‘ನೀವು ದೇಶದ ಪ್ರಧಾನಿ, ಗುಜರಾತ್ ಗೆ ಮಾತ್ರ ಅಲ್ಲ’: ಪರಿಹಾರ ಘೋಷಣೆಯಲ್ಲಿ ಮೋದಿ ತಾರತಮ್ಯದ ವಿರುದ್ಧ ಕಮಲ್ ನಾಥ್ ಆಕ್ರೋಶ

0
451

ಭೋಪಾಲ್‌, ಎ,17: ಗುಜರಾತ್ ನಲ್ಲಿ ಮಳೆ, ಬಿರುಗಾಳಿ, ಸಿಡಿಲಿನ ಅಬ್ಬರಿಗೆ ಸಿಲುಕಿ ಮೃತಪಟ್ಟವರಿಗೆ ಪರಿಹಾರ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಕ್ರಮವನ್ನು ಪ್ರಶ್ನಿಸಿದ ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ರವರು ‘ನೀವು ಕೇವಲ ಗುಜರಾತ್‌ ಮಾತ್ರ ಪ್ರಧಾನಿ ಅಲ್ಲ, ಇಡೀ ದೇಶಕ್ಕೆ ಪ್ರಧಾನಿ’ ಎಂದು ಕುಟುಕಿದ್ದಾರೆ.

ಗುಜರಾತ್‌ ಮಾತ್ರವಲ್ಲದೆ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ಮಂಗಳವಾರ ಸಂಭವಿಸಿದ್ದ ಅಕಾಲಿಕ ಮಳೆ-ಬಿರುಗಾಳಿ-ಗುಡುಗು-ಸಿಡಿಲು ಬಡಿದು ಹಲವರು ಮೃತಪಟ್ಟಿದ್ದಾರೆ. ಈ ರಾಜ್ಯಗಳ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸದೆ, ಸಂತಾಪ ಸೂಚಿಸದೆ ಕೇವಲ ಗುಜರಾತ್‌ ಬಗ್ಗೆ ಮಾತ್ರವೇ ನೋವು ವ್ಯಕ್ತಪಡಿಸಿ, ಪರಿಹಾರ ಘೋಷಿಸಿದ್ದಾರೆ ಎಂದು ಕಮಲ್ ನಾಥ್ ಟ್ವೀಟ್ ಮಾಡಿದ್ದಾರೆ.

ಗುಜರಾತ್‌ನಲ್ಲಿ ಈ ನೈಸರ್ಗಿಕ ಪ್ರಕೋಪಕ್ಕೆ ಬಲಿಯಾದವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪ್ರಕಟಿಸಿರುವ ಮೋದಿ ಇತರ ಮೂರು ರಾಜ್ಯಗಳ ಸಂತ್ರಸ್ತರ ಬಗ್ಗೆ ಏಕೆ ಮೌನ ವಹಿಸಿದ್ದಾರೆ ಎಂದು ಕಮಲ್‌ ನಾಥ್‌ ಪ್ರಶ್ನಿಸಿದ್ದಾರೆ. ಕಮಲ್ ನಾಥ್ ಟ್ವೀಟ್ ನಿಂದ ಎಚ್ಚೆತ್ತುಕೊಂಡ ಪ್ರಧಾನಿ ಕಾರ್ಯಾಲಯ, ಇತರೆ ಮೂರು ರಾಜ್ಯಗಳ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.