ಬಾಗಿಲಿಲ್ಲದ ಮನೆಗೆ ರಾಷ್ಟ್ರಧ್ವಜವನ್ನು ಪರದೆಯಾಗಿ ಇಳಿಬಿಟ್ಟ ಅನಕ್ಷರಸ್ಥ ಕೂಲಿಕಾರ್ಮಿಕ ಶಾರುಕ್ : ಬಂಧಿಸಿದ ಪೊಲೀಸರು

0
4264
ಕಪ್ಪು ಅಂಗಿ ಧರಿಸಿರುವ ಶಾರುಕ್ (ಮಧ್ಯೆ )

ಮುಜಫರ್ ನಗರ (ಉತ್ತರಪ್ರದೇಶ): ಸ್ವಾತಂತ್ರ್ಯ ದಿನಾಚರಣೆಯ ದಿನ ರಾತ್ರಿ ರೈಲ್ವೇ ನಿಲ್ದಾಣದ ಬಳಿ ಕೆಲಸದಿಂದ ಮನೆಗೆ ಮರಳುತ್ತಿದ್ದ ಕೂಲಿ ಕಾರ್ಮಿಕ ಶಾರೂಕ್ ಗೆ ನೆಲದ ಮೇಲೆ ಬಿದ್ದಿದ್ದ ತಿರಂಗಾ ಧ್ವಜವು ಕಾಣಿಸಿತು. ಆತ ಅದನ್ನು ಹೆಕ್ಕಿಕೊಂಡು ಅರ್ಧ ನಿರ್ಮಾಣಗೊಂಡಿದ್ದ ,ಬಾಗಿಲಿಲ್ಲ ಬಾಡಿಗೆ ಮನೆಯ ದ್ವಾರದಲ್ಲಿ ಪರದೆಯಾಗಿ ಉಪಯೋಗಿಸಿದ್ದನು.

ತನ್ನ ಪತ್ನಿ ಮಕ್ಕಳು ಹಾಗೂ ವೃದ್ಧ ತಂದೆಯೊಂದಿಗೆ ವಾಸಿಸುತ್ತಿದ್ದ ಆತನಿಗೆ ತಿರಂಗಾ ಧ್ವಜವೇ ಮರ್ಯಾದೆ ಕಾಪಾಡಲು ಉಪಯುಕ್ತವಾಯ್ತು.

ಈ ಮನೆಯಲ್ಲಿರುವ ಎಲ್ಲರೂ ಅನಕ್ಷಸ್ಥರೇ; ಆದುದರಿಂದ ತಿರಂಗಾ ಧ್ವಜವನ್ನು ಈ ರೀತಿ ಬಳಸುವುದು ರಾಷ್ಟ್ರ ಧ್ವಜಕ್ಕೆ ಅಪಮಾನಗೈದಂತೆ ಎಂಬ ವಿಚಾರ ಅವರಾರಿಗೂ ತಿಳಿದಿರಲಿಲ್ಲ.

ದಿನಗೂಲಿ ಕೆಲಸ ಮಾಡಿ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ ಆತನಿಗೆ ಹಲವು ವಾರಗಳ ಕಾಲ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿರಲಿಲ್ಲ. ಆದರೆ ಈ ರೀತಿ ರಾಷ್ಟ್ರ ಧ್ವಜವನ್ನು ಪರದೆಯಾಗಿ ಉಪಯೋಗಿಸಿರುವುದು ನೆರೆಯಲ್ಲಿಯೇ ವಾಸವಾಗಿದ್ದ ಹಿಂದುತ್ವ ರಾಷ್ಟ್ರ ಪ್ರೇಮಿಗಳಿಗೆ ಸಹಿಸಲಾಗಲಿಲ್ಲ.

ಈ ರೀತಿ ರಾಷ್ಟ್ರ ಧ್ವಜವನ್ನು ಬಳಸುವುದು ಅಪಮಾನಗೈದಂತೆ ಎಂದು ಆತನಿಗೆ ತಿಳಿ ಹೇಳುವ ಅಥವಾ ಆತನ ಬಡತನವನ್ನು ಕಂಡು ಬಾಗಿಲನ್ನಾದರೂ ಮಾಡಿಸಿ ಆತನಿಗೆ ನೆರವಾಗುವುದನ್ನು ಬಿಟ್ಟು ಸ್ಥಳೀಯ ಶಿವ ಸೇನಾ ಸದಸ್ಯರು ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.

ಆಣತಿಯಂತೆ ಪೋಲಿಸರು ಆತನನ್ನು ಬಂಧಿಸಿಕೊಂಡು ಹೋಗುತ್ತಿದ್ದರೇ ಏನೋ ಬಹುದೊಡ್ಡ ಸಾಧನೆ ಮಾಡಿದಂತೆ ಶಿವ ಸೇನಾ ಸದಸ್ಯರು ಮಾಧ್ಯಮಗಳನ್ನು ಆಹ್ವಾನಿಸಿ ಆತನ ಸುತ್ತಮುತ್ತ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು.

೧೯೭೧ ರ ಕಾಯ್ದೆಯ ಅನ್ವಯ ಆತನನ್ನು ಜೈಲಿಗೆ ತಳ್ಳಲಾಯ್ತು. ತದನಂತರ ಆತನು ಜಾಮೀನಿನ ಮೇರೆಗೆ ಹೊರಬಂದನು.

ಈ ಕುರಿತು ಹಾಸಿಗೆ ಹಿಡಿದ ಆತನ ತಂದೆ ಸತ್ತಾರ್(೫೭)” ನನ್ನ ಮಗನಿಗೆ ಒಂದು ವೇಳೆ ಈ ರೀತಿ ರಾಷ್ಟ್ರ ಧ್ವಜವನ್ನು ಬಳಸುವುದು ತಪ್ಪು ಎಂದು ಗೊತ್ತಿದ್ದರೆ ಖಂಡಿತವಾಗಿಯೂ ಅವನು ಎಂದಿಗೂ ಇಂತಹ ಕೆಲಸ ಮಾಡುತ್ತಿರಲಿಲ್ಲ” ಎನ್ನುತ್ತಾರೆ.

ಶಾರೂಕ್ ಆತನ ಅನಕ್ಷರಸ್ಥ ಪತ್ನಿ ನಗ್ಮಾ ,ಶಾಲೆಯ ಮುಖವೇ ನೋಡದ ಇಬ್ಬರು ಮಕ್ಕಳಾದ ಫರ್ಝಾನಾ(೬), ಸಾಹಿಲ್(೨)ರವರೊಂದಿಗೆ ಅರ್ಧ ನಿರ್ಮಿತ ಬಾಗಿಲಿಲ್ಲದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಪತಿಯನ್ನು ಬಂಧಿಸಿದ ನಂತರ ಕುಟುಂಬಕ್ಕೆ ಯಾವುದೇ ಆರ್ಥಿಕ ಆಸರೆಗಳಿಲ್ಲದಿದ್ದಾಗ ನೆರೆ ಮನೆಯವರು ಆಹಾರದ ವ್ಯವಸ್ಥೆಯನ್ನು ಮಾಡಿಕೊಟ್ಟರೆಂದು ನಗ್ಮಾ ಹೇಳಿದ್ದಾರೆ.