ಮ್ಯಾನ್ಮಾರ್ ನಿರಾಶ್ರಿತರು ಮತ್ತು ಊಕಿಯ

0
1203

ಬಾಂಗ್ಲಾದೇಶದ ಕಾಕ್ಸ್ ಬಝಾರಿನಲ್ಲಿ ಬರ್ಮಾ ನಿರಾಶ್ರಿತರ ಕೇಂದ್ರವಿದೆ. ರೋಹಿಂಗ್ಯನ್ ನಿರಾಶ್ರಿತರು ಜೀವ ಪಣಕ್ಕಿಟ್ಟು ಭವಿಷ್ಯವನ್ನು ಹುಡುಕುತ್ತಿರುವ ತಾಣವಿದು. ಬಾಂಗ್ಲಾ ಸರಕಾರ ಮ್ಯಾನ್ಮಾರ್‍ಗೆ ಈ ಜೀವಗಳನ್ನು ಮರಳಿ ಕಳುಹಿ ಸಲು ಯತ್ನಿಸುತ್ತಲೂ ಇದೆ. ನಿ ರಾಶ್ರಿತರಾಗಿ, ಸಂತ್ರಸ್ತರಾಗಿ ಈ ಜನರು ಬಂದ ಮೇಲೆ ಬಾಂಗ್ಲಾಕ್ಕೆ ಅಂತಹ ಹಾನಿಯೇನಾಗಿಲ್ಲ. ನಾಲ್ಕೂ ಕಡೆಗಳಿಂದ ನೆರವಿನ ಮಹಾಪೂರವೇ ಹರಿದು ಬಂತು. ಮ್ಯಾನ್ಮಾರಿನ ತೀವ್ರವಾದಿ ಬುದ್ದಿಸ್ಟರ ಕೋಮುದ್ವೇಷದ ಅಗ್ನಿ, ಸರಕಾರಿ ಸೇನೆಯ ದಮನ, ದೌರ್ಜನ್ಯದಿಂದ ನಲುಗಿದ ಬಡಪಾಯಿ ಗಳು ಕಾಕಸ್ ಬಝಾರಿನ ಸುತ್ತಲೂ ತುಂಬಿ ಕೊಂಡಿದ್ದಾರೆ. ಬಾಂಗ್ಲಾದೇಶ ಹಿಂದೆಂದೂ ಕಾಣ ದಷ್ಟು ಕಾಕಸ್ ಬಝಾರಿಗೆ ಹಣದ ಮಹಾಪೂರವೇ ಹರಿದು ಬಂದಿದೆ.
ಕಾಕಸ್ ಬಝಾರ್‍ನಿಂದ 40 ಕಿಲೋ ಮೀಟರ್ ದೂರದಲ್ಲಿ ಒಂದು ಸಬ್ ಜಿಲ್ಲೆಯಿದ್ದು ಇದನ್ನು ಉಕಿಯ ಎಂದು ಕರೆಯಲಾಗುತ್ತದೆ. ಇಲ್ಲಿ ಸುಮಾರು 144ಕ್ಕೂ ಹೆಚ್ಚು ಪ್ರಾದೇಶಿಕ ಮತ್ತು ಅಂತಾರಾಷ್ಟ್ರಿಯ ಎನ್‍ಜಿವೊಗಳು ಸೇವಾ ನಿರತವಾಗಿವೆ. ಕಳೆದ ಆಗಸ್ಟ್ ನಿಂದ ಮ್ಯಾನ್ಮಾರಿನ ಅಥವಾ ಬರ್ಮಾದ ರಾಕೈನ್ ರಾಜ್ಯದಿಂದ ಚದುರಿ ಓಡಿ ಬಂದ ಲಕ್ಷಾಂತರ ರೋಹಿಂಗ್ಯನರು ನಿರಾಶ್ರಿತರಾಗಿ ಇಲ್ಲಿ ವಾಸಿಸುತ್ತಿದ್ದಾರೆ.

2018 ಜೂನ್ ವರೆಗೆ 918, 936 ನಿರಾಶ್ರಿತರು ಇಲ್ಲಿಗೆ ಬಂದಿದ್ದಾರೆಂದು ಲೆಕ್ಕ ಹಾಕಲಾಗಿತ್ತು. ಇಲ್ಲಿ ಬಾಂಗ್ಲಾದೇಶೀ ಪ್ರಜೆಗಳಿಗಿಂತ ಹೆಚ್ಚು ಮ್ಯಾನ್ಮಾರಿನಿಂದ ಇಲ್ಲಿಗೆ ನಿರಾಶ್ರಿತರಾಗಿ ಪಲಾಯನ ಮಾಡಿ ಬಂದಿರುವವರು ವಾಸವಿದ್ದಾರೆ. ಗತ್ಯಂತರವಿಲ್ಲದೆ ಕಾಡು ಬೆಟ್ಟಗಳ ದುರ್ಗಮ ದಾರಿಯಲ್ಲಿ ನಡೆಯುತ್ತಾ ನದಿ ದಾಟಿ ಕಾಕಸ್ ಬಝಾರಿನ ವ್ಯಾಪ್ತಿಗೆ ಇವರು ಸೇರಿಕೊಂಡರು. ಇಲ್ಲೀಗ ಇವರ ಜನಸಂಖ್ಯೆ ಇಲ್ಲಿನ ಬಾಂಗ್ಲಾದೇಶಿ ಯರಿಗಿಂತ ಶೇ. 75ರಷ್ಟು ಹೆಚ್ಚು ಇದೆಯೆಂದು ಬಾಂಗ್ಲಾ ಸರಕಾರದ ಸೆನ್ಸಸ್ ಲೆಕ್ಕ ಬಹಿರಂಗ ಗೊಳಿಸಿದೆ. ಉಕಿಯ ಅಂತೂ ಹೆಚ್ಚು ಜನ ನಿಬಿಡ ಪ್ರದೇಶವಾಗಿ ಮಾರ್ಪಟ್ಟಿದೆ. ಇಲ್ಲಿ 20 ನಿರಾಶ್ರಿತ ಶಿಬಿರಗಳಿವೆ.
ಎಲ್ಲಿಂದ ಎಷ್ಟೇ ನೆರವು ಹರಿದು ಬಂದರೂ ನಿರಾಶ್ರಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕೆಲಸವನ್ನು ಮಾಡುತ್ತಿರುವ ಹಲವಾರು ಎನ್‍ಜಿಒಗಳಿವೆ. ಎನ್‍ಜಿವೊಗಳು ಎಷ್ಟು ದುಡಿದರೂ ಲಕ್ಷಾಂತರ ಮಂದಿಯ ಜೀವನ ಸರಿಪಡಿಸುವುದು ಸುಲಭ ಅಲ್ಲ. ಬಾಂಗ್ಲಾ ದೇಶದ ಅಧಿಕಾರಿಗಳ ಜೊತೆಗೂಡಿ ಆರೋಗ್ಯ, ಶಿಕ್ಷಣ ಯೋಜನೆಗಳು, ಮೊಬೈಲ್ ಕ್ಲಿನಿಕ್‍ಗಳು ಜಾರಿಯಲ್ಲಿವೆ. ಮಕ್ಕ ಳಿಗೆ ಆಟದ ಸ್ಥಳ, ಆಹಾರ ವಿತರಣಾ ಕೇಂದ್ರ, ಮಹಿಳೆಯರು ವೃದ್ಧರಿಗೆ ಸೌಹಾರ್ದ ಕ್ಷೇತ್ರಗಳು, ಟಾಯ್ಲೆಟ್‍ಗಳು, ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತಿದೆ.
ಒಂದು ರಾಷ್ಟ್ರ ಒಂದು ಜನತೆಯ ವಿರುದ್ಧ ನಿಂತರ ಆ ಜನರ ಬದುಕು ಎಷ್ಟು ದುರ್ಗಮ ಗೊಳ್ಳುತ್ತದೆ ಎಂಬುದಕ್ಕೆ ಮ್ಯಾನ್ಮಾರಿನ ರೋಹಿಂಗ್ಯನ್ ನಿರಾಶ್ರಿತರ ಕತೆ ಜಗತ್ತಿನ ಮುಂದೆ ಅನಾವರಣ ಗೊಳಿಸಿದೆ. ಒಂದು ಊರಿನಿಂದ ವಲಸೆ ಹೋದ ಜನರು ಇನ್ನೊಂದು ಊರಿನಲ್ಲಿ ಸೆಟ್ ಆಗಬೇಕಾ ದರೆ ಬಹಳ ಪರಿಶ್ರಮ, ಹಣ, ಆರೋಗ್ಯ, ನೆರವು ಸ್ಥಳಾವಕಾಶ ಅಗತ್ಯವಿದೆಯಷ್ಟೇ. ಇವೆಲ್ಲವೂ ಈಗ ರೋಹಿಂಗ್ಯನ್ನರ ಮಟ್ಟಿಗೆ ಬಾಂಗ್ಲಾದ ಭೂಮಿಯಲ್ಲಿ ಇದೆ. ಆದರೆ ಅವೆಲ್ಲವೂ ತಾಳಮಿಳಿತಗೊಳ್ಳಲು ಸಮಯ ಹಿಡಿಯುತ್ತದೆ ಎನ್ನುವುದಂತೂ ಈಗಿನ ಸಮಸ್ಯೆ.
ಇನ್ನೊಂದು ಮುಖ ಕೂಡ ಇಲ್ಲಿದೆ. ರೋಹಿಂಗ್ಯನ್ ನಿರಾಶ್ರಿತರು ಬರುವ ಮೊದಲು ಊಕಿಯ ಜನರು ಕಾಡಿನಿಂದ ಕಟ್ಟಿಗೆ ಸಂಗ್ರಹಿಸು ವುದು, ಕೃಷಿ ಮಾಡುವುದು ಆಗಿತ್ತು. ನಿರಾಶ್ರಿತರ ಪ್ರವಾಹವೇ ಹರಿದು ಬಂದದ್ದರಿಂದ ಸ್ಥಳೀಯರ ಬದುಕು ಡೋಲಾಯಮಾನ ವಾಯಿತು. ಅವರಿಗೆ ಕಾಡಿನಿಂದ ಕಟ್ಟಿಗೆ ಸಂಗ್ರಹಿಸಲಿಕ್ಕಾಗಲಿ, ಕೃಷಿ ಕೆಲಸವನ್ನು ಸರಿಯಾಗಿ ಮಾಡುವುದಕ್ಕಾಗಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರು ಆರ್ಥಿಕವಾಗಿ ಕುಸಿದು ಕುಳಿತಿದ್ದಾರೆ. ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಅತ್ತ ರೋಹಿಂಗ್ಯನ್ ನಿರಾಶ್ರಿತರಿಗೂ ಉದ್ಯೋಗ ಇಲ್ಲ. ಇತ್ತ ಸ್ಥಳೀಯ ಬಂಗಾಳಿಗೂ ಸರಿಯಾಗಿ ದುಡಿಯಲಾಗುತ್ತಿಲ್ಲ. ನಿರಾಶ್ರಿತರು ಕಷ್ಟಪಡುತ್ತಿದ್ದರೂ ಅವರಿಗೆ ವಿದೇಶಿ ನೆರವಿದೆ. ಎನ್‍ಜಿವೊಗಳ ಮೇಲ್ನೋಟವಿದೆ.
ನಿರಾಶ್ರಿತರು ಬಂದ ನಂತರ 4000 ಎಕರೆ ಕಾಡು ನಾಶವಾಗಿದೆ. ನಿರಾಶ್ರಿತರಿಗೆ ಉಳಿದು ಕೊಳ್ಳಲು ಅನುವಾಗುವಂತೆ ಮರಗಳನ್ನೆಲ್ಲ ತೆರವು ಗೊಳಿಸಿ ನಿರಾಶ್ರಿತರಿಗಾಗಿ ಗುಡಿಸಲು ಕಟ್ಟಲಾಯಿತು. ಇದರೊಂದಿಗೆ ಸ್ಥಳೀಯ ಜನರಿಗೆ ಅವರ ಪರಂಪರೆಯಲ್ಲಿ ಬಂದ ಕೆಲಸ ಹೋಯಿತು. ಆದ್ದರಿಂದ ಇವರು ಕೂಡ ನಿರಾಶ್ರಿತರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಎನ್‍ಜಿವೊಗಳ ಕೈಕೆಳಗೆ ಕೆಲಸಕ್ಕೆ ನಿಂತಿದ್ದಾರೆ. ಒಂದು ಊರಿನಿಂದ ಜನಪ್ರವಾಹ ಬರುವುದು. ಲಾಭವನ್ನಲ್ಲ ನಷ್ಟವನ್ನೇ ಮಾಡುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಯೆನ್ನಬಹುದು. ಇವರು ಸ್ವಂತ ಉದ್ಯೋಗವನ್ನು ಬಿಟ್ಟು ನಿರಾಶ್ರಿತರಿಗಾಗಿ ದುಡಿಯ ತೊಡಗಿದ ಬಳಿಕ ನಿರಾಶ್ರಿತರ ಕೇಂದ್ರದ ಗುಣಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದು ಉಕಿಯದ ಎಕ್ಸಿಕ್ಯೂಟಿವ್ ಆಫಿಸರ್ ನಾಖರುಝ್ಝಮಾನ್
ಚೌಧರಿ ಹೇಳಿದರು.
ಅಂದರೆ ಪರಂಪರಾಗತವಾಗಿ ಸ್ವತಂತ್ರವಾಗಿ ಇವರು ಮಾಡಿಕೊಂಡಿದ್ದ ಕೆಲಸಗಳೆಲ್ಲ ಗಟ್ಟ ಹತ್ತಿದವು. ಎನ್‍ಜಿವೊಗಳ ಕೈಕೆಳಗೆ ಕೂಲಿಯಾಳು ಗಳಾಗಿ ಸ್ವದೇಶಿಯರು ದುಡಿಯುತ್ತಿದ್ದಾರೆ. ಒಂದರ್ಥದಲ್ಲಿ ಇಲ್ಲಿ ನಿರುದ್ಯೋಗದಲ್ಲಿ ಹೆಚ್ಚಳವಾಯಿತು. ಕಳೆದ ಮಾರ್ಚಿನಲ್ಲಿ ವಿಶ್ವಸಂಸ್ಥೆ ಮತ್ತು ವಿವಿಧ ಎನ್‍ಜಿವೊಗಳು ಇಲ್ಲಿ 950.8 ಮಿಲಿಯನ್ ಡಾಲರ್ ಆರ್ಥಿಕ ಸಹಾಯ ಜಾರಿಗೆ ತಂದಿದ್ದಾರೆ. 1.3 ಮಿಲಿಯನ್ ಜನರು ಊಕಿಯ ತೆಕ್ನಾಫ್ ಪ್ರದೇಶದಲ್ಲಿ ಈಗಿದ್ದಾರೆ.
ಎನ್‍ಜಿವೊಗಾಗಿ ಇಲ್ಲಿನ ಸ್ವದೇಶಿಯರಲ್ಲಿ ಹೆಚ್ಚಿನವರು ಪರಂಪರಾಗತ ಕೆಲಸವನ್ನು ತೊರೆದಿ ದ್ದಾರೆ. ಕಾಡು ಹೋಯಿತು. ನಾಡಾಯಿತು. ನಾಡಿನವರು ನಿರುದ್ಯೋಗಿಗಳಾದರು. ಎನ್‍ಜಿವೊ ಗಳ ಕೆಲಸ ಇವರಿಗೆ ತಾತ್ಕಾಲಿಕ ಉದ್ಯೋಗ ಒದಗಿಸಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಎನ್‍ಜಿವೊಗಳು ಇಲ್ಲಿ ಅಂಗಡಿ ತೆರೆಯುತ್ತಿದೆ. ರಿಕ್ಷಾ ಸರ್ವಿಸ್ ನಡೆಸುತ್ತಿದೆ. ಇತರ ವ್ಯಾಪಾರ ಗಳನ್ನು ಆರಂಭಿಸಿಕೊಡತೊಡಗಿದೆ. ಆದರೆ ಇಲ್ಲಿ ಹಲವಾರು ಅಂಗಡಿಗಳು ವ್ಯಾಪಾರ ಇಲ್ಲದೆ ಮುಚ್ಚಲಾಗಿದೆ.
ರೋಹಿಂಗ್ಯನ್ನರಿಗೆ ವಸ್ತುಗಳು ಸಾಮಾನ್ಯವಾಗಿ ಕಡಿಮೆ ಬೆಲೆಗೆ ಸಿಗತೊಡಗಿದ್ದು ಸ್ಥಳೀಯರಿಗೆ ಹಿನ್ನಡೆಯಾಯಿತು. ಎನ್‍ಜಿವೊಗಳಿಂದ ಪ್ರದೇಶಕ್ಕೆ ಕೆಲವು ಪ್ರಯೋಜನ ಆಗಿದೆ. ಅಂದರೆ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಅಲೆದಾಡುವ ಕೆಲವು ಯುವಕ ರಿಗೆ ಇವರ ಕೈಕೆಳಗೆ ಕೆಲಸ ಸಿಕ್ಕಿತು ಎನ್ನುವುದು ಎನ್‍ಜಿವೋಗಳಿಂದಾದ ಪ್ರಯೋಜನವಾಗಿದೆ.
ಕಾಕಸ್ ಬಝಾರ್ ರೋಹಿಂಗ್ಯನ್ ನಿರಾಶ್ರಿತರ ಕೇಂದ್ರವಾಗಿರುವಂತೆ ಸ್ಥಳೀಯರನ್ನೂ ನಿರಾಶ್ರಿತರ ನ್ನಾಗಿ ಮಾಡಿದೆ ಎಂಬ ವಿಷಯವನ್ನು ಮರೆಯುವಂತಿಲ್ಲ. ಸದ್ಯ ನಿರುದ್ಯೋಗ ಜತೆಗೆ ಬೆಲೆಯೇರಿಕೆ ಕೂಡ ಸ್ಥಳೀಯರನ್ನು ಕಾಡುತ್ತಿದೆ.