ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಐವತ್ತು ವರ್ಷ ಮೇಲ್ಪಟ್ಟವರಿಗೆ ದೇಶದಲ್ಲಿ ಮಾರ್ಚ್ ತಿಂಗಳಿನಿಂದ ಕೊರೋನ ಚುಚ್ಚು ಮದ್ದು ನೀಡಲಾಗುವುದೆಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. 27 ಕೋಟಿ ಜನರು ಈ ವಿಭಾಗದಲ್ಲಿ ವ್ಯಾಕ್ಸಿನ್ ಪಡೆಯಲಿದ್ದಾರೆ. ಜನವರಿ 16ಕ್ಕೆ ವ್ಯಾಕ್ಸಿನೇಶನ್ ಆರಂಭವಾಗಲಿದ್ದು ಈಗಾಗಲೇ 50 ಲಕ್ಷ ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ.
ಸರಕಾರಿ, ಖಾಸಗಿ ಕ್ಷೇತ್ರದ ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು ನೀಡುವುದು ಮೊದಲನೇ ಹಂತದ ಉದ್ದೇಶವಾಗಿದೆ. ಅದಾದ ಮೇಲೆ ಎರಡು ಕೋಟಿ ಸ್ವಯಂ ಸೇವಕರಿಗೆ ವ್ಯಾಕ್ಸಿನ್ ಕೊಡಲಾಗುವುದು. ಒಂದನೇ ಹಂತ ಪೂರ್ತಿಗೊಳಿಸಿದ ರಾಜ್ಯಗಳು ಎರಡನೇ ಹಂತದಲ್ಲಿ ಸ್ವಯಂ ಸೇವಕರಿಗೆ ವ್ಯಾಕ್ಸಿನ್ ನೀಡಲು ಆರಂಭಿಸಿದೆ. ಈ ಹಂತದ ಬಳಿಕ ಮಾರ್ಚ್ ತಿಂಗಳಿನಿಂದ ಹಿರಿಯ ಪ್ರಜೆಗಳಿಗೆ ವ್ಯಾಕ್ಸಿನೇಶನ್ ನೀಡಬಹುದೆಂದು ಚಿಂತಿಸಲಾಗಿದ್ದು, ದಿನಾಂಕ ನಿಗದಿಪಡಿಸಲಾಗಿಲ್ಲ.
ದೇಶದಲ್ಲಿ ನಿರ್ಮಿಸಿದ ಕೊರೋನ ವ್ಯಾಕ್ಸಿನ್ಗಳಿಗೆ ಇದುವರೆಗೆ 22 ದೇಶಗಳು ಬೇಡಿಕೆ ಮುಂದಿಟ್ಟಿದ್ದು ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮೌರಿಷ್ಯಸ್, ಶ್ರೀಲಂಕಾ, ಯುಎಇ, ಮಾಲದ್ವೀಪಗಳು, ಮೊರೊಕ್ಕೊ, ಬಹ್ರೈನ್, ಒಮನ್, ಈಜಿಪ್ಟ್, ಅಲ್ಜೀರಿಯ, ಕುವೈಟ್, ದಕ್ಷಿಣಾಫ್ರಿಕ ಸಹಿತ ಇದುವರೆಗೆ ಭಾರತವನ್ನು ಸಂಪರ್ಕಿಸಿದ ಹೊರ ದೇಶಗಳಾಗಿದ್ದು, ಹದಿಮೂರು ದೇಶಗಳಿಗೆ ಈಗಾಗಲೇ ವ್ಯಾಕ್ಸಿನ್ ನೀಡಿದ್ದೇವೆ ಎಂದು ಸಚಿವರು ತಿಳಿಸಿದರು.