ಸನ್ಮಾರ್ಗ ವಾರ್ತೆ
ಉತ್ತರಪ್ರದೇಶ,ಡಿ.24: ಮುಝಪ್ಫರ್ ನಗರ ಕೋಮು ಗಲಭೆ ಕಾರಣವಾದ ದ್ವೇಷಪೂರಿತ ಭಾಷಣ ಮಾಡಿದ್ದ ಬಿಜೆಪಿ ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಲು ಉತ್ತರ ಪ್ರದೇಶ ಯೋಗಿ ಸರಕಾರ ಸಿದ್ಧವಾಗಿದೆ ಎಂಬುದಾಗಿ ವರದಿಯಾಗಿದೆ. ಮುಝಫ್ಫರ್ ನಗರದ ಮಂದೇರ್ ಗ್ರಾಮದಲ್ಲಿ ಮಹಾ ಪಂಚಾಯತ್ ವೇಳೆ ದ್ವೇಷದ ಭಾಷಣ ಮಾಡಿದ ಮೂವರು ಬಿಜೆಪಿ ಶಾಸಕರ ವಿರುದ್ಧ ಕೇಸನ್ನು ಹಿಂಪಡೆಯಲಾಗುತ್ತಿದೆ.
ಸಂಗೀತ್ ಸೋಮ್, ಸುರೇಶ್ ರಾಣ, ಕಪಿಲ್ ದೇವ್ ವಿರುದ್ಧ ಗಲಭೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿತ್ತು. ಮುಝಫ್ಫರ್ ನಗರದಲ್ಲಿ 2013 ಸೆಪ್ಟಂಬರಿನಲ್ಲಿ ಇಬ್ಬರು ಯುವಕರು ಕೊಲೆಯಾಗಿದ್ದು ನಂತರ ಜಾಟ್ ಸಮುದಾಯದ ಮಹಾ ಪಂಚಾಯತ್ನಲ್ಲಿ ಇವರು ದ್ವೇಷಯುತ ಭಾಷಣ ನೀಡಿದ್ದರು. ತದನಂತರ ನಡೆದ ಗಲಭೆಯಲ್ಲಿ 65 ಮಂದಿ ಮೃತಪಟ್ಟಿದ್ದರು. 40,000 ಮಂದಿ ಮನೆ-ಮಠ ಕಳಕೊಂಡಿದ್ದರು.
ಮಹಾ ಪಂಚಾಯತ್ನಲ್ಲಿ ಅಕ್ರಮಕ್ಕೆ ಪ್ರೇರೇಪಿಸುವ ರೀತಿಯಲ್ಲಿ ಬಿಜೆಪಿ ಶಾಸಜರು ಮಾತಾಡಿದ್ದಾರೆ ಎಂದು ವಿಶೇಷ ತನಿಖಾ ತಂಡ ಕೇಸು ದಾಖಲಿಸಿತ್ತು. ಈ ಹಿಂದೆ ಬಿಜೆಪಿ ಸಂಸದ ಸಂಜೀವ್ ಬಲಿಯಾನ್ ನೇತೃತ್ವದ ಒಂದು ತಂಡ ಮುಖ್ಯಮಂತ್ರಿಯನ್ನು ಭೇಟಿಯಾಗಿ ಹಿಂದುಗಳಿಗೆ ಸಂಬಂಧಿಸಿದ ಗಲಭೆಯ ಕೇಸನ್ನು ಹಿಂಪಡೆಯಬೇಕೆಂದು ಆಗ್ರಹಿಸಿತ್ತು.