ಜೆಸ್ಕಾಂ ಸಿಬ್ಬಂದಿಗೆ ಥಳಿತ ಪ್ರಕರಣ: ಕಾಂಗ್ರೆಸ್ ಗ್ಯಾರಂಟಿ ಕಾರಣವೇ? ಇಲ್ಲಿದೆ ವಾಸ್ತವ ಸ್ಟೋರಿ.

0
140

ಸನ್ಮಾರ್ಗ ವಾರ್ತೆ

ಕೊಪ್ಪಳ: ಬಾಕಿ ವಿದ್ಯುತ್ ಬಿಲ್ ವಸೂಲಿಗೆ ಹೋಗಿದ್ದ ಜೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೊರ್ವ ಚಪ್ಪಲಿಯಿಂದ ಥಳಿಸಿದ ಘಟನೆಯನ್ನು ಕಾಂಗ್ರೆಸ್ ಗ್ಯಾರಂಟಿಯನ್ನು ನಂಬಿ ವಿದ್ಯುತ್ ಬಿಲ್ ಕಟ್ಟಲು ಗ್ರಾಹಕ ನಿರಾಕರಿಸಿ, ಹಲ್ಲೆ ನಡೆಸಿದ್ದಾಗಿ ಸುಳ್ಳು ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು.

ವಾಸ್ತವದಲ್ಲಿ ಈ ಘಟನೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕ ಇಲಾಖೆ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾಗಿದೆ.

ಚಂದ್ರಶೇಖರ್ ಹಿರೇಮಠ್ ಎಂಬವರು ಸುಮಾರು 9000 ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಇದಕ್ಕಾಗಿ ಜೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಆರೋಪಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾನೆ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿದಾಗ ಅಧಿಕಾರಿಗಳ ಮೇಲೆ ವ್ಯಕ್ತಿ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ ಎಂದು ಕೊಪ್ಪಳ ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.

ಕೊಪ್ಪಳದಲ್ಲಿ ಎಸ್‌ಪಿ ಯಶೋಧಾ ವಂಟಗೋಡಿ ಮಾತನಾಡಿ, “ಲೈನ್‌ಮ್ಯಾನ್ ಮಂಜುನಾಥ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ವ್ಯಕ್ತಿ ಚಂದ್ರಶೇಖರಯ್ಯ. ಈತ ಕಳೆದ ಆರು ತಿಂಗಳಿಂದ ವಿದ್ಯುತ್ ಬಿಲ್ ಕಟ್ಟಿಲ್ಲ ಎಂದಿದ್ದಾರೆ.

“ವಿದ್ಯುತ್ ಬಿಲ್ ಕಟ್ಟದ ಹಿನ್ನೆಲೆಯಲ್ಲಿ ಜೆಸ್ಕಾಂ ಸಿಬ್ಬಂದಿ ಚಂದ್ರಶೇಖರಯ್ಯ ಮನೆಯ ಕರೆಂಟ್ ಲೈನ್ ಕಟ್ ಮಾಡಿದ್ದರು. ಆದರೂ ಮತ್ತೆ ಅನಧಿಕೃತ ವಿದ್ಯುತ್ ಸಂರ್ಪಕ ಪಡೆದಿದ್ದ ಚಂದ್ರಶೇಖರಯ್ಯ. ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದನ್ನು ಪ್ರಶ್ನಿಸಿದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ನಡೆಸಿದ ಚಂದ್ರಶೇಖರಯ್ಯ ವಿರುದ್ಧ ಮಂಜುನಾಥ್ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೀಗಾಗಿ ಚಂದ್ರಶೇಖರಯ್ಯ ಅವರನ್ನು ಬಂಧಿಸಿದ್ದೇವೆ. ಮುಂದೆ ಕಾನೂನು ಕ್ರಮ ಕೈಗೊಳ್ಳುತ್ತೇವೆಂದು” ಎಂದು ಎಸ್‌ಪಿ ತಿಳಿಸಿದ್ದಾರೆ.