ನಾಗ್ಪುರ,ಮಾ. 25: ಉತ್ತರಪ್ರದೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ನಡೆದ ತ್ರಿದಿನ ಗಂಗಾ ರ್ಯಾಲಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ವ್ಯಂಗ್ಯವಾಡಿದ್ದಾರೆ. ನಾವು ಅಲಾಹಾಬಾದ್-ವಾರಣಾಸಿ ಜಲಮಾರ್ಗವನ್ನು ತೆರೆದಿಲ್ಲದಿರುತ್ತಿದ್ದರೆ ಪ್ರಿಯಾಂಕಾ ಹೇಗೆ ಗಂಗಾ ರ್ಯಾಲಿ ನಡೆಸಲು ಸಾಧ್ಯವಿತ್ತು?. ಇದರಿಂದಾಗಿ ಅವರು ಗಂಗಾಜಲ ಕುಡಿದರು. ಯುಪಿಎ ಸರಕಾರದ ಕಾಲದಲ್ಲಾಗಿದ್ದರೆ ಪ್ರಿಯಾಂಕಾ ಗಂಗಾ ಜಲ ಕುಡಿಯುತ್ತಿದ್ದರೇ? ಅವರ ರ್ಯಾಲಿ ನಮ್ಮ ಶ್ರಮ ಯಶಸ್ವಿಯಾಗಿದೆ ಎಂಬುದನ್ನು ಸಾಬೀತುಗೊಳಿಸಿದೆ.
2020ಕ್ಕಾಗುವಾಗ ಗಂಗಾನದಿಯನ್ನು ಶೇ. 100ರಷ್ಟು ಶುದ್ಧೀಕರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಗಡ್ಕರಿ ಹೇಳಿದರು. ಗಂಗೆಯನ್ನು ಭಾರತ ಸಂಸ್ಕೃತಿ-ಪರಂಪರೆಗಳ ಭಾಗವಾಗಿ ಪುನರುದ್ಧರಿಸಲಾಗುವುದು. ಈಗ ಕ್ಲೀನ್ ಯಮುನಕ್ಕಾಗಿ ಪ್ರಯತ್ನ ನಡೆಸುತ್ತಿದ್ದೇವೆ. ಯಮುನಾದ ಕೊಳಚೆಗಳನ್ನೆಲ್ಲ ತೆರುವಗೊಳಿಸಲಾಗಿದ್ದು ಒಂದು ವರ್ಷದಲ್ಲಿ ಅದರ ಶುದ್ಧೀಕರಣ ಕಾರ್ಯ ಪೂರ್ಣಗೊಳ್ಳುವುದು ಎಂದು ಗಡ್ಕರಿ ಹೇಳಿದರು. ಪ್ರಿಯಾಂಕಾ ಗಾಂಧಿಯ ಗಂಗಾ ರ್ಯಾಲಿಗೆ ಉತ್ತರಪ್ರದೇಶದಲ್ಲಿ ಯಾವುದೇ ಚಲನೆ ಸೃಷ್ಟಿಸಲು ಸಾಧ್ಯವಾಗಿಲ್ಲ. ಬಿಜೆಪಿ ಕೇಡರ್ ಸ್ವಭಾವವನ್ನು ಹೊಂದಿದ ಪಾರ್ಟಿಯಾಗಿದೆ. ಅಂತಹ ಪಾರ್ಟಿ ಕುಟುಂಬಾಡಳಿತ ಮತ್ತು ಜಾತಿ ರಾಜಕೀಯವನ್ನು ವಿರೋಧಿಸುತ್ತದೆ ಎಂದು ಗಡ್ಕರಿ ಹೇಳಿದರು.