತಿರುವ ವಿಭಾಗ ಗಳಿಗೆ ಇಷ್ಟ ಬಂದಂತೆ ಆಯುಧ ಕೊಡುತ್ತಿದ್ದಾರೆ. ಇದೇ ವೇಳೆ ಲಿಬಿಯದಲ್ಲಿ ಹೊಸ ಚುನಾವಣೆ ನಡೆಸಿ ರಾಷ್ಟ್ರೀಯ ಸರಕಾರವನ್ನು ಚಾಲ್ತಿಗೆ ತರ ಬೇಕೆಂದು ಫ್ರಾನ್ಸ್ ಮಂತ್ರಿಸುತ್ತಿದೆ. ಇದುವೇ ಪರಿ ಹಾರ ಅಂತ ಅದರ ವಾದ. ಆದರೆ, ಮೊದಲು ಲಿಬಿಯಕ್ಕೊಂದು ಸಂವಿಧಾನ ಬರಲಿ. ನಂತರವೇ ಚುನಾವಣೆ ಎಂದು ಇಟಲಿ ವಾದಿಸುತ್ತಿದೆ ಅಥವಾ ಇದನ್ನು ಲಿಬಿಯನ್ನರ ವಾದ ಎನ್ನಬಹು ದೇನೋ. ಸರ್ವಾಧಿಕಾರದಲ್ಲಿ ಮುಂದೆ ಹೋದ ಅಥವಾ ಮುಹಮ್ಮರ್ ಗದ್ಧಾಫಿಯ ಆಳ್ವಿಕೆಯಲ್ಲಿ ಸರ್ವಾಂಗೀಕೃತ ಸಂವಿಧಾನ ಎಂಬುದಿರಲಿಲ್ಲ. ಮಾತ್ರವಲ್ಲ ಲಿಬಿಯಕ್ಕೆ ಒಂದು ಸಂವಿಧಾನ ಎಂಬುದೇ ಇಲ್ಲ. ಈ ಅಗತ್ಯಕ್ಕೆ ಅರುವತ್ತು ಮಂದಿಯ ಸಮಿತಿ ರಚಿಸಿದ್ದೇನೋ ಆಯಿತು. ಆದರೆ ಸಂವಿಧಾನಕ್ಕೆ ಕಾನೂನು ಮಾನ್ಯತೆ ಇರಬೇಕಾದರೆ ಒಂದು ರೆಫರೆಂಡಂ ಅಗತ್ಯವಾಗು ತ್ತದೆ. ಮಾತ್ರವಲ್ಲ ಮೂರರಲ್ಲಿ ಎರಡರಷ್ಟು ಬಹು ಮತ ಕೂಡ ಇರಬೇಕಾಗುತ್ತದೆ.

ಒಂದು ಸಮನ್ವಯ ಸಮ್ಮೇಳನ ನಡೆಸೋಣ ಅಂತ ಲಿಬಿಯ ಮಾತಾಡುತ್ತಿದೆ. ಆದರೆ ಅದನ್ನು ನಡೆಸುವುದು ಯಾರು ಎನ್ನುವುದು ಈಗ ಅಲ್ಲಿ ಮುಖ್ಯ ವಿಷಯವಾಗಿದೆ. ಒಂದು ಕೇಂದ್ರೀಕೃತ ಆರ್ಥಿಕ ವ್ಯವಸ್ಥೆ ಕೂಡ ನಾಡಿಗಿಲ್ಲ. ಸೆಂಟ್ರಲ್ ಬ್ಯಾಂಕ್ ಇಬ್ಭಾಗವಾಗಿದೆ. ಅರ್ಥಾತ್ ಈ ವಿಭಜಿತ ರೀತಿಯಲ್ಲಿ ಅದು ಮುಂದೆ ಸಾಗುತ್ತಿದೆ. ಎರಡು ಗುಂಪುಗಳಾಗಿ ಘರ್ಷಣೆ ನಡೆಸುತ್ತಿರುವ ವವರ ಕೈಗೆ ಧಾರಾಳ ಆಯುಧಗಳು ಬಂದು ಸೇರಿಕೊಳ್ಳುತ್ತಿವೆ. ಲಿಬಿಯದಲ್ಲಿ ಸಮಸ್ಯೆ ಮುಗಿಯ ದಿರುವುದಕ್ಕೆ ಮುಖ್ಯ ಕಾರಣ ಇದು. ಅದಲ್ಲದೆ ವಿದೇಶಗಳ ಕುಟಿಲ ಮನಸ್ಸು ಲಿಬಿಯ ಒಡೆದು ಹೋಳಾಗಿ ಪಾಲಾಗಿ ನಮಗೆ ಸಿಗಲಿ ಎಂದು ಜಪ ಮಾಡುತ್ತಿವೆ. ಹಲವಾರು ವರ್ಷ ಮುಹಮ್ಮರ್
ಗದ್ಧಾಫಿಯ ಸರಕಾರ ಅಲ್ಲಿತ್ತು. ಥೇಟ್ ಸರ್ವಾಧಿಕಾರಿ ಮನುಷ್ಯನ ಕೈಕೆಳಗೆ ಲಿಬಿಯ ಬೆಚ್ಚಗೆ ಇತ್ತು. ನಿಟ್ಟುಸಿ ರಿಟ್ಟವರಿರಬಹುದು. ಉಸಿರು ಬಿಗಿದು ಬಿಗಿದು ಬಿಡು ವವರು ಇದ್ದಿರಬಹುದು. ಈ ವ್ಯವಸ್ಥೆಗೆ ಹೊಂದಿ ಕೊಂಡ ಲಿಬಿಯದ ಜನತೆಗೆ ಗದ್ಧಾಫಿ ನಿರ್ಮೂ ಲಿಸಿದ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎನ್ನಲಾಯಿತು. ಇದನ್ನೇ ಸ್ವಾತಂತ್ರ್ಯ ಸ್ವಾತಂತ್ರ್ಯ ಎಂದು ಕರೆದರು. ಆದರೆ, ಲಿಬಿಯವನ್ನು ಪ್ರಜಾಪ್ರಭುತ್ವ ಶೈಲಿಗೆ ತರಲು ಆಗಬೇಕಾದ ಕೆಲಸ ನಂತರ ಆಗಲಿಲ್ಲ.

ಪರಸ್ಪರ ಕಾದುತ್ತಿರುವ ವಿಭಾಗಗಳನ್ನು ಒಂದು ದುಂಡು ಮೇಜಿನ ಬಳಿ ಕುಳ್ಳಿರಿಸಿ ಚರ್ಚಿಸಿದರೆ ಹಳೆ ವೈಭವಕ್ಕೆ ಲಿಬಿಯ ಬರಬಹುದು ಎಂಬುದು ಅಂತಾರಾಷ್ಟ್ರೀಯ ವಿಚಾರಗಳ ವಿಶ್ಲೇಷಕರ ಅಭಿ ಪ್ರಾಯ. ಇಲ್ಲಿಯೂ ಕೆಲವರು ತಮ್ಮ ಕುಟಿಲ ಮನ ಸ್ಥಿತಿಯನ್ನು ದೂರ ಇಟ್ಟು ಪ್ರಾಮಾಣಿಕವಾಗಿ ಚಿಂತಿ ಸಲು ತಯಾರಿಲ್ಲ. ಶಾಂತಿ ಮಾತುಕತೆ ರಾಜಿಮಾತು ಕತೆ, ಜನರ ಬದುಕಿನ ಕುರಿತು ಹೆಚ್ಚಿನ ಕಾಳಜಿ ಬಿಂಬಿಸಲ್ಪಟ್ಟಾಗಲೇ ಅಥವಾ ಅಂತಹ ಮನಸ್ಥಿತಿ ನಿರೂಪಗೊಂಡರೆ ಲಿಬಿಯ ಶಾಂತಿಯೆಡೆಗೆ ಮರಳಿ ಬರಬಹುದು. ಆದರೆ ಹೊರಗಿನಿಂದ ಕೋಲು ಹಾಕುತ್ತಿರುವ ವಿದೇಶಿ ಕೂಟಗಳು ಇದಕ್ಕೆ ಆಸ್ಪದ ನೀಡಿಯಾವೇ? ಸದ್ಯ ಯಕ್ಷ ಪ್ರಶ್ನೆ ಇದು.