ಸನ್ಮಾರ್ಗ ವಾರ್ತೆ
ರಾಮನಗರ: ಆಗಸ್ಟ್ 28ರ ರಾತ್ರಿಯಿಂದ ಸುರಿದ ವಿಪರೀತ ಮಳೆಯಿಂದಾಗಿ ರಾಮನಗರದ ವಸತಿ ಪ್ರದೇಶಗಳು ನೀರಿನಿಂದ ಆವೃತ್ತವಾಗಿವೆ. ಜನ ಜೀವನ ಅಸ್ಥವ್ಯಸ್ತವಾಗಿದೆ. ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಜನ ಸಂಪರ್ಕ ಕಡಿದುಕೊಂಡಿದೆ. ಇದೇ ವೇಳೆ ಹೆಚ್.ಆರ್.ಎಸ್ ಹೊಣೆಗಾರರು ರಾಮನಗರದ ಸ್ಥಳೀಯ ಹೊಣೆಗಾರರಾದ ಅಸ್ಲಮ್ ಪಾಶಾರವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿಯ ಅವಲೋಕನ ನಡೆಸಿದ್ದಾರೆ. ಈಗಾಗಲೇ ಎಸ್.ಡಿ.ಆರ್.ಎಫ್ ತಂಡ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಹೆಚ್.ಆರ್.ಎಸ್. ಝಮೀರ್ ಖಾನ್ರವರ ಮುಂದಾಳುತ್ವದಲ್ಲಿ ಮೈಸೂರು ರೋಡ್ ತಂಡವು ಚೆನ್ನಪಟ್ಟಣ ಪ್ರದೇಶದಲ್ಲಿ ಸಂತ್ರಸ್ತರ ಕುರಿತು ಸಮೀಕ್ಷೆ ನಡೆಸುತ್ತಿದೆ. ಅದೆ ರೀತಿ ಮೈಸೂರು ತಂಡವು ಫಾರೂಕ್ ನಶ್ಚರ್ ಹಾಗೂ ಅಸಾದುಲ್ಲಾ ರವರ ಮುಂದಾಳುತ್ವದಲ್ಲಿ ರಾಮನಗರ ಪ್ರದೇಶದಲ್ಲಿ ಸಮೀಕ್ಷೆ ನಡೆಸುತ್ತಿದೆ. ತಂಡದಲ್ಲಿ ಸ್ಥಳೀಯರಾದ ವಕೀಲರಾದ ಬಶೀರ್ ಅಹ್ಮದ್ ಖಾನ್ ಹಾಗೂ ಖೈಝರ್ ಅಹ್ಮದ್ ಕುರೈಶಿ ಜೊತೆಗಿದ್ದಾರೆ.
ದಿನಬಳಕೆಯ ವಸ್ತುಗಳು, ಫ್ಯಾಕ್ಟರಿಗಳ ಮೆಶೀನ್ಗಳು, ಗ್ಯಾಸ್ ಸಿಲಿಂಡರ್ ಮುಂತಾದ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ಸಮೀಕ್ಷೆಯಲ್ಲಿ ತಿಳಿದು ಬಂದಿದ್ದು, ಅನೇಕ ಮನೆಗಳು ನೆಲಸಮವಾಗಿವೆ. ಕೆಲವು ಕುಟುಂಬಗಳು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಉಳಿದವರ ವಾಸ್ತವ್ಯಕ್ಕಾಗಿ ಶಾದಿ ಮಹಲ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಇಡೀ ಪ್ರದೇಶ ಕೆಸರು, ಕಸಗಳಿಂದ ತುಂಬಿದೆ. ಇನ್ನೂ ಎರಡು ಮೂರು ದಿವಸ ಮಳೆ ಸುರಿಯುವ ಲಕ್ಷಣ ಕಂಡುಬರುವುದರಿಂದ ಶುಚಿತ್ವದ ಕೆಲಸ ಸದ್ಯಕ್ಕೆ ಅಸಾಧ್ಯ ಎಂದು ಕಾರ್ಯನಿರತ ಹೆಚ್.ಆರ್.ಎಸ್ ತಂಡ ತಿಳಿಸಿದೆ.
ಸಂಪರ್ಕ: ಫಾರೂಕ್ ನಶ್ಚರ್ 9731277785, ಅಬ್ರಾರ್ ಅಹ್ಮದ್ 9481668578, ಅಸದುಲ್ಲಾ 9686669833,
ಝಮೀರ್ ಖಾನ್ 9880489943