ಬಿಎಸ್ಸಿ ರಸಾಯನಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದ ಮಿಸ್ಬಾ ತಬಸ್ಸುಮ್‌‌ರಿಗೆ ಸನ್ಮಾನ

0
227

ಸನ್ಮಾರ್ಗ ವಾರ್ತೆ

ಶ್ರೀನಿವಾಸಪುರ: ಪಟ್ಟಣದ ಆಜಾದ್ ರಸ್ತೆಯ ನಿವಾಸಿ ಮಿಸ್ಬಾ ತಬಸ್ಸುಮ್ ಅವರು ಬೆಂಗಳೂರು ವಿಶ್ವ ವಿದ್ಯಾಲಯದಿಂದ ಬಿಎಸ್ಸಿಯಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಹಿನ್ನಲೆಯಲ್ಲಿ ಸಮಾಜ ಸೇವಕ ಎಸ್. ನಾರಾಯಣಸ್ವಾಮಿ ಅವರು ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಪ್ರೋತ್ಸಾಹ ಧನ ವಿತರಿಸಿದರು.

ಪಟ್ಟಣದ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ ನಾರಾಯಣಸ್ವಾಮಿ, ಪೋಷಕರಾದ ಅಥಾವುಲ್ಲಾ ಖಾನ್ ಹಾಗೂ ತಾಯಿ ಫರೀದಾ ಬೇಗಮ್ ಹಾಗೂ ಮಿಸ್ಬಾ ತಬಸ್ಸುಮ್ ರವರಿಗೆ ಶಾಲು ಹೊದಿಸಿ ಹಣ್ಣು -ಹಂಪಲು, ಪ್ರೋತ್ಸಾಹಧನವನ್ನು ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಯು ಮುಂದಿನ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡುವುದಾಗಿ ಸಹ ತಿಳಿಸಿದರು.

ಚಿನ್ನದ ಪದಕ ಪಡೆದ ವಿಜೇತರ ಉನ್ನತ ವ್ಯಾಸಂಗಕ್ಕೆ ಆರ್ಥಿಕವಾಗಿ ಸಹಾಯ ಹಸ್ತ ನೀಡುವುದಾಗಿ ಭರವಸೆಯನ್ನು ಸಹ ಇದೇ ವೇಳೆಯಲ್ಲಿ ನೀಡಿದರು.

ಪುರಸಭಾ ಉಪಾಧ್ಯಕ್ಷೆ ಆಯಿಷಾ ನಾಯಜ್ ಮಾತನಾಡಿ, ಎಸ್ಸಿಎಸ್ಟಿ ಹಾಗೂ ಮುಸ್ಲಿಂ ಸಮುದಾಯದ ಮಕ್ಕಳು ಹೆಚ್ಚಿನ ವ್ಯಾಸಂಗ ಪಡೆಯಬೇಕೆಂದು ಕರೆ ನೀಡಿದರು. ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯುವ ನಿಟ್ಟಿನಲ್ಲಿ ವಿದ್ಯಾಭ್ಯಾಸವನ್ನು ಪಡೆಯಬೇಕು. ಸರ್ಕಾರಿ ಶಾಲೆಗಳು ಇದ್ದರು ಹೆಣ್ಣುಮಕ್ಕಳು ಹೆಚ್ಚಿನ ವ್ಯಾಸಂಗ ಮುಂದುವರೆಸಲು ಹಿಂಜರಿಯುತ್ತಿದ್ದಾರೆ. ಹೆಣ್ಣು ಮಕ್ಕಳು ಹಿಂಜರಿಕೆ ಬಿಟ್ಟು ಆತ್ಮವಿಶ್ವಾಸದಿಂದ ವಿದ್ಯಾಭ್ಯಾಸ ಪಡೆದು ಉನ್ನತ ವ್ಯಾಸಂಗವನ್ನು ಪಡೆದು ಉನ್ನತ ಸ್ಥಾನಕ್ಕೆ ಏರಬೇಕು ಎಂದು ಆಶಿಸಿದರು.

ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪುರಸಭಾ ವತಿಯಿಂದ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಈ ಸದಾವಕಾಶದಿಂದ ಎಲ್ಲ ಎಸ್ಸಿಎಸ್ಟಿ ಜನಾಂಗದ ಮಕ್ಕಳು ಹಾಗೂ ಅಲ್ಪಸಂಖ್ಯಾತರ ಮಕ್ಕಳು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಶ್ರೀನಿವಾಸಪುರ ಪುರಸಭೆಯ ವ್ಯಾಪ್ತಿಯಲ್ಲಿ ಇರುವ ಎಲ್ಲ ಮಕ್ಕಳು ಪುರಸಭೆಯಲ್ಲಿ ಶಾಲಾ ದಾಖಲೆಗಳನ್ನು ಮತ್ತು ಅಂಕಪಟ್ಟಿಗಳನ್ನು ನೀಡಿ ಪುರಸಭೆಯ ಕಾನೂನು ಪಾಲನೆ ಅಂತೆ ನಿಯಮಾನುಸಾರ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಧನವನ್ನು ನೀಡಲಾಗುವುದು ಅರ್ಜಿಗಳನ್ನು ಪುರಸಭೆಯಲ್ಲಿ ಸಲ್ಲಿಸಬೇಕೆಂದು ಕರೆ ನೀಡಿದ್ದಾರೆ .

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಿಸ್ಬಾ ತಬಸ್ಸುಮ್, ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಅವಕಾಶಗಳಿದ್ದು, ಶಿಕ್ಷಕರು ಸಹ ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಈ ಸದಾವಕಾಶವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ನಾನು ಶ್ರೀನಿವಾಸಪುರದಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಆಲ್ ಅಮಿನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು 8 ನೇ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಬಾಲಕಿಯರ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದೇನೆ.

ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಅನ್ನು ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ವ್ಯಾಸಂಗ ಪಡೆದಿದ್ದೇನೆ ಹಾಗೆಯೇ ಬಿಎಸ್‌ಸಿ ಪದವಿಯನ್ನು ಶ್ರೀನಿವಾಸಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಡೆದು ರಸಾಯನಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಪಡೆದಿದ್ದೇನೆ. ಈ ನನ್ನ ಎಲ್ಲ ವ್ಯಾಸಂಗವು ಸರ್ಕಾರಿ ಶಾಲೆಗಳಿಂದಲೇ ಪ್ರಾರಂಭವಾಗಿದೆ ಈಗಲೂ ಸಹ ಎಂಎಸ್ಸಿ ಪದವಿಯನ್ನು ಕೋಲಾರದ ಟಮಕ ಬಳಿಯಿರುವ ಬೆಂಗಳೂರು ನಾರ್ತ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ಎಂದು ವಿವರಿಸಿದರು.

ನನ್ನ ವ್ಯಾಸಂಗಕ್ಕೆ ಎಲ್ಲಾ ಸರ್ಕಾರಿ ಶಾಲೆ ಶಿಕ್ಷಕರು ಹಾಗೂ ಪ್ರಾಚಾರ್ಯರು ಮತ್ತು ಪ್ರಾಂಶುಪಾಲರು ಸಹ ಎಲ್ಲ ರೀತಿಯಲ್ಲಿ ಸಹಕಾರ ನೀಡಿ ಉನ್ನತ ವ್ಯಾಸಂಗಕ್ಕೆ ಉತ್ತಮ ಶಿಕ್ಷಣವನ್ನು ಸಹ ನೀಡಿದ್ದಾರೆ ಇವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದು ಸ್ಮರಿಸಿದರು.

ಇದೇ ವೇಳೆಯಲ್ಲಿ ಪುರಸಭೆಯ ಉಪಾಧ್ಯಕ್ಷೆ ಆಯಿಶಾ ನಯಾಜ್, ಮಾಜಿ ಉಪಾಧ್ಯಕ್ಷ ನಯಜ್ ಅಹಮದ್, ಪುರಸಭಾ ಸದಸ್ಯ ಶಬೀರ್ ಖಾನ್, ಹಿರಿಯ ಮುಖಂಡರಾದ ನೂರುಲ್ಲಾ ಖಾನ್, ಅಮೀರ್ ಖಾನ್, ಅಸ್ಲಂ, ಹಾಗೂ ಇನ್ನೂ ಹಲವಾರು ಮುಖಂಡರು ಇದ್ದರು.