ಹಾಸ್ಟೆಲ್‍ಗೆ ಮರಳಲು ಹೇಳಿದ ತಾಯಿಯನ್ನು ಕಲ್ಲಿನಿಂದ ಜಜ್ಜಿ ಕೊಂದ ಬಾಲಕ

0
200

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳ್ನಾಡಿನ ಇರೋಡಿನ ಸತ್ಯಮಂಗಲ ಎಂಬಲ್ಲಿ ಹದಿನೈದು ವರ್ಷದ ಬಾಲಕ ತನ್ನ ತಾಯಿಯ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ದಾರುಣ ಘಟನೆ ವರದಿಯಾಗಿದೆ‌. ಪುಂಚೆ ಪುಳಿಯಂಪಟ್ಟಿ ವಿದ್ಯುತ್ ಬೋರ್ಡ್‌ನ ಸರಕಾರಿ ಉದ್ಯೋಗಿ ಯುವರಾಣಿ(36) ಹತರಾದವರು.

ಸತ್ಯ ಮಂಗಲದ ಖಾಸಗಿ ರೆಸಿಡೆನ್ಶಿಯಲ್ ಸ್ಕೂಲಿನಲ್ಲಿ ಒಂಬತ್ತನೆ ತರಗತಿಯಲ್ಲಿ ಮಗ ಕಲಿಯುತ್ತಿದ್ದು. ಆದರೆ, ಇತ್ತೀಚೆಗೆ ಹಾಸ್ಟೆಲ್‌ಗೆ ಮರಳಲು ನಿರಾಕರಿಸಿದ್ದು, ಮನೆಯಿಂದಲೇ ಶಾಲೆಗೆ ತೆರಳುತ್ತಿದ್ದನು.

ಈ ನಡುವೆ ತ್ರೈಮಾಸಿಕ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದು, ಪುನಃ ಹಾಸ್ಟೆಲ್‍ಗೆ ಮರಲಕುವಂತೆ ತಾಯಿ ಮಗನನ್ನು ಒತ್ತಾಯಿಸಿದ್ದರು‌. ಈ ಕುರಿತು ಇಬ್ಬರ ನಡುವೆ ಜಗಳವಾಗಿತ್ತು.

ಬಾಲಕನ ತಂದೆ ಅರುಣ್‌ಸೆಲ್ವನ್, ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದು, ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರು. ಇದೇ ಸಮಯವನ್ನು ಬಳಸಿಕೊಂಡು ತಾಯಿ ಮಲಗಿದ್ದಾಗ ರಾತ್ರೆ 12 ಗಂಟೆ ಸುಮಾರಿಗೆ ಬಾಲಕ ಒಳ ನುಸುಳಿದ್ದಾನೆ. ನಂತರ ಹೂವಿನ ಹೂದಾನಿ ಮತ್ತು ಕಲ್ಲಿನಿಂದ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಹಾಗೂ ಆಕೆಯ ತಲೆಯ ಮೇಲೆ ವಸ್ತುಗಳಿಂದ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಯುವರಾಣಿಯವರ ತಲೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗತೊಡಗಿತ್ತು. ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಬಳಿಕ ಬಾಲಕ ಸ್ಥಳದಿಂದ ಪರಾರಿಯಾಗಿದ್ದನು.

ಮನೆಯಲ್ಲಿದ್ದ 12 ವರ್ಷದ ಮಗಳು ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಯುವರಾಣಿಯವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಬದುಕಿ ಉಳಿಯಲಿಲ್ಲ. ಹಲ್ಲೆ ನಡೆಸಿ ಓಡಿ ಹೋದ ಬಾಲಕನ್ನು ಪೊಲೀಸರು ನಂತರ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಹಾಸ್ಟೆಲ್ ಅಧಿಕಾರಿಗಳನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.