ಮಂಗಳೂರಿನ ಹರ್ಷಿತಾಗೆ ಕತಾರ್‌ನಲ್ಲಿ ಚಿನ್ನದ ಪದಕ

0
746

ಸನ್ಮಾರ್ಗ ವಾರ್ತೆ

ದೋಹ: ಸ್ತನದ ಕ್ಯಾನ್ಸರ್ ಸಂಬಂಧಿಸಿದ ಸಂಶೋಧನೆಯಲ್ಲಿ ಕತಾರ್ ವಿಶ್ವ ವಿದ್ಯಾನಿಲಯದಿಂದ ಮಂಗಳೂರಿನ ಹರ್ಷಿತಾ ಶೈಲೇಶ್ ಪಿಎಚ್‍ಡಿಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಸ್ತನ ಕ್ಯಾನ್ಸರ್ ಕಡಿಮೆ ಮಾಡಲು ಹರಡದಂತೆ ಮಾಡಲು ಚಿಕಿತ್ಸೆ ಕ್ಷೇತ್ರದಲ್ಲಿ ಅಳವಡಿಸಬಹುದಾದ ಹೊಸ ರೀತಿಗಳ ಕುರಿತು ಜೀವಶಾಸ್ತ್ರ-ಪರಿಸರ ವಿಜ್ಞಾನ ವಿಭಾಗದಲ್ಲಿ ಹರ್ಷಿತಾ ಪಿಎಚ್‍ಡಿ ಸಂಪಾದಿಸಿದ್ದಾರೆ. ಕತಾರ್ ವಿಶ್ವಾವಿದ್ಯಾನಿಲಯದಿಂದ ಚಿನ್ನದ ಪದಕದೊಂದಿಗೆ ಇವರು ಪಿಎಚ್‍ಡಿ ಗಳಿಸಿದ್ದು ವಿಶೇಷ ಸಾಧನೆಯಾಗಿದೆ.

ಪ್ರೊ. ಸೈದ್ ಸೈಫ್‍ರ ಅಧೀನದಲ್ಲಿ ಇವರು ಸಂಶೋಧನೆ ನೆಡೆಸಿದ್ದರು. ಕೊರೋನ ಸುರಕ್ಷೆ ಮಾನದಂಡಗಳನ್ನು ಪಾಲಿಸಿ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಕತರ್ ಅಮೀರ್‌ರ ಪತ್ನಿ ಶೈಖ ಜವಾಹರ್ ಬಿನ್ತ್ ಹಮ್ದ್ ಬಿನ್ ಸುಹೈಂ ಅಲ್ತಾನಿಯವರ ಕೈಯಿಂದ ಹರ್ಷಿತಾ ಚಿನ್ನದ ಪದಕ ಸ್ವೀಕರಿಸಿದ್ದಾರೆ.

ಹರ್ಷಿತಾ ಬಯೊಟೆಕ್ನಾಲಜಿಯಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕದೊಂದಿಗೆ ಪದವಿ ಗಳಿಸಿದ್ದರು. ಕತಾರ್‌ನ ಕರ್ನಾಟಕ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‍ನಲ್ಲಿ ಜಯಗಳಿಸಿದ್ದಾರೆ. ಟಿ.ಕೆ ರಘು ವೀರ್ ಮತ್ತು ಪ್ರಮೀಳಾ ದಂಪತಿಯ ಪುತ್ರಿಯಾಗಿದ್ದಾರೆ‌. ಹರ್ಷಿತಾರ ಪತಿ ಶೈಲೇಶ್‍‌ಕುಮಾರ್‌ರವರು ಅಬ್ದುಲ್ಲ ಅಬ್ದುಲ್‌ಗನಿ ಆಂಡ್ ಬ್ರದರ್ಸ್ ಟೊಯೊಟ ಗ್ರೂಪ್‍ನಲ್ಲಿ ಸೇಲ್ಸ್ ಸೂಪರ್ ವೈಸರ್ ಆಗಿದ್ದಾರೆ. ಹರ್ಷಿತಾ, ಶೈಲೇಶ್ ದಂಪತಿಗಳಿಗೆ ಬಿರ್ಲಾ ಪಬ್ಲಿಕ್ ಸ್ಕೂಲ್‍ನಲ್ಲಿ ಆರನೆಯ ತರಗತಿಯಲ್ಲಿ ಕಲಿಯುವ ಆರಾಧ್ಯ ಎಂಬ ಪುತ್ರಿಯಿದ್ದಾಳೆ.