ಸನ್ಮಾರ್ಗ ವಾರ್ತೆ
ಮುಂಬೈ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರಕಾರ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಈ ನಡುವೆ ಪತ್ರಚಾಲ್ ನಿರ್ಮಾಣಕ್ಕೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಮಂಗಳವಾರ ಹಾಜರಾಗುವಂತೆ ಶಿವಸೇನೆ ನಾಯಕ, ಸಂಸದ ಸಂಜಯ್ ರಾವತ್ರಿಗೆ ಇಡಿ ನೋಟಿಸು ಕಳುಹಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಂಜಯ್ ರಾವತ್ ತನ್ನ ಬಾಯಿ ಮುಚ್ಚಿಸುವ ಯತ್ನ ಇದೆಂದು ಹೇಳಿದರು.
ಪ್ರಕರಣದಲ್ಲಿ ಸಂಜಯ್ ರಾವತ್ರ ನಿಕಟವರ್ತಿ ಪ್ರವೀಣ್ ರಾವತ್ರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ನಂತರ ರಾವತ್ರವರ ಪತ್ನಿ ವರ್ಷ ರಾವತ್ರಿಗೆ ಸೇರಿದ 11.5 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿತ್ತು.
ಇಡಿ, ಸಿಬಿಐಗೆ ಹೆದರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಹೂಡಿದ್ದಾಗಿ ಉದ್ಧವ್ ಠಾಕ್ರೆ ಆರೋಪಿಸಿದ್ದರು. ಬಿಜೆಪಿಯಲ್ಲಿ ತಮ್ಮ ಭಕ್ತಿಯನ್ನು ಇಡಿ ತೋರಿಸುತ್ತಿದೆ ಎಂದು ಶಿವಸೇನೆಯ ನಾಯಕಿ ಪ್ರಿಯಾಂಕ ಚತುರ್ವೇದಿ ಹೇಳಿದರು. ಆರ್ಥಿಕ ಅವ್ಯವಹಾರ ದಾಖಲೆ ಸಹಿತ ಹೊರಬರುವಾಗ ವಿಚಾರಣೆ ಸಹಜವಾಗಿ ನಡೆಯುತ್ತದೆ. ಇಡಿ ಒಂದು ದಿನದಲ್ಲಿ ಕ್ರಮ ಜರಗಿಸುವುದಿಲ್ಲ ಎಂದು ಬಿಜೆಪಿ ಶಾಸಕ ರಾಮ ಕದಂ ಹೇಳಿದರು.
ಪ್ರತಿಪಕ್ಷಗಳನ್ನು ಗುರಿಯಾಗಿಟ್ಟು ಸರಕಾರವನ್ನು ಬುಡಮೇಲುಗೊಳಿಸಲು ಬಿಜೆಪಿ ಕೇಂದ್ರ ಏಜೆನ್ಸಿಗಳನ್ನು ಬಹಿರಂಗವಾಗಿ ಉಪಯೋಗಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.