ಸನ್ಮಾರ್ಗ ವಾರ್ತೆ
ಬೆಂಗಳೂರು: ಆನ್ಲೈನ್ ಸುದ್ದಿ ತಾಣ ನ್ಯೂಸ್ ಕ್ಲಿಕ್ ಸಂಸ್ಥೆ ಮೇಲಿನ ದಾಳಿ, ಪತ್ರಕರ್ತರ ಬಂಧನ ಖಂಡಿಸಿ ಬಹುತ್ವ ಕರ್ನಾಟಕ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್), ಆಲ್ ಇಂಡಿಯಾ ಸ್ಪೂಡೆಂಟ್ಸ್ ಅಸೋಸಿಯೇಷನ್ (ಎಐಎಸ್ಎ), ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫೋರಂ ಜಸ್ಟೀಸ್ (ಎಐಎಲ್ಎಜೆ), ಡಿಜಿಪಬ್ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಪ್ರತಿಭಟನೆಯಲ್ಲಿ ಸರ್ಕಾರದ ಧೋರಣೆಯನ್ನು ಒಕ್ಕೊರಲಿನಿಂದ ಖಂಡಿಸಿದರು.
ಜನವಿರೋಧಿ ನೀತಿಗಳು, ಆಡಳಿತ ವೈಫಲ್ಯಗಳು ಸಾರ್ವಜನಿಕರಿಗೆ ತಿಳಿಯಬಾರದು ಎಂದೇ ಕೇಂದ್ರ ಸರ್ಕಾರ ಮಾಧ್ಯಮಗಳ ಮೇಲೆ ದಾಳಿ ಮಾಡುತ್ತಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದರು.
ದೆಹಲಿ ಪೊಲೀಸರು ಪ್ರಬೀ ಪುರಕಾಯಸ್ಥ ಅವರನ್ನು ಬಂಧಿಸಿರುವುದನ್ನು ಖಂಡಿಸಿದ ಸಭೆಯು, ಈ ಮುಂಚೆ ಪ್ರಬೀ ಅವರನ್ನು 1975ರ ತುರ್ತು ಪರಿಸ್ಥಿತಿ ಸಮಯದಲ್ಲೂ ಸರ್ಕಾರ ಬಂಧಿಸಿತ್ತು. ಇಂದು ದೇಶದಲ್ಲಿರುವ ಅಘೋಷಿತ ತುರ್ತು ಪರಿಸ್ಥಿತಿ ಸನ್ನಿವೇಶದಲ್ಲೂ ಬಂಧಿಸಲಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ದೂರಿದರು.
ಬಂಧನಕ್ಕೆ ಒಳಗಾದವರಿಗೆ ಎಫ್ಐಆರ್ ಪ್ರತಿಯನ್ನೂ ನೀಡಿಲ್ಲ. ಎಫ್ಐಆರ್ ಮಾಹಿತಿ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋದರೂ, ದೆಹಲಿ ಪೊಲೀಸರು ವಿರೋಧಿಸಿದ್ದಾರೆ. ಆಂಧ್ರ ಪ್ರದೇಶದಲ್ಲೂ ಇಂತಹ ದಾಳಿಗಳು ನಡೆದಿವೆ. ವರದಿಗಾರರ ಬಳಿಯ ಮೂಲಗಳ ಮಾಹಿತಿ ಪಡೆಯುವುದು ಕಾನೂನು ಬಾಹಿರ. ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ದೂರಿದ್ದಾರೆ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ತಾಹಿರ್ ಹುಸೇನ್, ಪಿಯುಸಿಎಲ್ ಅಧ್ಯಕ್ಷ ಅರವಿಂದ್ ನಾರಾಯಣ್, ವಕೀಲರಾದ ಬಿ.ಟಿ.ವೆಂಕಟೇಶ್, ಅವನಿ ಚೋಕ್ಸಿ, ಪತ್ರಕರ್ತೆ ಸಿ.ಜಿ. ಮಂಜುಳಾ, ಪ್ರೆಸ್ಕ್ಲಬ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷ ಆನಂದ್ ಸಹಾಯ್, ಬಹುತ್ವ ಕರ್ನಾಟಕದ ವಿನಯ್ ಶ್ರೀನಿವಾಸ, ಚಿಂತಕ ಜಿ.ರಾಮಕೃಷ್ಣ, ನಗರಗೆರೆ ರಮೇಶ್ ಉಪಸ್ಥಿತರಿದ್ದರು.