ಐನ್‍ಸ್ಟೀನ್‍ರ ದೇವ ಮತ್ತು ಕೆಲವು ಪ್ರಶ್ನೆಗಳು

0
1592

ಸನ್ಮಾರ್ಗ ಸಂಪಾದಕೀಯ

ದೇವನ ಕುರಿತಾದ ಜಿಜ್ಞಾಸೆ ಹೊಸತಲ್ಲ. ಗಾಡ್, ಪರಮಾತ್ಮ, ಅಲ್ಲಾಹ್, ಖುದಾ… ಹೀಗೆ ಜಗತ್ತಿನ ವಿವಿಧ ಭಾಷೆಗಳಲ್ಲಿ ವಿವಿಧ ರೂಪದಲ್ಲಿ ಕರೆಯಿಸಿಕೊಳ್ಳುವ ದೇವ, ಈ ಗೋಲದ ಅತಿ ಬಳಕೆಯ ಹೆಸರು. ದೇವನ ಹೆಸರಲ್ಲಿ ಒಂದು ಕಡೆ ಪೂಜೆ-ಪ್ರಾರ್ಥನೆಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಹತ್ಯೆ, ಮಾರಣ ಹೋಮಗಳೂ ನಡೆಯುತ್ತಿವೆ. ದೇವನನ್ನು ಒಪ್ಪುವ ಮತ್ತು ಒಪ್ಪದಿರುವವರು ಇರುವಂತೆಯೇ, ದೇವನನ್ನು ಭಯ ಪಡುವವರೂ ಮತ್ತು ಪ್ರೀತಿಸುವವರೂ ಇದ್ದಾರೆ. ಮಾನವರೇ ದೇವನಾಗಿ ಪರಿವರ್ತಿತಗೊಳ್ಳುವ ಪ್ರಸಂಗಗಳೂ ನಡೆಯುತ್ತಿವೆ. ಅವರಿಗೆ ಒಂದಷ್ಟು ಭಕ್ತರೂ ಲಭ್ಯವಾಗುತ್ತಾರೆ. ದೇವನೆಂದರೆ ಯಾರು, ಆತನ ರೂಪ, ಆಕಾರ, ಬಣ್ಣಗಳಿಂದ ಹಿಡಿದು ಏಕನೋ ಅನೇಕನೋ, ಪತ್ನಿ-ಮಕ್ಕಳಿರುವವನೋ, ಒಂಟಿಯೋ, ಜಗತ್ತನ್ನು ಸೃಷ್ಟಿಸಿದ್ದು ಆತನೆಂದಾದರೆ ಆತನನ್ನು ಸೃಷ್ಟಿಸಿದ್ದು ಯಾರು, ಆತ ಎಲ್ಲಿದ್ದಾನೆ ಇತ್ಯಾದಿ ಪ್ರಶ್ನೆಗಳು ಈ ಜಗತ್ತಿಗೆ ಹೊಸತಲ್ಲ. ಇಂಥ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕಾಗಿಯೇ ಅಸಂಖ್ಯ ವೇದಿಕೆಗಳು ನಿರ್ಮಾಣವಾಗಿವೆ. ಬರಹಗಳು ಖರ್ಚಾಗಿವೆ. ಹಾಗಂತ,

ಇದು ಈ 21ನೇ ಶತಮಾನದಲ್ಲಿ ದಿಢೀರ್ ಆಗಿ ಹುಟ್ಟಿಕೊಂಡ ಜಿಜ್ಞಾಸೆ ಏನಲ್ಲ. ಪುರಾತನ ಕಾಲದಿಂದಲೂ ದೇವ ಒಂದು ಚೋದ್ಯದ ವಸ್ತು. ದೇವನ ಬಗ್ಗೆ ಪ್ರಸಿದ್ಧ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೀನ್‍ರಿಗೂ ಕುತೂಹಲ ಇತ್ತು. ಜರ್ಮನಿಯ ತತ್ವಜ್ಞಾನಿ ಎರಿಕ್ ಗಟ್‍ಕೈಂಡ್‍ಗೆ 1954ರಲ್ಲಿ ಅವರು ಬರೆದಿದ್ದ ಒಂದೂವರೆ ಪುಟದ ಪತ್ರವನ್ನು ಕಳೆದವಾರ ಏಲಂಗೆ ಇಡಲಾಗಿತ್ತು. ಆ ಒಂದು ಪತ್ರ ಸುಮಾರು 3 ಬಿಲಿಯನ್ ಡಾಲರ್ ಗೆ ಮಾರಾಟವಾಗಬಹುದೆಂಬ ಅಂದಾಜನ್ನು ಮಾಡಲಾಗಿದೆ. ಐನ್‍ಸ್ಟೀನ್‍ರಿಗೆ ದೇವನ ಮೇಲೆ ಭಾರೀ ಭರವಸೆಯೇನೂ ಇದ್ದಿರಲಿಲ್ಲ. ದೇವ ಎಂಬುದು ಮಾನವರ ದೌರ್ಬಲ್ಯ ಎಂಬ ರೀತಿಯಲ್ಲಿ ಅವರು ವ್ಯಾಖ್ಯಾನಿಸಿದ್ದರು. ಅದೇವೇಳೆ, ತಾನು ಗುರುತಿಸಿಕೊಂಡಿರುವ ಯಹೂದಿ ಧರ್ಮದ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಲೂ ಇದ್ದರು. ಎರಿಕ್ ಗಟ್‍ಕೈಂಡ್‍ರ Choose life: The biblical call to revolt ಎಂಬ ಕೃತಿಯನ್ನು ಓದಿ, ಆ ಬಳಿಕ ಬರೆದ ಈ ಒಂದೂವರೆ ಪುಟದ ಪತ್ರದಲ್ಲಿ ‘The word God is for me nothing but the expression of and product of human weaknesses’ ಎಂದು ಅವರು ಹೇಳಿದ್ದರು.

ದೇವಾಸ್ತಿತ್ವದ ಕುರಿತಂತೆ ಐನ್‍ಸ್ಟೀನ್‍ನ ನಿಲುವನ್ನು ಎಷ್ಟು ಮಂದಿ ಒಪ್ಪುತ್ತಾರೋ ಇಲ್ಲವೋ, ಆದರೆ ಈ ಜಗತ್ತಿನ ಜನಸಂಖ್ಯೆಯನ್ನು ಆಸ್ತಿಕರು ಮತ್ತು ನಾಸ್ತಿಕರು ಎಂದು ವಿಭಜಿಸಿದರೆ ಆಸ್ತಿಕರ ಸಂಖ್ಯೆಯೇ ಹೆಚ್ಚಿದ್ದೀತು. ದೇವನನ್ನು ನಿರಾಕರಿಸುವವರಲ್ಲಿ ಈ ಜಗತ್ತಿನ ಹುಟ್ಟಿನ ಬಗ್ಗೆ ಇವತ್ತಿಗೂ ಪ್ರಬಲವಾದ ವಾದಗಳಿಲ್ಲ. ಮಾನವ ಸಂತತಿಯ ಪ್ರಾರಂಭವನ್ನು ನಿಖರವಾಗಿ ಹೇಳಿ ಬಿಡುವುದಕ್ಕೆ ಬೇಕಾದ ದಾಖಲೆಗಳಿಲ್ಲ. ಮಾನವ ವಿಕಾಸವಾದದ ತಳಿ ಎಂದು ಹೇಳಿದರೆ ಮತ್ತು ಆತ ಮೊದಲು ಮಂಗನಾಗಿದ್ದ ಎಂದು ವಾದಿಸಿದರೆ ಆ ವಾದವನ್ನು ಅಲುಗಾಡಿಸುವ ಪ್ರತಿ ಪ್ರಶ್ನೆಗಳೂ ಅಷ್ಟೇ ಪ್ರಬಲವಾಗಿ ಎದುರ್ಗೊಳ್ಳುತ್ತವೆ. ಈ ಜಗತ್ತಿನಲ್ಲಿ ಮನುಷ್ಯ ಜೀವಿ ಮಾತ್ರ ಇರುವುದಲ್ಲ. ಅಸಂಖ್ಯ ವಿಧದ ಕೀಟಗಳಿವೆ. ನದಿ ತೊರೆಗಳಿವೆ. ಸಮುದ್ರಗಳಿವೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹೇಳಿ ಮುಗಿಸಲಾಗದಷ್ಟು ಈ ಜಗತ್ತಿನಲ್ಲಿ ಜೀವ ವೈವಿಧ್ಯ ಮತ್ತು ಸೃಷ್ಟಿ ವೈಶಿಷ್ಟ್ಯಗಳಿವೆ. ಇವೆಲ್ಲವೂ ಓರ್ವ ಎಂಜಿನಿಯರ್‍ ನ ನಿಯಂತ್ರಣದಲ್ಲಿರುವಂತೆ ಯಾಕೆ ವರ್ತಿಸುತ್ತಿವೆ ಎಂಬ ಪ್ರಶ್ನೆಯನ್ನು ಆಸ್ತಿಕರು ಕೇಳುತ್ತಲೇ ಇದ್ದಾರೆ. ಬಿಗ್‍ಬ್ಯಾಂಗ್ ಥಿಯರಿಯಲ್ಲೂ ಇಂಥದ್ದೊಂದು ಪ್ರಶ್ನೆಯನ್ನು ಎತ್ತಲಾಗಿತ್ತು. ಈ ಜಗತ್ತನ್ನು ನಿಯಂತ್ರಿಸುವ ಒಂದು ಅದ್ವಿತೀಯ ಶಕ್ತಿ ಇದೆ ಎಂಬ ರೀತಿಯಲ್ಲಿ ಹೇಳಿಕೆಯನ್ನು ನೀಡಲಾಗಿತ್ತು. ಆದ್ದರಿಂದಲೇ,

ವಿಜ್ಞಾನಿಗಳೆಲ್ಲರೂ ನಾಸ್ತಿಕರಾಗದೇ ಇದ್ದಿರುವುದು. ಹೆಚ್ಚಿನ ವಿಜ್ಞಾನಿಗಳು ದೇವ ಎಂಬ ಅಜ್ಞಾತ ಶಕ್ತಿಯ ಮೇಲೆ ವಿಶ್ವಾಸವನ್ನು ತಾಳಿದವರೇ ಆಗಿದ್ದಾರೆ. ಇಲ್ಲಿರುವ ಸಮಸ್ಯೆ ಏನೆಂದರೆ, ದೇವನನ್ನು ಹೇಗೆ ಪರಿಭಾವಿಸಬೇಕು ಎಂಬುದರಲ್ಲಿ. ದೇಶದಲ್ಲಿ 120 ಕೋಟಿಗಿಂತಲೂ ಅಧಿಕ ಜನರಿದ್ದಾರೆ. ಇವರಲ್ಲಿ ಬಹುಸಂಖ್ಯಾತ ಮಂದಿ ದೇವನನ್ನು ನಿರಾಕಾರವೆಂದು ಭಾವಿಸುತ್ತಿಲ್ಲ. ಮಾತ್ರವಲ್ಲ, ದೇವನನ್ನು ಪರಿಭಾವಿಸುವಲ್ಲಿ ಈ ಗುಂಪು ಎಷ್ಟು ವಿಭಜಿಸಿ ಬಿಟ್ಟಿವೆಯೆಂದರೆ ನೂರಾರು ರೂಪದಲ್ಲಿ ದೇವನನ್ನು ಇವರೆಲ್ಲ ಕಲ್ಪಿಸಿಕೊಂಡಿದ್ದಾರೆ. ಯಾರು ಹೇಗೆಲ್ಲ ಕಲ್ಪಿಸಿಕೊಂಡಿz್ದÁರೋ ಅದಕ್ಕೆ ತಕ್ಕಂತೆ ಆ ದೇವನಿಗೆ ರೂಪವನ್ನೂ ಕೊಟ್ಟಿದ್ದಾರೆ. ಒಂದು ಕಡೆ ದೇವನೊಬ್ಬನೇ ಎನ್ನುವ ಜನರಿದ್ದರೆ, ಇನ್ನೊಂದು ಕಡೆ ಅದೇ ದೇವನಿಗೆ ಅನೇಕ ರೂಪಗಳನ್ನು ಕೊಟ್ಟು ಆರಾಧಿಸುವ ಕ್ರಮವೂ ಇಲ್ಲಿದೆ. ಪವಿತ್ರ ಕುರ್‍ಆನ್ ದೇವನನ್ನು ಪರಿಚಯಿಸಿರುವುದು ಹೀಗೆ;

ದೇವನು ಏಕೈಕನು. ಆತ ಯಾರ ಅವಲಂಬಿತನೂ ಅಲ್ಲ. ಆದರೆ ಎಲ್ಲರೂ ಆತನ ಅವಲಂಬಿತರು. ದೇವನಿಗೆ ಯಾವುದೇ ಸಂತಾನವಿಲ್ಲ. ಅವನು ಯಾರ ಸಂತಾನವೂ ಅಲ್ಲ. ಅವನಿಗೆ ಸಮಾನರು ಯಾರೂ ಇಲ್ಲ. (ಅಧ್ಯಾಯ 112, ವಚನ 1-4)

ದೇವ ನಿಜಕ್ಕೂ ಹೇಗಿರಬೇಕು, ಆತ ಹೇಗೆ ಪೂಜೆಗೊಳ್ಳಬೇಕು, ಆತನ ಸಂದೇಶ ಏನು, ಮನುಷ್ಯರನ್ನು ಆತ ಸೃಷ್ಟಿಸಿರುವುದು ನಿಜವೇ ಎಂದಾದರೆ, ಯಾಕೆ ಸೃಷ್ಟಿಸಿದ್ದಾನೆ, ಬರಿದೇ ಸೃಷ್ಟಿಸಿ ಜಗಳಾಡಿಸುವುದು ಆತನ ಉದ್ದೇಶವೇ? ಅಲ್ಲ ಎಂದಾದರೆ, ಆ ಉದ್ದೇಶ ಏನು? ಆತ ಏನನ್ನು ಜನರಿಂದ ಬಯಸುತ್ತಿದ್ದಾನೆ ಇತ್ಯಾದಿಗಳು ಖಂಡಿತ ಉದ್ಧಟತನ ಪ್ರಶ್ನೆಗಳಾಗಲಾರದು. ಈ ಜಗತ್ತು ತನ್ನಿಂತಾನೇ ಸೃಷ್ಟಿಯಾಗಿದೆ ಮತ್ತು ಇದಕ್ಕೆ ಸೃಷ್ಟಿಕರ್ತನೋರ್ವನಿಲ್ಲ ಎಂಬ ವಾದವನ್ನು ಒಪ್ಪದವರೇ ಈ ಜಗತ್ತಿನಲ್ಲಿ ಅಧಿಕ ಇರುವಾಗ ಇವರೆಲ್ಲ ಇಂಥದ್ದೊಂದು ಪ್ರಶ್ನೆಯನ್ನು ತಮ್ಮೊಳಗೆ ಕೇಳಿಕೊಳ್ಳಬೇಕು. ನಾವೇಕೆ ಬದುಕುತ್ತಿದ್ದೇವೆ ಮತ್ತು ತಿಂದುಂಡು ಕೊನೆಗೊಂದು ದಿನ ಸಾಯುವುದೇ ತಮ್ಮ ಬದುಕಿನ ಉದ್ದೇಶವೇ ಎಂದೊಮ್ಮೆ ಪ್ರಶ್ನಿಸಿಕೊಳ್ಳಬೇಕು. ಇಂಥದ್ದೊಂದು ಬದುಕಿಗಾಗಿ ದೇವನು ನಮ್ಮನ್ನು ಸೃಷ್ಟಿಸಬೇಕಿತ್ತೇ?

ಹುಟ್ಟಿದ ತಪ್ಪಿಗೆ ಬದುಕುವ ಮತ್ತು ಬದುಕಿದ ತಪ್ಪಿಗೆ ಸಾಯುವ ಪ್ರಕ್ರಿಯೆಯೊಂದು ಪ್ರಾಣಿವರ್ಗದಲ್ಲಿದೆ. ಅವು ಹುಟ್ಟುತ್ತವೆ, ಬದುಕುತ್ತವೆ ಮತ್ತು ಒಂದು ದಿನ ಸಾಯುತ್ತವೆ. ಅವುಗಳ ಮಿತಿ ಅದು. ಆದರೆ ಮನುಷ್ಯನೂ ಹಾಗೆಯೇ? ಪ್ರಾಣಿ ವರ್ಗವನ್ನು ಮೀರಿದ ಮತ್ತು ಅವುಗಳನ್ನು ತನಗೆ ಬೇಕಾದಂತೆ ಪಳಗಿಸುವ ಸಾಮಥ್ರ್ಯವನ್ನು ಪಡೆದಿರುವ ಆತನ ಬದುಕೂ ಅದರಂತೆಯೇ ಆಗಬೇಕೇ? ಓರ್ವ ವ್ಯಕ್ತಿ ಇನ್ನೋರ್ವ ವ್ಯಕ್ತಿಯ ಜೊತೆ ಯಾವ ಬಗೆಯ ಸಂಬಂಧವನ್ನು ಬೆಳೆಸಬೇಕು? ಹೇಗೆ ವರ್ತಿಸಬೇಕು? ನೆರೆಕರೆಯಲ್ಲಿ ವಾಸಿಸುವವರ ದಿನಚರಿಗಳು ಹೇಗಿರಬೇಕು? ನಿಜಕ್ಕೂ ದೇವನು ಹೇಗಿರಬೇಕು ಮತ್ತು ನಾವು ಪೂಜಿಸುವ ದೇವನು ಹೇಗಿದ್ದಾನೆ? ನಾವು ದೇವನನ್ನು ಗ್ರಹಿಸಿಕೊಂಡದ್ದು ಯಾವ ಮೂಲದಿಂದ? ನನ್ನ ಗ್ರಹಿಕೆ ಸರಿಯೇ? ಇತ್ಯಾದಿ ಪ್ರಶ್ನೆಗಳು ಮಾನವರಲ್ಲಿ ಮೂಡಬೇಕಾಗಿರುವುದು ಪ್ರಕೃತಿ ಸಹಜ ಬೇಡಿಕೆ.

ನಮ್ಮೆದುರೇ ಮಂಗಗಳ ಹುಟ್ಟು, ಬೆಳವಣಿಗೆ, ಸಾವು ಸಂಭವಿಸುತ್ತಿರುತ್ತವೆ. ಮಂಗಚೇಷ್ಟೆಯ ನೂರಾರು ವರದಿಗಳನ್ನು ಪತ್ರಿಕೆ, ಟಿ.ವಿ. ಮಾಧ್ಯಮಗಳಲ್ಲಿ ನಾವು ಓದಿ ಆನಂದಿಸುತ್ತಲೂ ಇರುತ್ತೇವೆ. ಮಂಗನಿಂದ ಮಾನವ ಅನ್ನುವ ವಾದವನ್ನು ಮತ್ತೆ ಮತ್ತೆ ನಮ್ಮೊಳಗೆ ಕೆದಕಿ ಕೆದಕಿ ಜಿಜ್ಞಾಸೆಗೆ ಒಡ್ಡುವ ಮತ್ತು ಆ ವಾದಕ್ಕೆ ಪ್ರತಿ ವಾದವನ್ನು ಹುಟ್ಟು ಹಾಕುವುದಕ್ಕೆ ಪ್ರೇರಣೆ ಕೊಡುವ ಪ್ರಕೃತಿ ವೈಚಿತ್ರ್ಯಗಳಿವು. ನಿಜವಾಗಿ, ಮನುಷ್ಯ ಮಂಗನಿಂದಲ್ಲ ಮತ್ತು ಮನುಷ್ಯನ ಹುಟ್ಟಿನ ಹಿಂದೆ ಉದ್ದೇಶ ಮತ್ತು ಕಾರಣಗಳಿವೆ ಎಂಬುದು ನಮ್ಮ ವಾದವೆಂದಾದರೆ ಆ ಉದ್ದೇಶ ಮತ್ತು ಗುರಿಗಳನ್ನೊಮ್ಮೆ ಹುಡುಕುವ ಪ್ರಯತ್ನವನ್ನು ನಾವು ಮಾಡಬೇಕು. ಬದುಕು-ಸಾವು ಮತ್ತು ಸಾವಿನಾಚೆಯ ಬದುಕಿನ ಕುರಿತಾಗಿ ನಮ್ಮನ್ನು ನಾವು ಚಿಂತನೆಗೆ ಹಚ್ಚಿಕೊಳ್ಳಬೇಕು. ಇಂಥ ಚಿಂತನೆಗೆ ದೇವನು ಸಿಕ್ಕಾನು ಮತ್ತು ಆತನೇ ನಿಜವಾದ ದೇವ.

ಐನ್‍ಸ್ಟೀನ್ ಈ ಬಗೆಯ ಹುಡುಕಾಟ ನಡೆಸಿಲ್ಲವೇನೋ.